ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ವಿಶ್ವಾಸ ಮತದ ಅಗ್ನಿಪರೀಕ್ಷೆ ಉತ್ತೀರ್ಣರಾದ ಬೆನ್ನಲ್ಲೇ ಸರ್ಕಾರದ ಆಡಳಿತ ಯಂತ್ರಕ್ಕೆ ಚರುಕು ಮುಟ್ಟಿಸುವ ಸಂಬಂಧ ಮೇಜರ್ ಸರ್ಜರಿ ನಡೆಸಲು ಪೂರ್ವಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಬೆಂಗಳೂರು : ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ವಿಶ್ವಾಸ ಮತದ ಅಗ್ನಿಪರೀಕ್ಷೆ ಉತ್ತೀರ್ಣರಾದ ಬೆನ್ನಲ್ಲೇ ಸರ್ಕಾರದ ಆಡಳಿತ ಯಂತ್ರಕ್ಕೆ ಚರುಕು ಮುಟ್ಟಿಸುವ ಸಂಬಂಧ ಮೇಜರ್ ಸರ್ಜರಿ ನಡೆಸಲು ಪೂರ್ವಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಜತೆ ಚರ್ಚಿಸಿ ಆಡಳಿತ ವರ್ಗಕ್ಕೆ ಚುರುಕು ಮುಟ್ಟಿಸಲಿದ್ದಾರೆ. ಸರ್ಕಾರ ಸುಸೂತ್ರವಾಗಿ ನಡೆಯುವ ಸಲುವಾಗಿ ತಮಗೆ ಆಪ್ತರಾದ ಅಧಿಕಾರಿಗಳನ್ನು ಪ್ರಮುಖ ಹುದ್ದೆಗಳಿಗೆ ವರ್ಗಾವಣೆ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. 

Add Asianetnews Kannada as a Preferred SourcegooglePreferred

ಬಿ.ಎಸ್.ಯಡಿಯೂರಪ್ಪ ಅವರು ಬಹುಮತ ಇಲ್ಲದಿದ್ದರೂ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ ಮುಖ್ಯಮಂತ್ರಿ ಕಾರ್ಯದರ್ಶಿ ಹಾಗೂ ಗುಪ್ತಚರ ದಳ ಸೇರಿದಂತೆ ಪ್ರಮುಖ ಹುದ್ದೆಗಳಿಗೆ ತಮ್ಮ ಆಪ್ತರಾಗಿರುವ ಅಧಿಕಾರಿ ಗಳನ್ನು ಹಾಕಿಕೊಂಡಿದ್ದರು. ಬಳಿಕ ಮೂರೇ ದಿನಗಳಲ್ಲಿ ಅವರು ವಿಶ್ವಾಸಮತ ಸಾಬೀತು ಪಡಿಸಲು ವಿಫಲರಾಗಿ ಸಿಎಂ ಹುದ್ದೆಯಿಂದ ಕೆಳಗಿಳಿಯಬೇಕಾಯಿತು. 

ಇದೀಗ ಯಡಿಯೂರಪ್ಪ ಅವರ ನೇಮಕಗಳನ್ನು ರದ್ದುಪಡಿಸಿ ತಮಗೆ ಬೇಕಾದಂತೆ ಆಡಳಿತ ಯಂತ್ರವನ್ನು ಪುನರ್‌ರಚಿಸಿಕೊಳ್ಳಲು ಕುಮಾರಸ್ವಾಮಿ ಮುಂದಾಗಿದ್ದಾರೆ ಎನ್ನಲಾಗಿದೆ. ಇದಕ್ಕಾಗಿ ಪ್ರಮುಖ ಹುದ್ದೆ ಗಳಲ್ಲಿರುವ ಐಎಎಸ್, ಐಪಿಎಸ್, ಐಎಫ್‌ಎಸ್ ಸೇರಿ ದಂತೆ ಪ್ರಮುಖ ಇಲಾಖೆಗಳ ಅಧಿಕಾರಿಗಳ ಪಟ್ಟಿಯನ್ನು ಸಿದ್ಧಪಡಿಸಿಕೊಂಡಿ ದ್ದಾರೆ. ಇವರನ್ನು ಹಂತ-ಹಂತವಾಗಿ ಸೂಕ್ತ ಸ್ಥಾನಗಳಿಗೆ ವರ್ಗಾವಣೆ ಮಾಡಲಿದ್ದಾರೆ.

ಮುಂದಿನ ಐದು ವರ್ಷಗಳ ಸರ್ಕಾರ ಮುಳ್ಳಿನ ತಂತಿಯ ಮೇಲಿನ ನಡಿಗೆಯಂತಿರಲಿದೆ. ಹೀಗಾಗಿ ಸರ್ಕಾರ ಯಶಸ್ಸಿಗೆ ಅಧಿಕಾರಿಗಳ ಪಾತ್ರ ಮುಖ್ಯ. ಹೀಗಾಗಿ ಎಚ್.ಡಿ. ಕುಮಾರಸ್ವಾಮಿ ಅವರ ಮೊದಲ ಆದ್ಯತೆ ಅಧಿಕಾರಿಗಳ ವರ್ಗ ಎಂದು ತಿಳಿದು ಬಂದಿದೆ.