ಮಹದಾಯಿ ನದಿ ನೀರು ಹಂಚಿಕೆ ವಿಚಾರ : ಫೆಬ್ರವರಿ 8ಕ್ಕೆ ವಿಚಾರಣೆ ಮುಂದೂಡಿಕೆ
ಫೆಬ್ರವರಿ 13 ರೊಳಗೆ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ಮಾಡುವುದರ ಬಗ್ಗೆ ತಿಳಿಸುವುದಾಗಿ ಟ್ರಿಬ್ಯುನಲ್ ತಿಳಿಸಿತು
ನವದೆಹಲಿ(ಫೆ.06): ಮಹದಾಯಿ ನದಿ ನೀರು ಹಂಚಿಕೆ ವಿಚಾರಣೆಯನ್ನು ನ್ಯಾಯಾಧಿಕರಣ ಫೆ.08ಕ್ಕೆ ಮುಂದೂಡಿದೆ.
ಇಂದು ನಡೆದ ವಿಚಾರಣೆಯಲ್ಲಿ ನ್ಯಾಯಾಂಗ ನಿಂದನೆ ಅರ್ಜಿಯನ್ನು ಟ್ರಿಬ್ಯುನಲ್ ವಿಚಾರಣೆ ನಡೆಸಲು ಸಾಧ್ಯವಿಲ್ಲ.ಸುಪ್ರೀಂಕೋರ್ಟ್ ನಡೆಸಬೇಕು ಎಂದು ಕರ್ನಾಟಕ ಸರ್ಕಾರ ಹೇಳಿಕೆ ನೀಡಿತು. ಗೋವಾ ಪರ ವಕೀಲರು ನ್ಯಾಯಾಂಗ ನಿಂದನೆ ಅರ್ಜಿಯನ್ನು ಪುನರ್ ಪರಿಶೀಲಿಸುವುದಾಗಿ ಮಾಹಿತಿ ನೀಡಿರುವುದರಿಂದ ಫೆಬ್ರವರಿ 13 ರೊಳಗೆ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ಮಾಡುವುದರ ಬಗ್ಗೆ ತಿಳಿಸುವುದಾಗಿ ಟ್ರಿಬ್ಯುನಲ್ ಹೇಳಿದೆ.
ನಾರಿಮನ್ ಬದಲು ಮತ್ತೊಬ್ಬರು ವಾದ
ಗೋವಾ ಸಲ್ಲಿಸಿರುವ ನ್ಯಾಯಾಂಗ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯದ ಪರವಾದ ಹಿರಿಯ ವಕೀಲ ಫಾಲಿ ನಾರಿಮನ್ ಮಂಡಿಸಬೇಕಾಗಿತ್ತು. ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿರುವುದರಿಂದ ಅವರ ಬದಲಿಗೆ ಅಶೋಕ್ ದೇಸಾಯಿ ಹಾಗೂ ಇಂದಿರಾ ಜೈಸಿಂಗ ಅವರು ವಾದ ಮಂಡಿಸುತ್ತಿದ್ದಾರೆ. ಅಂತಿಮ ಹಂತದ ವಿಚಾರಣೆ ಪೂರ್ಣಗೊಳಿಸಿದ ಬಳಿಕ ಆಗಸ್ಟ್ ಒಳಗಾಗಿ ತೀರ್ಪು ಪ್ರಕಟವಾಗಲಿದೆ.