ಪ್ರಧಾನಿ ನರೇಂದ್ರ ಮೋದಿ ಹಾಗೂ ಸುಮಲತಾ ಅಂಬರೀಶ್ ಅಭೂತಪೂರ್ವ ವಿಜಯಗಳಿಸಿದ್ದು ಈ ಸಂಬಂಧ ಉಪೇಂದ್ರ ಅಭಿನಂದನೆ ತಿಳಿಸಿದ್ದಾರೆ. 

ಬೆಂಗಳೂರು :  ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಅಭೂತಪೂರ್ವ ಗೆಲುವಿಗೆ ನಟ ಹಾಗೂ ಉತ್ತಮ ಪ್ರಜಾಕೀಯ ಪಕ್ಷದ ಸ್ಥಾಪಕ ಉಪೇಂದ್ರ ಅಭಿನಂದನೆ ಸಲ್ಲಿಸಿದ್ದಾರೆ.

Add Asianetnews Kannada as a Preferred SourcegooglePreferred

‘ಮೋದಿ ಅವರು ಮತ್ತೆ ಗೆಲುವು ಸಾಧಿಸಿರುವುದು ಖುಷಿ ತಂದಿದೆ. ಮುಂದಿನ ಐದು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮತ್ತಷ್ಟು ಸಾಧನೆ ಮಾಡುತ್ತಾರೆಂದು ಎದುರು ನೋಡುತ್ತಿದ್ದೇನೆ. ಸ್ಮಾರ್ಟ್‌ ಸಿಟಿಯಂತಹ ದೀರ್ಘಕಾಲದ ಯೋಜನೆಗಳು ಯಶಸ್ವಿ ಆಗಿ ಜಾರಿಗೆ ಬರಬಹುದೆನ್ನುವ ಭರವಸೆಯಿದೆ. ಅವರು ಸೇರಿದಂತೆ ಅವರ ನೇತೃತ್ವದ ಎನ್‌ಡಿಎ ಮೈತ್ರಿಕೂಟಕ್ಕೆ ಒಳ್ಳೆಯದಾಗಲಿ’ ಎಂದು ಉಪೇಂದ್ರ ಹೇಳಿದ್ದಾರೆ.

ತಮ್ಮ ಹೊಸ ಚಿತ್ರ ‘ಬುದ್ಧಿವಂತ 2’ ಮುಹೂರ್ತದ ನಂತರ ಶುಕ್ರವಾರ ನಗರದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ‘ಲೋಕಸಭೆ ಚುನಾವಣೆಯಲ್ಲಿ ಪ್ರಜಾಕೀಯ ಪಕ್ಷ ಮಾಡಿರುವ ಸಾಧನೆ ಖುಷಿ ತಂದಿದೆ. ಕಡಿಮೆ ಅವಧಿಯಲ್ಲಿಯೇ ನಮ್ಮ ಪಕ್ಷ ಜನರ ಗಮನ ಸೆಳೆದಿದೆ. ರಾಜಕೀಯದಲ್ಲಿ ನಾವಿನ್ನೂ ಮೊದಲ ಹೆಜ್ಜೆ ಇಡುತ್ತಿದ್ದೇವೆ. ಆದರೂ ಜನರನ್ನು ನಮ್ಮ ಪಕ್ಷವನ್ನು ಗುರುತಿಸಿದ್ದಾರೆ. ಭವಿಷ್ಯದಲ್ಲಿ ದೊಡ್ಡ ಮಟ್ಟದಲ್ಲಿ ಪಕ್ಷಕ್ಕೆ ಜನರ ಆಶೀರ್ವಾದ ಸಿಗುತ್ತದೆ ಎನ್ನುವ ಭರವಸೆಯಿದೆ’ ಎಂದು ಉಪೇಂದ್ರ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.