ಲಿಂಗಾಯತ ಪ್ರತ್ಯೇಕ ಧರ್ಮದ ಬೇಡಿಕೆ ಕರ್ನಾಟಕದಿಂದ ಬಂದಿಲ್ಲ : ನಖ್ವಿ
ಲಿಂಗಾಯತ ಸಮುದಾಯಕ್ಕೆ ಧಾರ್ಮಿಕ ಅಲ್ಪಸಂಖ್ಯಾತ ಸ್ಥಾನಮಾನ ಕೋರುವ ಕರ್ನಾಟಕ ಸರ್ಕಾರದ ಪ್ರಸ್ತಾಪ ಗೃಹ ಸಚಿವಾಲಯವನ್ನು ತಲುಪಿದೆ ಎಂದು ಕೇಂದ್ರ ಸರ್ಕಾರ ಬುಧವಾರ ಲೋಕಸಭೆಗೆ ಮಾಹಿತಿ ನೀಡಿದೆ.
ನವದೆಹಲಿ: ಲಿಂಗಾಯತ ಸಮುದಾಯಕ್ಕೆ ಧಾರ್ಮಿಕ ಅಲ್ಪಸಂಖ್ಯಾತ ಸ್ಥಾನಮಾನ ಕೋರುವ ಕರ್ನಾಟಕ ಸರ್ಕಾರದ ಪ್ರಸ್ತಾಪ ಗೃಹ ಸಚಿವಾಲಯವನ್ನು ತಲುಪಿದೆ ಎಂದು ಕೇಂದ್ರ ಸರ್ಕಾರ ಬುಧವಾರ ಲೋಕಸಭೆಗೆ ಮಾಹಿತಿ ನೀಡಿದೆ.
ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಈ ಬಗ್ಗೆ ಲಿಖಿತ ಉತ್ತರ ನೀಡಿದ್ದಾರೆ. ಆದರೆ ಲಿಂಗಾಯತ ಸಮುದಾಯಕ್ಕೆ ಸ್ವತಂತ್ರ ಧರ್ಮದ ಸ್ಥಾನಮಾನದ ಮಾನ್ಯತೆ ನೀಡುವಂತೆ ಕರ್ನಾಟಕ ದಿಂದ ಯಾವುದೇ ಮನವಿ ಸಚಿವಾಲಯಕ್ಕೆ ಬಂದಿಲ್ಲ ಎಂದು ಸಚಿವ ನಖ್ವಿ ಸ್ಪಷ್ಟಪಡಿಸಿದ್ದಾರೆ.
ಕರ್ನಾಟಕ ಸರ್ಕಾರದ ಅಲ್ಪಸಂಖ್ಯಾತ ಅಭಿವೃದ್ಧಿ ಇಲಾಖೆ ಮಾ.22ರಂದು ಲಿಂಗಾಯತ ಮತ್ತು ವೀರಶೈವ ಲಿಂಗಾಯತರನ್ನು ಧಾರ್ಮಿಕ ಅಲ್ಪಸಂಖ್ಯಾತರೆಂದು ಗುರುತಿಸಿ ಅಧಿಸೂಚನೆ ಹೊರಡಿಸಿ, ಬಳಿಕ ಈ ಕುರಿತ ಸುತ್ತೋಲೆಯನ್ನು ಕೇಂದ್ರಕ್ಕೆ ರವಾನಿಸಿತ್ತು. ಇದೇ ವೇಳೆ ಲಿಂಗಾಯತ ಹಿಂದೂಗಳ ಒಂದು ಪಂಥ, ಅದು ಸ್ವತಂತ್ರ ಧರ್ಮವಲ್ಲ. ಹೀಗಾಗಿ 2011ರ ಜನಗಣತಿಯಲ್ಲಿ ವೀರಶೈವ ಲಿಂಗಾಯತರಿಗೆ ಪ್ರತ್ಯೇಕ ಕಾಲಂ ನಮೂದಿಸಲು ನಿರ್ದೇಶಿಸಿರಲಿಲ್ಲ.
ಹಿಂದೂ ಹೊರತುಪಡಿಸಿ ಇತರ ಧರ್ಮಗಳ ಕಾಲಂನಲ್ಲಿ ವೀರಶೈವ ಲಿಂಗಾಯತರನ್ನು ಗುರುತಿಸಿದ್ದರೆ, ವೀರಶೈವ ಲಿಂಗಾಯತ ಪಂಥ ಪಾಲಿಸುವ ಎಲ್ಲ ಪರಿಶಿಷ್ಟ ಜಾತಿಗಳು ತಮ್ಮ ಸಾಂವಿಧಾನಿಕ ಮಾನ್ಯತೆ ಕಳೆದುಕೊಳ್ಳುತ್ತವೆ ಎಂಬ ರಿಜಿಸ್ಟ್ರಾರ್ ಜನರಲ್ರ 2013ರ ಉಲ್ಲೇಖವನ್ನು ಗೃಹ ಸಚಿವಾಲಯಕ್ಕೆ ತಲುಪಿಸಲಾಗಿದೆ ಎಂದು ನಖ್ವಿ ತಿಳಿಸಿದ್ದಾರೆ.