ಮಾಲ್ಡೀವ್ಸ್ ವಿದ್ಯಾರ್ಥಿಯಿಂದ ದಾಳಿಗೆ ಲಷ್ಕರ್‌ ಸಂಚು | ಇಸ್ರೋ ಕ್ಯಾಂಪಸ್‌, ವೀಸಾ ಕಚೇರಿಯೂ ಇತ್ತು ಉಗ್ರರ ನಕ್ಷೆಯಲ್ಲಿ

ಕನ್ನಡಪ್ರಭ ವಿಶೇಷ 3

ಬೆಂಗಳೂರು(ಏ. 01): ಐಐಎಸ್‌'ಸಿ ದಾಳಿಗೆ ನೇಪಾಳದಿಂದ ಬಂದಿದ್ದ ದಾಳಿಕೋರನ ನಿಜ ನಾಮಧೇಯ ಅಬು ಹಮ್ಜಾ ಎಂಬುದು ಸಬಾವುದ್ದೀನ್‌ ಪಾಕಿಸ್ತಾನಕ್ಕೆ ಭೇಟಿ ನೀಡಿದ ವೇಳೆ ಗೊತ್ತಾಗಿತ್ತು. ಇಸ್ಲಾಮಾಬಾದ್‌ನ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಸಬಾವುದ್ದೀನ್‌ನನ್ನು ಮುಝಮಿಲ್‌ನ ಮನೆಗೆ ಅಮೀರ್‌ ಕರೆದುಕೊಂಡು ಹೋಗಲು ಬಂದಿದ್ದ. ಆಗ ನನಗೆ ಕರೆ ಮಾಡಿದ ಆತ, ಅಬು ಹಮ್ಜಾ ಎಂದು ಪರಿಚಯಿಸಿ​ಕೊಂಡ. ನನಗೆ ಆತನ ಧ್ವನಿ ಗೊತ್ತಾಯಿತು. ಬಳಿಕ ಕಾರಿನಲ್ಲಿ ನನ್ನ ಹೆಸರು ಅಮೀರ್‌ ಅಲ್ಲ, ಅಬು ಹಮ್ಜಾ ಎಂದು ತಿಳಿಸಿದ್ದಾಗಿ ಸಬಾವುದ್ದೀನ್‌ ಹೇಳಿದ್ದಾನೆ.

ಬಾಂಗ್ಲಾದೇಶಕ್ಕೆ ಎರಡು ಬಾರಿ ಗಡಿ ದಾಟಿಸಿದ್ದ ಹಬೀಬ್‌ ಮಿಯಾ (ಇತ್ತೀಚೆಗೆ ತ್ರಿಪುರದ ಅಗರ್ತಲಾದಲ್ಲಿ ಸಿಸಿಬಿ ಪೊಲೀಸರಿಂದ ಬಂಧಿತನಾದ ಆರೋಪಿ), ಮೂರನೇ ಬಾರಿಗೆ ಗಡಿ ದಾಟಿಸಲು ಸಬಾವುದ್ದೀನ್‌ನ ಬೇಡಿಕೆಯನ್ನು ತಿರಸ್ಕರಿಸಿದ್ದ ಎಂದು ಗೊತ್ತಾಗಿದೆ. 2006ರಲ್ಲಿ ಪಾಕಿಸ್ತಾನಕ್ಕೆ ತೆರಳಿ ಎಲ್‌'ಇಟಿ ಸಂಘಟನೆಯ ನಾಯಕರನ್ನು ಭೇಟಿಯಾಗಿ ಅಲ್ಲಿಂದ ಮರಳುವಾಗ ಗಡಿ ದಾಟಲು ಕಷ್ಟವಾಯಿತು. ಬಾಂಗ್ಲಾ ಗಡಿ ದಾಟಿಸಲು ಹಬೀಬ್‌ ಮಿಯಾ ನಿರಾಕರಿಸಿದ. ಕೊನೆಗೆ ಜಹಂಗೀರ್‌ ಎಂಬಾತನ ನೆರವು ಪಡೆದು ಭಾರತಕ್ಕೆ ಮರಳಿದೆ ಎಂದು ಸಬಾವುದ್ದೀನ್‌ ಹೇಳಿದ್ದಾನೆ.

ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಮೇಲಿನ ದಾಳಿಯನ್ನು ಪೂರ್ವನಿಗದಿತ ಸಂಚಿನಂತೆ ಯಶಸ್ವಿಗೊಳಿಸಿದ ಪಾಕಿಸ್ತಾನದ ಮೂಲದ ಲಷ್ಕರ್‌- ಎ-ತೊಯ್ಬಾ(ಎಲ್‌ಇಟಿ) ಭಯೋತ್ಪಾದಕ ಸಂಘಟನೆ, ರಾಜಧಾನಿಯ ಪೊಲೀಸ್‌ ಆಯುಕ್ತರ ಕಚೇರಿಗೆ ನುಗ್ಗಿ ರಕ್ತಪಾತ ಹರಿಸುವ ಮತ್ತೊಂದು ಭೀಕರ ವಿಧ್ವಂಸಕ ಕೃತ್ಯಕ್ಕೆ ಮುಂದಾ ಗಿತ್ತು ಎಂಬ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.

ಬೆಂಗಳೂರಿನಲ್ಲಿ ಮತ್ತೊಂದು ದುಷ್ಕೃತ್ಯ ನಡೆಸಲು ‘ಐಐಎಸ್‌ಸಿ ಮಾದರಿ'ಯಲ್ಲಿ ಸಂಚು ಹೆಣೆದಿದ್ದ ಎಲ್‌ಇಟಿ, ಇದಕ್ಕಾಗಿ ಪಾಕಿಸ್ತಾನದಲ್ಲಿ ಉಗ್ರರ ತರಬೇತಿ ಶಿಬಿರದಲ್ಲಿ ತರಬೇತಿಗೊಳಿಸಿದ್ದ ಮಾಲ್ಡೀವ್ಸ್ ಮೂಲದ ವಿದ್ಯಾರ್ಥಿಯೊಬ್ಬನನ್ನು ನಗರಕ್ಕೆ ಕಳುಹಿಸಿತ್ತು. ಈ ‘ಆಪರೇಷನ್‌'ನ ಹೊಣೆಯೂ ಐಐಎಸ್‌ಸಿ ದಾಳಿ ರೂವಾರಿ ಬಿಹಾರ ಮೂಲದ ಸಬಾವುದ್ದೀನ್‌'ನ ಹೆಗಲಿಗೆ ಬಿದ್ದಿತ್ತು. 

2006ರ ಅಕ್ಟೋಬರ್‌ನಲ್ಲಿ ಪೊಲೀಸ್‌ ಆಯುಕ್ತರ ಕಚೇರಿ ಮಾತ್ರವಲ್ಲದೆ ವೀಸಾ ಕಾರ್ಯಾಲಯ ಹಾಗೂ ಸಂಜಯನಗರದಲ್ಲಿ ರುವ ಇಸ್ರೋ ಕ್ಯಾಂಪಸ್‌ಗೆ ಸಹ ಮಾಲ್ಡೀವ್‌್ಸ ಮೂಲದ ಶಂಕಿತ ಉಗ್ರ ಅಬು ಅಕ್ರಂ ಭೇಟಿ ನೀಡಿದ್ದ. ಅಷ್ಟರಲ್ಲಿ 2008 ಸಿಆರ್‌ಪಿಎಫ್‌ ಕ್ಯಾಂಪ್‌ ಮೇಲಿನ ದಾಳಿ ಪ್ರಕರಣದಲ್ಲಿ ಸಬಾವುದ್ದೀನ್‌ ಸೆರೆಯಾದ ಕಾರಣ ಸಂಚು ವಿಫಲವಾಯಿತು. ಈ ಎರಡನೇ ದಾಳಿ ತಯಾರಿ ಬಗ್ಗೆ ಬೆಂಗಳೂರು ಪೊಲೀಸರು ಹಾಗೂ ಎನ್‌ಐಎ ವಿಚಾರಣೆ ವೇಳೆ ಸಬಾವುದ್ದೀನ್‌ ತಪ್ಪೊಪ್ಪಿಗೆಯಲ್ಲಿ ವಿವರಿಸಿದ್ದಾನೆ.

ಐಐಎಸ್‌'ಸಿ ದಾಳಿಗೆ ಲಖ್ವಿ ಶಹಬ್ಬಾಸ್‌ಗಿರಿ: 2005ರಲ್ಲಿ ನಡೆದ ಐಐಎಸ್‌ಸಿ ದಾಳಿ ಬಳಿಕ ಬೆಂಗಳೂರಿನಿಂದ ಎಲ್‌ಇಟಿ ಶಂಕಿತ ಉಗ್ರರಾದ ಸಬಾವುದ್ದೀನ್‌ ಹಾಗೂ ಅಬು ಹಮ್ಜಾ ಸುರಕ್ಷಿತವಾಗಿ ಪರಾರಿಯಾಗಿದ್ದರು. ಕೆಲ ತಿಂಗಳು ನೇಪಾಳ ಹಾಗೂ ತನ್ನೂರು ಬಿಹಾರದಲ್ಲಿ ನೆಲೆಸಿದ್ದ ಸಬಾವುದ್ದೀನ್‌, 2006ರ ಮಾರ್ಚ್'ನಲ್ಲಿ ಎಲ್‌'ಇಟಿ ನಾಯಕರ ಕರೆ ಮೇರೆಗೆ ಪಾಕಿಸ್ತಾನಕ್ಕೆ ತೆರಳಿದ್ದ. ಆ ವೇಳೆ ಎಲ್‌'ಇಟಿ ಪ್ರಮುಖರ ಭೇಟಿಗೆ ಅವನಿಗೆ ಅವಕಾಶ ಸಿಕ್ಕಿತ್ತು. ಅದರಲ್ಲೂ ಮುಂಬೈ ದಾಳಿಯ ‘ಮಾಸ್ಟರ್‌ ಮೈಂಡ್‌' ಆಗಿರುವ ಭಾರತದ ಮೋಸ್ಟ್‌ ವಾಂಟೆಡ್‌ ಉಗ್ರ ಝಕಿ ಉರ್‌ ರೆಹಮಾನ್‌ ಲಖ್ವಿಯನ್ನು ಖುದ್ದು ಭೇಟಿಯಾಗಿದ್ದೆ ಎಂದು ಸಬಾವುದ್ದೀನ್‌ ತಿಳಿಸಿದ್ದಾನೆ. 2006ರ ಮಾಚ್‌ರ್‍ನಲ್ಲಿ ಇಸ್ಲಾಮಾಬಾದ್‌ಗೆ ಹೋಗಿ ಎಲ್‌ಇಟಿ ಕಮಾಂಡೋ ಮುಝಮಿಲ್‌ನನ್ನು ಭೇಟಿಯಾಗಿದ್ದೆ. ಆಗ ಬೆಂಗಳೂರು ಆಪರೇಷನ್‌ ಯಶಸ್ಸು ಗೊಂಡಿತ್ತಾದರೂ ನಿರೀಕ್ಷಿತ ರಕ್ತಪಾತವಾಗಲಿಲ್ಲ ಎಂದು ಆತ ಕಿಡಿಕಾರಿದ್ದ ಎಂದು ಸಬಾವುದ್ದೀನ್‌ ವಿವರಿಸಿದ್ದಾನೆ.

ಕನ್ನಡಪ್ರಭ ವಾರ್ತೆ
epaper.kannadaprabha.in