ಮಾನಸಿಕ ಅಸ್ವಸ್ಥತೆಯಿಂದ ಕೂಡಿದ ಇಡೀ ಕುಟುಂಬ; 10 ವರ್ಷಗಳಿಂದ ಚೈನಿನಲ್ಲಿ ಯುವತಿಯ ಕೂಡಿಹಾಕಿದ ಮನೆಯ ಸದಸ್ಯರು; ಒಂದೇ ಕೋಣೆಯಲ್ಲಿ ಎಲ್ಲರ ನಿತ್ಯಕರ್ಮ; ಇವರ ಕಾಟ, ಕೋಣೆಯ ಗಬ್ಬುನಾತ ತಾಳಲಾಗದೇ ಕಂಗೆಟ್ಟ ಸ್ಥಳೀಯರು; ಇವಿಷ್ಟೂ ದೃಶ್ಯಗಳು ಬೆಂಗಳೂರಿನ ನೀಲಸಂದ್ರದ ಬಳಿಯ ಆಸ್ಟಿನ್ ಟೌನ್ ಪ್ರದೇಶದಲ್ಲಿ ಕಂಡಿವೆ. ಸದ್ಯ ಸ್ಥಳೀಯ ಜನರ ದೂರಿನ ಮೇರೆಗೆ ಆಗಮಿಸಿದ ಪೊಲೀಸರು ಸ್ಮಿತಾಳನ್ನು ರಕ್ಷಿಸಿ, ಮೂರು ಮಂದಿಯನ್ನು ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯ ವ್ಯವಸ್ಥೆ ಮಾಡಿದ್ದಾರೆ.

ಬೆಂಗಳೂರು(ಆ. 09): ಮಾನಸಿಕ ಅಸ್ವಸ್ಥತೆಯಿಂದ ಕೂಡಿದ ಇಡೀ ಕುಟುಂಬ; 10 ವರ್ಷಗಳಿಂದ ಚೈನಿನಲ್ಲಿ ಯುವತಿಯ ಕೂಡಿಹಾಕಿದ ಮನೆಯ ಸದಸ್ಯರು; ಒಂದೇ ಕೋಣೆಯಲ್ಲಿ ಎಲ್ಲರ ನಿತ್ಯಕರ್ಮ; ಇವರ ಕಾಟ, ಕೋಣೆಯ ಗಬ್ಬುನಾತ ತಾಳಲಾಗದೇ ಕಂಗೆಟ್ಟ ಸ್ಥಳೀಯರು; ಇವಿಷ್ಟೂ ದೃಶ್ಯಗಳು ಬೆಂಗಳೂರಿನ ನೀಲಸಂದ್ರದ ಬಳಿಯ ಆಸ್ಟಿನ್ ಟೌನ್ ಪ್ರದೇಶದಲ್ಲಿ ಕಂಡಿವೆ. ಸದ್ಯ ಸ್ಥಳೀಯ ಜನರ ದೂರಿನ ಮೇರೆಗೆ ಆಗಮಿಸಿದ ಪೊಲೀಸರು ಸ್ಮಿತಾಳನ್ನು ರಕ್ಷಿಸಿ, ಮೂರು ಮಂದಿಯನ್ನು ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯ ವ್ಯವಸ್ಥೆ ಮಾಡಿದ್ದಾರೆ.

Add Asianetnews Kannada as a Preferred SourcegooglePreferred

ಸಿ.ಪೌಲ್ ಎಂಬ ವ್ಯಕ್ತಿಯೊಬ್ಬರ ಕುಟುಂಬದ ಸ್ಥಿತಿ ಇದಾಗಿದೆ. 10 ವರ್ಷಗಳಿಂದ ಈ ಕುಟುಂಬದ ಎಲ್ಲಾ ಮೂರೂ ಸದಸ್ಯರು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ. 10 ವರ್ಷಗಳಿಂದ ಕಿರಿಯ ಮಗಳು ಸ್ಮಿತಾಳನ್ನು ಆಕೆಯ ತಾಯಿ ರೋಜಿ ಮತ್ತು ಇನ್ನೊಬ್ಬ ಮಗಳು ಸ್ವೆಲ್ವಿ ಅವರು ಕೂಡಿಹಾಕಿ ಚಿತ್ರಹಿಂಸೆ ಕೊಡುತ್ತಾ ಬಂದಿದ್ದಾರೆ. ಸ್ಮಿತಾ, ರೋಜಿ ಮತ್ತು ಸ್ವೆಲ್ವಿ ಈ ಮೂರು ಮಂದಿ ಕೂಡ ಮಾನಿಸಕ ಅಸ್ವಸ್ಥರೇ ಆಗಿದ್ದಾರೆ.

ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸಿ.ಪೌಲ್ ಅವರು 10 ವರ್ಷಗಳ ಹಿಂದೆ ಮೃತಪಟ್ಟಿರುತ್ತಾರೆ. ಅವರ ನಿಧನದ ಬಳಿಕ ಹಿರಿಯ ಮಗಳು ಖಿನ್ನತೆಗೆ ತುತ್ತಾಗಿ ಸಾವನ್ನಪ್ಪುತ್ತಾರೆ. ಇವರಿಬ್ಬರ ಸಾವು ಉಳಿದ ಮೂವರ ಮೇಲೆ ಪರಿಣಾಮ ಬೀರಿ ಮಾನಸಿಕ ಅಸ್ವಸ್ಥತೆಗೆ ತಳ್ಳುತ್ತದೆ. ಒಂದೇ ಕೋಣೆಯಲ್ಲೇ ಇವರು ತಮ್ಮೆಲ್ಲಾ ನಿತ್ಯಕರ್ಮಗಳನ್ನು ಮಾಡಿಕೊಳ್ಳುತ್ತಾರೆ. ಇವರ ಗಲಾಟೆ, ಗಲೀಜು ಇತ್ಯಾದಿಗಳನ್ನು ಕಂಡ ಸ್ಥಳೀಯರು 6 ವರ್ಷಗಳ ಹಿಂದೆಯೇ ವಿವೇಕನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುತ್ತಾರೆ. ಆದರೆ, ಇವರು ಮಾನಸಿಕ ಅಸ್ವಸ್ಥರಾದ್ದರಿಂದ ಪೊಲೀಸರು ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಇದೀಗ, ಕತ್ತಲಕೋಣೆಯಲ್ಲಿ ಕೂಡಿಹಾಕಲ್ಪಟ್ಟ ಸ್ಮಿತಾಳ ರೋಧನೆ ವಿಪರೀತವಾದ್ದರಿಂದ ಸ್ಥಳೀಯರು ಮತ್ತೊಮ್ಮೆ ಪೊಲೀಸ್ ಠಾಣೆಗೆ ಹೋಗಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುತ್ತಾರೆ. ಈ ಬಾರಿ ಪೊಲೀಸರು ಎಲ್ಲಾ ಮೂವರನ್ನೂ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.