ಕ್ಷೀರ ಭಾಗ್ಯ ಸರ್ಕಾರದ ಮಹಾತ್ವಾಕಾಂಕ್ಷೆ ಯೋಜನೆ. ಆದರೆ ಈ ಯೋಜನೆ ಐಸ್'ಕ್ರೀಮ್ ಫ್ಯಾಕ್ಟರಿಗಳ, ಕುಂದಾ ಕೋವಾ ಮಾಲೀಕರ ಸೌಭಾಗ್ಯ ಆಗುತ್ತಿದೆ. ಈ ಕರಾಳ ಸತ್ಯವನ್ನು ನಮ್ಮ ಕವರ್ಸ್ಟೋರಿ ತಂಡ ರಹಸ್ಯ ಕಾರ್ಯಾಚರಣೆ ಮೂಲಕ ಬಯಲು ಮಾಡಿದೆ.
ಬೆಂಗಳೂರು(ಜ.21): ಕ್ಷೀರ ಭಾಗ್ಯ ಸರ್ಕಾರದ ಮಹಾತ್ವಾಕಾಂಕ್ಷೆ ಯೋಜನೆ. ಆದರೆ ಈ ಯೋಜನೆ ಐಸ್'ಕ್ರೀಮ್ ಫ್ಯಾಕ್ಟರಿಗಳ, ಕುಂದಾ ಕೋವಾ ಮಾಲೀಕರ ಸೌಭಾಗ್ಯ ಆಗುತ್ತಿದೆ. ಈ ಕರಾಳ ಸತ್ಯವನ್ನು ನಮ್ಮ ಕವರ್ಸ್ಟೋರಿ ತಂಡ ರಹಸ್ಯ ಕಾರ್ಯಾಚರಣೆ ಮೂಲಕ ಬಯಲು ಮಾಡಿದೆ.
ಕ್ಷೀರ ಭಾಗ್ಯ ಐಸ್ಕ್ರೀಂ ಸೌಭಾಗ್ಯ!: ಮಕ್ಕಳ ಹಾಲು ಕೋವಾ-ಕುಂದಾ ಪಾಲು!
ಇದು ನಮ್ಮ ರಾಜ್ಯ ಸರ್ಕಾರದ ಕ್ಷೀರ ಭಾಗ್ಯ ಯೋಜನೆಗೆ ಬಂದಿರುವ ದೌರ್ಭಾಗ್ಯ. ಶಾಲಾ ಮಕ್ಕಳ ಅಪೌಷ್ಟಿಕತೆ ನಿವಾರಣೆಗೆ ರಾಜ್ಯ ಸರ್ಕಾರ ರೂಪಿಸಿರುವ ಕ್ಷೀರ ಭಾಗ್ಯ ಎನ್ನುವ ಮಹಾತ್ವಾಕಾಂಕ್ಷೆ ಯೋಜನೆಗೆ ಭ್ರಷ್ಟರು ಕನ್ನ ಹಾಕುತ್ತಿದ್ದಾರೆ. ಇದರಿಂದ ರಾಜ್ಯದ ಕೆಲ ಜಿಲ್ಲೆಯ ಮಕ್ಕಳಿಗೆ ಗುಣಮಟ್ಟದ ಹಾಲೇ ಸಿಗದಂಥಾ ದುಸ್ಥಿತಿ ಎದುರಾಗಿದೆ.
ಈ ರೀತಿ ಆಗಲು ಕಾರಣ ಏನು ಗೊತ್ತಾ? ಸರ್ಕಾರ ಕ್ಷೀರ ಭಾಗ್ಯ ಯೋಜನೆಗಾಗಿ ಕೆಎಂಎಫ್ನಿಂದ ಗುಣಮಟ್ಟದ ಹಾಲಿನಪುಡಿ ಖರೀದಿಸುತ್ತಿದೆ. ಆದರೆ ಈ ಹಾಲಿನ ಪುಡಿಯನ್ನು ಸರ್ಕಾರಿ ಶಾಲೆಗಳಿಗೆ ಸರಬರಾಜು ಮಾಡಬೇಕಾದ ಟೆಂಡರುದಾರರು, ಭ್ರಷ್ಟ ಶಿಕ್ಷಣ ಅಧಿಕಾರಿಗಳ ಜೊತೆ ಕೈಜೋಡಿಸಿ ಅದನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಇದು ಕವರ್ ಸ್ಟೋರಿ ರಹಸ್ಯ ಕಾರ್ಯಾಚರಣೆಯಲ್ಲಿ ಬಯಲಾಗಿದೆ.
ಬೆಳಗಾವಿಯ ಕ್ಷೀರಭಾಗ್ಯ ಟೆಂಡರುದಾರ ಪ್ರವೀಣ್ ಪಚ್ಚೇಪುರ್, ಆತನ ಪಾರ್ಟನರ್ ಸಂಜು ಸೇರಿ ಕ್ಷೀರಭಾಗ್ಯದ ಹಾಲಿನಪುಡಿಯನ್ನು ಮಕ್ಕಳಿಗೆ ಸರಬರಾಜು ಮಾಡದೆ, ಅದನ್ನು ಬೇರೆ ಪ್ಯಾಕೇಟ್ ಮಾಡಿ ಪರರಾಜ್ಯಗಳ ಐಸ್ಕ್ರೀಂ, ಕೋವಾ, ಕುಂದಾ ಫ್ಯಾಕ್ಟರಿಗಳಿಗೆ ಮಾರಾಟ ಮಾಡುತ್ತಿದ್ದಾರೆ.
ದುರಂತ ಎಂದರೆ ಕ್ಷೀರ ಭಾಗ್ಯದ ಹಾಲಿನ ಪುಡಿ ಪ್ಯಾಕೆಟ್'ಗಳೆಲ್ಲಾ ಬೆಳಗಾವಿ, ಹಾವೇರಿಯ ದಿನಸಿ ಅಂಗಡಿಗಳಲ್ಲೂ ಬಿಂದಾಸಾಗಿ ಮಾರಾಟ ಆಗುತ್ತಿದೆ. ಅಂಗನವಾಡಿ ಕಾರ್ಯಕರ್ತೆಯರ ಮನೆಯಲ್ಲೂ ಗೋಣಿಗಟ್ಟಲೆ ಹಾಲಿಪುಡಿ ಸಿಗುತ್ತಿದೆ ಅಂದ್ರೆ ಈ ಯೋಜನೆ ಹಗರಣದ ಕೂಪ ಆಗಿರೋದ್ರಲ್ಲಿ ಅನುಮಾನವೇ ಇಲ್ಲ. ಹಾಗಾಗಿ ಮುಖ್ಯಮಂತ್ರಿಗಳು ತಕ್ಷಣ ಈ ಹಗರಣದ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು.
