'ಕೋಲ್ಕತ್ತಾದಲ್ಲಿ ಲಘು ಬಾಂಬ್ ಸ್ಫೋಟಕ್ಕೆ ಆರ್ಎಸ್ಎಸ್ ಕಾರಣ'
ಕೊಲ್ಕತ್ತಾದಲ್ಲಿ ಸಂಭವಿಸಿದ ಬಾಂಬ್ ಅಪಘಾತದಲ್ಲಿ ಬಾಲಕಿಯೊಬ್ಬಳು ಮೃತಪಟ್ಟಿದ್ದು, ಇಂಥ ಸಂದರ್ಭದಲ್ಲಿ ಬಿಜೆಪಿ ಹಾಗೂ ಟಿಎಂಸಿ ನಡುವಿನ ಕೆಸರೆರಚಾಟ ಮುಂದುವರಿದಿದೆ.
ಕೋಲ್ಕತ್ತಾ: ಪಶ್ಚಿಮ ಬಂಗಾಳದ ಉತ್ತರ ಕೋಲ್ಕತ್ತಾದ ನಗರ್ಬಜಾರ್ ಪ್ರದೇಶದಲ್ಲಿ ಮಂಗಳವಾರ ಲಘು ಬಾಂಬ್ ಸ್ಫೋಟ ಸಂಭವಿಸಿದೆ.ಘಟನೆಯಲ್ಲಿ 7 ವರ್ಷದ ಬಾಲಕಿ ಸಾವನ್ನಪ್ಪಿ ದ್ದು, 9 ಮಂದಿ ಗಾಯಗೊಂಡಿದ್ದಾರೆ.
ತನಿಖೆ ವೇಳೆ ಸ್ಫೋಟಕ್ಕೆ ಅಮೋನಿಯಂ ನೈಟ್ರೇಟ್ ಬಳಸಿದ್ದು ಕಂಡುಬಂದಿದೆ. ಡಂಡಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಕಾಝಿಪುರ ಪ್ರದೇಶದಲ್ಲಿರುವ ಬೃಹತ್ ಕಟ್ಟಡದ ಎದುರಿನ ರಸ್ತೆಯಲ್ಲಿ ಮಂಗಳವಾರ ಬೆಳಗ್ಗೆ 9 ಗಂಟೆಗೆ ಈ ಬಾಂಬ್ ಸ್ಫೋಟ ನಡೆದಿದೆ.
ಈ ನಡುವೆ ಈ ದಾಳಿ ಹಿಂದೆ ಆರ್ಎಸ್ಎಸ್ ಹಾಗೂ ಬಿಜೆಪಿ ಕೈವಾಡವಿದೆ ಎಂದು ಪಶ್ಚಿಮ ಬಂಗಾಳ ಸಚಿವ ಪುರ್ನೇಂದು ಬಸು ಗಂಭೀರ ಆರೋಪ ಮಾಡಿದ್ದಾರೆ. ಆದರೆ, ಈ ಆರೋಪವನ್ನು ಬಿಜೆಪಿ ತಳ್ಳಿ ಹಾಕಿದೆ.
ಇನ್ನು ಸ್ಫೋಟ ಕುರಿತು ಪ್ರತಿಕ್ರಿಯಿಸಿದ ದಕ್ಷಿಣ ಡಂಡಂ ಮುನ್ಸಿಪಾಲ್ ಅಧ್ಯಕ್ಷ ಪಾಂಚು ರಾಯ್, ‘ಇದು ನನ್ನನ್ನು ಹಾಗೂ ಟಿಎಂಸಿ ಕಾರ್ಯಕರ್ತರ ಗುರಿಯಾಗಿಸಿ ನಡೆದ ದಾಳಿ. ನಮ್ಮನ್ನು ಮುಗಿಸಿದರೆ, ತಮ್ಮ ಪಕ್ಷವನ್ನು ಇಲ್ಲಿ ನೆಲೆಯೂರಿಸಬಹುದು ಎಂಬ ಆಕಾಂಕ್ಷೆ ಅವರಲ್ಲಿದೆ. ಹಾಗಾಗಿ, ಟಿಎಂಸಿ ಪಕ್ಷದ ಮೇಲೆ ಮುಗಿಬೀಳುತ್ತಿರುವವರೇ ಈ ದಾಳಿಯ ಹಿಂದೆ ಇದ್ದಾರೆ,’ ಎಂದು ದೂರಿದ್ದಾರೆ.