ಕೊಡಗು ನೆರೆಗೆ ಸಾವಿರಾರು ಕೋಟಿ ನಷ್ಟ?
ಕುಶಾಲನಗರ-ಮಡಿಕೇರಿ ರಸ್ತೆಯಲ್ಲಿ ಮಣ್ಣು ಕುಸಿತದಿಂದ ರಸ್ತೆ ಸ್ಥಗಿಗೊಂಡಿದೆ. ಈ ರಸ್ತೆಗಳ ಪುನರ್ ನಿರ್ಮಾಣಕ್ಕೆ 1 ಸಾವಿರಕ್ಕೂ ಹೆಚ್ಚು ಕೋಟಿ ರು. ಅಗತ್ಯವಿದೆ
ಬೆಂಗಳೂರು[ಆ.18]: ಕೊಡಗು ಉಂಟಾಗಿರುವ ಜಲಪ್ರಳಯದಿಂದ ಸಾವಿರಾರು ಕೋಟಿ ರು. ನಷ್ಟ ಉಂಟಾಗಿದೆ. ಕಂದಾಯ ಇಲಾಖೆ ಈ ಬಗ್ಗೆ ಲೆಕ್ಕ ಹಾಕುತ್ತಿದ್ದು ಅಂದಾಜು 8 ಸಾವಿರಕ್ಕೂ ಹೆಚ್ಚು ನಷ್ಟಉಂಟಾಗಿರುವ ಸಾಧ್ಯತೆಯಿದೆ ಎನ್ನಲಾಗಿದೆ.
ಬಿಡುವ ಕೊಡದ ಮಳೆಯಿಂದಾಗಿ ಇಂದು ಇಬ್ಬರು ಮೃತಪಟ್ಟಿದ್ದು ಸಾವಿನ ಸಂಖ್ಯೆ 8ಕ್ಕೇರಿದೆ. ನೂರಾರು ಜನ ಕಣ್ಮರೆಯಾಗಿದ್ದಾರೆ. ಬೆಳೆ ಹಾನಿ, ರಸ್ತೆ ಬಂದ್ನಿಂದ ಸ್ಥಗಿತದಿಂದಾಗಿ ವಾಣಿಜ್ಯ ವಹಿವಾಟು ಆದಾಯದಲ್ಲಿ ಉಂಟಾಗಿರುವ ಖೋತಾ ಸೇರಿದರೆ ನಷ್ಟದ ಮೊತ್ತ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ.
ಇಲ್ಲಿಯವರೆಗೂ ಕೊಡಗು ಭಾಗದಲ್ಲಿ 845 ಮನೆಗಳು ಸಂಪೂರ್ಣ ನಾಶಗೊಂಡಿವೆ. ದಕ್ಷಿಣ ಕನ್ನಡದಲ್ಲಿ 361 ಮನೆ ಹಾಳಾಗಿದೆ. 98 ಕಿ.ಮೀ ರಸ್ತೆಗಳು ಹಾಳಾಗಿವೆ. ಭಾಗಮಂಡಲ, ನಾಪೊಕ್ಲು ಅಯ್ಯಗೆರಿ ಸಂಪರ್ಕ ಕಲ್ಪಿಸುವ ರಸ್ತೆಗಳು ಹಾಳಾಗಿದ್ದು ಒಟ್ಟು 98 ಕಿ.ಮೀ. ಉದ್ದದ ರಸ್ತೆಗಳು ಸಂಪೂರ್ಣ ಹಾಳಾಗಿವೆ.
ಕುಶಾಲನಗರ-ಮಡಿಕೇರಿ ರಸ್ತೆಯಲ್ಲಿ ಮಣ್ಣು ಕುಸಿತದಿಂದ ರಸ್ತೆ ಸ್ಥಗಿಗೊಂಡಿದೆ. ಈ ರಸ್ತೆಗಳ ಪುನರ್ ನಿರ್ಮಾಣಕ್ಕೆ 1 ಸಾವಿರಕ್ಕೂ ಹೆಚ್ಚು ಕೋಟಿ ರು. ಅಗತ್ಯವಿದೆ ಎನ್ನುತ್ತಿದೆ ಮೂಲಗಳು.
58 ಸೇತುವೆ, 2 ಸಾವಿರ ವಿದ್ಯುತ್ ಕಂಬಗಳು ಹಾನಿ
ಕೊಡಗು ಭಾಗದ ವಿವಿದೆಡೆ 58 ಸೇತುವೆಗಳು ಹಾನಿಗೊಳಗಾಗಿದ್ದು, ಬಹುತೇಕ ಸೇತುವೆಗಳು ಮುಳುಗಿವೆ. 200ಕ್ಕೂ ಹೆಚ್ಚು ಸರ್ಕಾರಿ ಕಟ್ಟಡಗಳು, ಸುಮಾರು 2 ಸಾವಿರ ವಿದ್ಯುತ್ ಕಂಬಗಳು ಹಾನಿಯಾಗಿದೆ. ಕೆಲವು ದಿನಗಳಲ್ಲಿ ನಷ್ಟದ ಸಂಪೂರ್ಣ ಚಿತ್ರಣ ಸಿಗಲಿದೆ.