ಕೊಡಗಿನ ಕುಟುಂಬವೊಂದು ದಯಾಮರಣಕ್ಕೆ ಅವಕಾಶ ನೀಡಬೇಕು ಎಂದು ಕೋರಿ ಪ್ರಧಾನಿ ಮೋದಿ ಹಾಗೂ ಮುಖ್ಯಮಂತ್ರಿಗೆ ಪತ್ರದ ಮುಖೇನ ಮನವಿ ಮಾಡಿದೆ. 

ಮಡಿಕೇರಿ: ನಮಗೆ ಪರಿಹಾರ ದೊರಕಿಲ್ಲ. ಆದ್ದರಿಂದ ದಯಮಾಡಿ ದಯಾಮರಣಕ್ಕೆ ಅನುಮತಿ ನೀಡಿ ಎಂದು ಕೊಡಗು ಜಲಪ್ರಳಯದ ಸಂತ್ರಸ್ತ ಕುಟುಂಬವೊಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಗೆ ಅವರಿಗೆ ಪತ್ರ ಬರೆದಿದೆ. ಕಳೆದ ವರ್ಷ ಪ್ರಕೃತಿ ವಿಕೋಪಕ್ಕೆ ತುತ್ತಾಗಿದ್ದ ಮಡಿಕೇರಿ ತಾಲೂಕಿನ ಕಾಲೂರು ನಿವಾಸಿ ಜೋಯಪ್ಪ ಸೇರಿದಂತೆ ಮೂವರು ಸಹೋದರರು ದಯಾಮರಣ ಕೋರಿ ಪತ್ರ ಬರೆದವರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

 ‘ನಮಗೆ ಇದ್ದ ನಾಲ್ಕು ಎಕರೆ ಆಸ್ತಿ ಜಲಪ್ರಳಯಕ್ಕೆ ಸಿಲುಕಿ ನಾಶವಾಗಿದೆ. ಆಸ್ತಿ ಹಾನಿಗೆ ನಮಗೆ ಸೂಕ್ತ ಪರಿಹಾರ ಸಿಕ್ಕಿಲ್ಲ. ಮನೆಯಲ್ಲಿರುವ ಮೂರು ಮಂದಿ ಬದುಕು ಸಾಗಿಸುವುದು ಕಷ್ಟವಾಗಿದೆ. ಗ್ರಾಮ ಲೆಕ್ಕಿಗರಿಂದ ಅನ್ಯಾಯವಾಗಿ ಪರಿಹಾರ ದೊರಕದಂತಾಗಿದೆ. ಆದ್ದರಿಂದ ದಯಮಾಡಿ ದಯಾಮರಣಕ್ಕೆ ಅನುಮತಿ ನೀಡಿ’ ಎಂದು ಜೋಯಪ್ಪ ಕುಟುಂಬಸ್ಥರು ಕೋರಿದ್ದಾರೆ.

‘ಸಂಬಂಧಿಸಿದ ಅಧಿಕಾರಿಗಳು ನಮ್ಮ ಜಾಗವನ್ನು ಪರಿಶೀಲನೆ ಮಾಡಿ ನಮಗೆ ಆಗಿರುವ ನಷ್ಟಕ್ಕೆ ಸೂಕ್ತ ಪರಿಹಾರ ದೊರಕಿಸಿಕೊಡಬೇಕು. 15 ದಿನಗಳ ವರೆಗೆ ತಾಳ್ಮೆಯಿಂದ ಕಾಯ್ದುಕೊಳ್ಳುತ್ತೇವೆ. ನಂತರ ನಮಗೆ ನ್ಯಾಯ ದೊರಕದೆ ಇದ್ದರೆ ಮಡಿಕೇರಿಯ ಗಾಂಧಿ ಮಂಟಪದ ಮುಂಭಾಗ ಅಹೋರಾತ್ರಿ ಉಪವಾಸ ಸತ್ಯಾಗ್ರಹವನ್ನು ನಡೆಸಲಾಗುವುದು. ಇದಕ್ಕೂ ನ್ಯಾಯ ದೊರಕದೆ ಇದ್ದಲ್ಲಿ ತಮ್ಮ ಕಚೇರಿ ಮುಂಭಾಗ ಆತ್ಮಹತ್ಯೆ ಒಂದೇ ದಾರಿ. ಇದಕ್ಕೆ ಸರ್ಕಾರ ಹಾಗೂ ಜಿಲ್ಲಾಡಳಿತವೇ ನೇರ ಹೊಣೆ ಎಂದು’ ಪತ್ರದಲ್ಲಿ ಬರೆದಿದ್ದಾರೆ.