₹25 ಕೋಟಿ ಕಿಕ್’ಬ್ಯಾಕ್: ಬಿಎಸ್’ವೈ ಬಾಂಬ್!
ಭದ್ರಾ ಮೇಲ್ದಂಡೆ ಯೋಜನೆ ವ್ಯಾಪ್ತಿಯಲ್ಲಿ ಚಿತ್ರ ದುರ್ಗ ಶಾಖಾ ನಾಲೆಯ ನಿರ್ಮಾಣದ ಟೆಂಡರ್ ಗುತ್ತಿಗೆ ನೀಡುವಲ್ಲಿ ೧೫೮ ಕೋಟಿ ರು. ಅಕ್ರಮ ನಡೆದಿದ್ದು, ಇದರಲ್ಲಿ ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಮತ್ತವರ ತಂಡಕ್ಕೆ ಸುಮಾರು ೨೫ ಕೋಟಿ ರು. ಕಿಕ್ ಬ್ಯಾಕ್ ಸಂದಾಯವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಗಂಭೀರ ಆಪಾದನೆ ಮಾಡಿದ್ದಾರೆ.
ಬೆಂಗಳೂರು (ಮಾ.23): ಭದ್ರಾ ಮೇಲ್ದಂಡೆ ಯೋಜನೆ ವ್ಯಾಪ್ತಿಯಲ್ಲಿ ಚಿತ್ರ ದುರ್ಗ ಶಾಖಾ ನಾಲೆಯ ನಿರ್ಮಾಣದ ಟೆಂಡರ್ ಗುತ್ತಿಗೆ ನೀಡುವಲ್ಲಿ ೧೫೮ ಕೋಟಿ ರು. ಅಕ್ರಮ ನಡೆದಿದ್ದು, ಇದರಲ್ಲಿ ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಮತ್ತವರ ತಂಡಕ್ಕೆ ಸುಮಾರು ೨೫ ಕೋಟಿ ರು. ಕಿಕ್ ಬ್ಯಾಕ್ ಸಂದಾಯವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಗಂಭೀರ ಆಪಾದನೆ ಮಾಡಿದ್ದಾರೆ.
ಈ ಅಕ್ರಮ ಕುರಿತಂತೆ ಸಚಿವ ಎಂ.ಬಿ. ಪಾಟೀಲ್, ವಿಶ್ವೇಶ್ವರಯ್ಯ ಜಲ ನಿಗಮದ ಅಧಿಕಾರಿಗಳಾದ ಚೆಲುವ ರಾಜು, ಕೃಷ್ಣಮೂರ್ತಿ ಹಾಗೂ ಗುತ್ತಿಗೆದಾರ ಸಂಸ್ಥೆಯಾದ ಮೆ.ನ್ಯಾಷನಲ್ ಪ್ರಾಜೆಕ್ಟ್ಸ್ ಕನ್ಸ್ಟ್ರಕ್ಷನ್ ಕಾರ್ಪೊರೇಷನ್ ಲಿ.ನ ಮುಖ್ಯಸ್ಥರನ್ನು ಬಹಿರಂಗ ಮಂಪರು ಪರೀಕ್ಷೆಗೆ ಒಳಪಡಿಸಬೇಕು. ಜತೆಗೆ ಸಿಬಿಐ ತನಿಖೆಗೆ ವಹಿಸಬೇಕು ಎಂದೂ ಆಗ್ರಹಿಸಿದ್ದಾರೆ.
ಈ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಎಷ್ಟು ಕಮಿಷನ್ ಹೋಗಿದೆ ಎಂಬುದನ್ನು ಅವರೇ ಬಹಿರಂಗಪಡಿ ಸಬೇಕು ಎಂದರು.- ಹತ್ತಾರು ಅಕ್ರಮ ಟೆಂಡರ್ಗಳಿಗೆ ಕಾರ್ಯಾದೇಶ ಪತ್ರ ನೀಡಿರುವ ನಿಗಮವು ಇತ್ತೀಚೆಗೆ 2.9 ಕಿ.ಮೀ. ಉದ್ದದ ಚಿತ್ರದುರ್ಗ ಶಾಖಾ ನಾಲೆಯ ನಿರ್ಮಾಣದ ಹೆಸರಿನಲ್ಲಿ ಕರೆಯಲಾದ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದ ಮೆ.ನ್ಯಾಷನಲ್ ಪ್ರಾಜೆಕ್ಟ್ಸ್ ಕನ್ಸ್ಟ್ರಕ್ಷನ್ ಕಾರ್ಪೊರೇಷನ್ ಲಿ. ಹೆಸರಿಗೆ 158 ಕೋಟಿ ಮೊತ್ತದ ಕಾಮಗಾರಿ ನಿರ್ವಹಿಸಲು
ಕಾರ್ಯಾದೇಶ ಪತ್ರವನ್ನು ಕಳೆದ ಜ.1 ರಂದು ನೀಡಿದೆ. - ಈ ಟೆಂಡರ್ನಲ್ಲಿ ಭಾಗವಹಿಸಿರುವ ಮೆ.ನ್ಯಾಷನಲ್ ಪ್ರಾಜೆಕ್ಟ್ಸ್ ಕನ್ಸ್ಟ್ರಕ್ಷನ್ ಕಾರ್ಪೊರೇಷನ್ ಲಿ. ಮತ್ತು ಮೆ. ಅಮ್ಮ ಕನ್ಸ್ಟ್ರಕ್ಷನ್ಸ್ ಇಂಡಿಯಾ ಪ್ರೈ.ಲಿ. ನೀಡಿರುವ ಕೆಲಸ ನಿರ್ವಹಿಸಿದ ಪ್ರಮಾಣ ಪತ್ರಗಳು (ವರ್ಕ್ ಡನ್ ಸರ್ಟಿಫಿಕೇಟ್) ನಕಲಿಯಾಗಿವೆ. ಈ ಕಂಪನಿಗಳು ಈ ಹಿಂದೆ ಇದೇ ರೀತಿ ಕಾರ್ಯನಿರ್ವಹಿಸಿರಬೇಕು ಎಂಬ ಷರತ್ತಿಗೆ ಮಣಿಪುರ ಮತ್ತು ತ್ರಿಪುರಾ ರಾಜ್ಯಗಳಲ್ಲಿ ಕೆಲಸ ನಿರ್ವಹಿಸಿದ ಪ್ರಮಾಣ ಪತ್ರಗಳನ್ನು ಒದಗಿಸಿವೆ.
ವಿಚಿತ್ರ ಸಂಗತಿ ಎಂದರೆ, ಕಂಪನಿಗಳು ಹಾಕಿರುವ ಪ್ರಮಾಣ ಪತ್ರಗಳಿಗೆ ಒಬ್ಬರೇ ಕಾರ್ಯಪಾಲಕ ಅಭಿಯಂತರರು ಸಹಿ ಮಾಡಿದ್ದಾರೆ. ಈ ಬಗ್ಗೆ ತ್ರಿಪುರಾ ಹಾಗೂ ಮಣಿಪುರ ರಾಜ್ಯಗಳ ಸಂಬಂಧಪಟ್ಟ ಮುಖ್ಯಸ್ಥರಿಗೆ ಇಲಾಖೆ ಪತ್ರ ಬರೆದಾಗ
ಅವರು ತಮ್ಮ ರಾಜ್ಯಗಳಲ್ಲಿ ಕಾರ್ಯಪಾಲಕ ಹುದ್ದೆಗಳೇ ಇಲ್ಲ ಎಂದಿದ್ದಾರೆ. ಆ ರಾಜ್ಯಗಳು ನಕಲಿ ಪ್ರಮಾಣ ಪತ್ರಗಳ ಬಗ್ಗೆ ಪತ್ರ ಬರೆದಿದ್ದರೂ ಯಾವುದೇ ಕ್ರಮ ಆಗಿಲ್ಲ. ಈ ದಾಖಲೆಗಳನ್ನು ಗಮನಿಸಿದರೆ ಲಂಚ ಪಡೆದು ಗುತ್ತಿಗೆಯನ್ನು ವಹಿಸಿರುವುದು ಸ್ಪಷ್ಟ. ಈ ಹಗರಣದ ವ್ಯಾಪ್ತಿ ತ್ರಿಪುರಾ ಹಾಗೂ ಮಣಿಪುರ ರಾಜ್ಯಗಳಿಗೂ ಬರುವುದರಿಂದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಅವರು ಆಗ್ರಹಿಸಿದರು. ಶನಿವಾರ ಮತ್ತೊಂದು ಹಗರಣವನ್ನು
ಬಿಚ್ಚಿಡುತ್ತೇನೆ ಎಂದು ಯಡಿಯೂರಪ್ಪ ಗುಡುಗಿದರು.