ಪಿಎಫ್ಐ ನಿಷೇಧ: ಕೇಂದ್ರ-ಕೇರಳದ ಮಧ್ಯೆ ಗೊಂದಲ
ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿದ ಆರೋಪಕ್ಕೆ ಗುರಿಯಾಗಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಮುಸ್ಲಿಂ ಸಂಘಟನೆಯ ನಿಷೇಧ ಪ್ರಸ್ತಾಪದ ಬಗ್ಗೆ ಕೇಂದ್ರ ಸರ್ಕಾರ ಹಾಗೂ ಕೇರಳ ಸರ್ಕಾರಗಳು ತದ್ವಿರುದ್ಧ ಹೇಳಿಕೆ ನೀಡಿ ಗೊಂದಲ ಸೃಷ್ಟಿಸಿವೆ.
ತಿರುವನಂತಪುರಂ : ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿದ ಆರೋಪಕ್ಕೆ ಗುರಿಯಾಗಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಮುಸ್ಲಿಂ ಸಂಘಟನೆಯ ನಿಷೇಧ ಪ್ರಸ್ತಾಪದ ಬಗ್ಗೆ ಕೇಂದ್ರ ಸರ್ಕಾರ ಹಾಗೂ ಕೇರಳ ಸರ್ಕಾರಗಳು ತದ್ವಿರುದ್ಧ ಹೇಳಿಕೆ ನೀಡಿ ಗೊಂದಲ ಸೃಷ್ಟಿಸಿವೆ.
ದಿಲ್ಲಿಯಲ್ಲಿ ಬುಧವಾರ ‘ದ ಹಿಂದೂ’ ಪತ್ರಿಕೆಯ ಜತೆ ಮಾತನಾಡಿದ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು, ‘ಪಿಎಫ್ಐ ನಿಷೇಧ ಮಾಡಬೇಕು ಎಂದು ಮಧ್ಯಪ್ರದೇಶದಲ್ಲಿ ಜನವರಿಯಲ್ಲಿ ನಡೆದ ಡಿಜಿಪಿಗಳ ಸಮ್ಮೇಳನದಲ್ಲಿ ಕೇರಳ ಡಿಜಿಪಿ ಲೋಕನಾಥ ಬೆಹೆರಾ ಕೋರಿದ್ದರು. ಪಿಎಫ್ಐ ಚಟುವಟಿಕೆಗಳ ಬಗ್ಗೆ 4 ಪ್ರಕರಣಗಳನ್ನು ಉದಾಹರಣೆಯನ್ನಾಗಿ ನೀಡಿದ್ದರು. ಇವುಗಳನ್ನು ನಾವು ಪರಿಶೀಲಿಸುತ್ತಿದ್ದೇವೆ’ ಎಂದರು.
ಈ ಸುದ್ದಿ ಗುರುವಾರ ಪ್ರಕಟವಾಗುತ್ತಿದ್ದಂತೆಯೇ ಪ್ರತಿಕ್ರಿಯೆ ನೀಡಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ‘ಕೇಂದ್ರ ಸರ್ಕಾರಕ್ಕೆ ನಾವು ಯಾವುದೇ ಸಂಘಟನೆ ನಿಷೇಧಕ್ಕೆ ಪ್ರಸ್ತಾಪ ಕಳಿಸಿಲ್ಲ. ಹಾಗೊಂದು ವೇಳೆ ನಿಷೇಧ ಆಗಲೇಬೇಕು ಎಂದಿದ್ದರೆ, ಮೊದಲು ಆರೆಸ್ಸೆಸ್ ನಿಷೇಧ ಆಗಬೇಕು’ ಎಂದು ಹೇಳಿದ್ದಾರೆ. ಲೋಕನಾಥ ಬೆಹೆರಾ ಅವರು ಮಾಧ್ಯಮಗಳಿಗೆ ಈ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ.