ಕಾವೇರಿ ನದಿ ಪುಷ್ಕರ ಸ್ನಾನ ಆರಂಭ; ಸಾವಿರಾರು ಭಕ್ತರಿಂದ ವಿಶೇಷ ಪೂಜೆ
12 ವರ್ಷಗಳಿಗೊಮ್ಮೆ ನಡೆಯುವ ಮಹಾ ಪುಷ್ಕರಣೆಗೆ ಈ ಬಾರಿ ಪವಿತ್ರ ನದಿ ಕಾವೇರಿ ಸಾಕ್ಷಿಯಾಗಲಿದ್ದಾಳೆ.
ಮಂಡ್ಯ(ಸೆ.12): ಐತಿಹಾಸಿಕ ನಗರ ಶ್ರೀರಂಗಪಟ್ಟಣದಲ್ಲಿ ಇಂದಿನಿಂದ ಮಹಾ ಪುಷ್ಕರ ಪವಿತ್ರ ಸ್ನಾನ ಕಾರ್ಯ ಆರಂಭವಾಗಿದೆ. 12 ವರ್ಷಗಳಿಗೊಮ್ಮೆ ನಡೆಯುವ ಮಹಾ ಪುಷ್ಕರಣೆಗೆ ಈ ಬಾರಿ ಪವಿತ್ರ ನದಿ ಕಾವೇರಿ ಸಾಕ್ಷಿಯಾಗಲಿದ್ದಾಳೆ.
ದಕ್ಷಿಣ ಗಂಗೆ, ತಾಯಿ ಕಾವೇರಿಯ ಸನ್ನಿಧಿಯಲ್ಲಿ ಭಕ್ತರು ಮಿಂದೆದ್ದು, ವ್ರತ, ತಪ, ಜಪ, ಯೋಗ, ತರ್ಪಣಾದಿಗಳನ್ನು ನೀಡಲಿದ್ದಾರೆ. ಕಳೆದ ವರ್ಷ ಕೃಷ್ಣಾ ನದಿಯಲ್ಲಿ ಮಹಾಪುಷ್ಕರಣೆ ನಡೆದಿತ್ತು. ಗುರು ಗ್ರಹವು ಸೆಪ್ಟೆಂಬರ್ 12ರಂದು ಬೆಳಗ್ಗೆ ತುಲಾ ರಾಶಿಗೆ ಪ್ರವೇಶವಾಗುತ್ತಿದ್ದಾನೆ. ಹೀಗಾಗಿ, ಕಾವೇರಿ ನದಿಯಲ್ಲಿ ಮಹಾ ಪುಷ್ಕರಣೆಗೊಳ್ಳಲಿದೆ.
ಕಾವೇರಿ ನದಿ ದಡದ ಸುಮಾರು 10 ಕಡೆಗಳಲ್ಲಿ ಭಕ್ತರ ಸ್ನಾನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಮಹಿಳೆಯರು ಸ್ನಾನ ಮಾಡಿ ಬಟ್ಟೆ ಬದಲಾಯಿಸುಕೊಳ್ಳಲು ತಾತ್ಕಾಲಿಕ ಡೇರೆಗಳು, ಸಂಚಾರಿ ಬೂತ್'ಗಳನ್ನು ನಿರ್ಮಿಸಲಾಗಿದೆ. ಶುಚಿತ್ವಕ್ಕೆ ಹೆಚ್ಚು ಮಹತ್ವ ನೀಡಲಾಗಿದ್ದು, ಪಟ್ಟಣ ಪಂಚಾಯಿತಿ ಈ ಬಗ್ಗೆ ನಿಗಾ ವಹಿಸಿದೆ. ಮೊಬೈಲ್ ಆಸ್ಪತ್ರೆಗಳನ್ನು ತಾತ್ಕಾಲಿಕವಾಗಿ ಆರಭಿಸಲಾಗಿದೆ. ಮೇಷಾದಿ ದ್ವಾದಶ ರಾಶಿಗಳಿಗೆ ಗುರು ಪ್ರವೇಶಿಸುವ ಕಾಲ ಇದಾಗಿದ್ದು, ಇಂದು ತುಲಾ ರಾಶಿಯನ್ನು ಪ್ರವೇಶ ಮಾಡುವ ಪುಣ್ಯಕಾಲ ಸಹ ಹೌದು.