ಉಗ್ರ ದಾಳಿ ಶಂಕೆ: ಡ್ಯಾಂಗಳ ಬಳಿ ಬಿಗಿಭದ್ರತೆ!
ಉಗ್ರರು ದಾಳಿ ನಡೆಯಬಹುದು ಎಂಬ ಕೇಂದ್ರ ಗುಪ್ತಚರ ಮಾಹಿತಿಯ ಹಿನ್ನೆಲೆ| ಡ್ಯಾಂಗಳ ಬಳಿ ಬಿಗಿಭದ್ರತೆ|
ಆಲಮಟ್ಟಿ[ಆ.18]: ಉಗ್ರರು ದಾಳಿ ನಡೆಯಬಹುದು ಎಂಬ ಕೇಂದ್ರ ಗುಪ್ತಚರ ಮಾಹಿತಿಯ ಹಿನ್ನೆಲೆಯಲ್ಲಿ ರಾಜ್ಯದ ಜಲಾಶಯ, ವಿಮಾನ ನಿಲ್ದಾಣ, ರೈಲು ನಿಲ್ದಾಣ, ಬಸ್ ನಿಲ್ದಾಣ, ದೇವಸ್ಥಾನ, ಕರಾವಳಿ ಪ್ರದೇಶಗಳಲ್ಲಿ ಭಾರೀ ಭದ್ರತೆ ಒದಗಿಸಲಾಗಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಅನುಮಾನ ಬಂದ ಕಡೆ ಪ್ರಯಾಣಿಕರನ್ನು ತಪಾಸಣೆ ಮಾಡಲಾಗುತ್ತಿದೆ. ಕೆಆರ್ಎಸ್ ಅಣೆಕಟ್ಟೆಯ ಸೇತುವೆಯ ಮೇಲೆ ಯಾರನ್ನೂ ಬಿಡುತ್ತಿಲ್ಲ. ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದಾರೆ. ಆಲಮಟ್ಟಿಯಲ್ಲಿ ಬಾಂಬ್ ಪತ್ತೆ ದಳಗಳು ಬೀಡುಬಿಟ್ಟಿವೆ. ಹಲವು ಬಾರಿ ತಪಾಸಣೆ ನಡೆಸುತ್ತಿದ್ದಾರೆ.
ಜಲಾಶಯದ ಬಳಿಗೆ ಖಾಸಗಿ ವಾಹನಗಳನ್ನು ನಿಷೇಧಿಸಲಾಗಿದೆ. ದಿನದ 24 ಗಂಟೆಯೂ ಸರದಿ ಪ್ರಕಾರ ಜಲಾಶಯದ ಭದ್ರತೆಯ ಪರಿಶೀಲನೆ ನಡೆಸಲಾಗುತ್ತಿದೆ. ಪ್ರವಾಸಿ ಸ್ಥಳಗಳಲ್ಲಿ, ದೇವಸ್ಥಾನಗಳಲ್ಲಿಯೂ ಕಟ್ಟೆಚ್ಚರ ವಹಿಸಲಾಗಿದೆ. ವಿದೇಶಿ ಅಥವಾ ಸಂಶಯಾಸ್ಪದ ಬೋಟ್ ಸಂಚರಿಸುತ್ತಿದ್ದರೆ ತಿಳಿಸುವಂತೆ ಮೀನುಗಾರರಿಗೆ ಇಲಾಖೆ ಸೂಚನೆ ನೀಡಿದೆ.