ಬಿಜೆಪಿ ನಾಯಕರೊಂದಿಗೆ ಸಾ ರಾ ಮಹೇಶ್ : ಅಚ್ಚರಿ ಭೇಟಿ
ಬಿಜೆಪಿ ನಾಯಕರೊಂದಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಆಪ್ತ ಸಾ ರಾ ಮಹೇಶ್ ಬಿಜೆಪಿ ನಾಯಕರನ್ನು ಭೇಟಿ ಮಾಡಿದ್ದು, ಅಚ್ಚರಿ ಉಂಟು ಮಾಡಿದೆ.
ಬೆಂಗಳೂರು [ಜು.12]: ಅಳಿವು-ಉಳಿವಿನ ಅಂಚಿನಲ್ಲಿರುವ ಮೈತ್ರಿ ಸರ್ಕಾರದ ಉಳಿವಿಗಾಗಿ ಮಿತ್ರ ಪಕ್ಷ ಗಳು ಇನ್ನಿಲ್ಲದ ಕಸರತ್ತು ನಡೆಸುತ್ತಿರುವ ನಡುವೆಯೇ ಗುರುವಾರ ರಾತ್ರಿ ದಿಢೀರ್ ರಾಜಕೀಯ ಬೆಳವಣಿಗೆ ನಡೆದಿದ್ದು, ಮುಖ್ಯಮಂತ್ರಿ ಎಚ್ .ಡಿ.ಕುಮಾರಸ್ವಾಮಿ ಅವರ ಬಲಗೈ ಬಂಟ ಎಂದೇ ಗುರುತಿಸಿಕೊಂಡಿರುವ ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್ ಅವರು ಬಿಜೆಪಿ ನಾಯಕರನ್ನು ಭೇಟಿ ಮಾಡಿರುವುದು ತೀವ್ರ ಕುತೂಹಲ ಕೆರಳಿಸಿದೆ.
ಅಳಿವು-ಉಳಿವಿನ ಅಂಚಿನಲ್ಲಿರುವ ಮೈತ್ರಿ ಸರ್ಕಾರದ ಉಳಿವಿಗಾಗಿ ಮಿತ್ರ ಪಕ್ಷಗಳ ಮುಖಂಡರು ಇನ್ನಿಲ್ಲದ ಕಸರತ್ತು ನಡೆಸುತ್ತಿರುವ ನಡುವೆಯೇ ಗುರುವಾರ ರಾತ್ರಿ ದಿಢೀರ್ ರಾಜಕೀಯ ಬೆಳವಣಿಗೆ ನಡೆದಿದ್ದು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಬಲಗೈ ಬಂಟ ಎಂದೇ ಗುರುತಿಸಿಕೊಂಡಿರುವ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಅವರು ಬಿಜೆಪಿ ನಾಯಕರನ್ನು ಭೇಟಿ ಮಾಡಿರುವುದು ತೀವ್ರ ಕುತೂಹಲ ಕೆರಳಿಸಿದೆ.
ರಾಜ್ಯ ರಾಜಕಾರಣವು ಸೂಕ್ಷ್ಮಪರಿಸ್ಥಿತಿಯಲ್ಲಿರುವ ವೇಳೆ ನಗರದ ಕುಮಾರಕೃಪಾ ವಸತಿಗೃಹದಲ್ಲಿ ಸಚಿವ ಮಹೇಶ್ ಹಾಗೂ ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರ್ ರಾವ್, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಭೇಟಿಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಬಿಜೆಪಿ ನಾಯಕರನ್ನು ಭೇಟಿ ಮಾಡಿದ ಸಾ.ರಾ.ಮಹೇಶ್ ನಡೆಯ ಬಗ್ಗೆ ರಾಜಕೀಯ ವಲಯದಲ್ಲಿ ಇನ್ನಿಲ್ಲದ ಚರ್ಚೆಗೆ ಗ್ರಾಸವಾಗಿದೆ.
ಮೈತ್ರಿ ಸರ್ಕಾರದ ಹತಾಶೆಯ ಪ್ರಯತ್ನ ನಡೆಸಿತ್ತೆ ಅಥವಾ ಬಿಜೆಪಿಯೊಂದಿಗೆ ಹೊಂದಾಣಿಕೆಯ ಮಾತುಕತೆ ಏನಾದರೂ ನಡೆಸಲಾಗಿದೆಯೇ ಎಂಬ ಮಾತುಗಳು ರಾಜಕೀಯದಲ್ಲಿ ಕೇಳಿಬಂದಿವೆ. ಮಿತ್ರಪಕ್ಷಗಳ ನಡುವೆ ಸಮನ್ವಯ ಕೊರತೆಯಿಂದಾಗಿ ಭಿನ್ನಮತ ಉಲ್ಬಣಗೊಂಡಿವೆ. ಹೀಗಾಗಿ ಬಿಜೆಪಿಯೊಂದಿಗೆ ಕೈ ಜೋಡಿಸುವ ತಂತ್ರವೇನಾದರೂ ಹೆಣೆಯಲಾಗಿದೆಯೇ, ಜೆಡಿಎಸ್-ಬಿಜೆಪಿಯ ಸಂಪರ್ಕ ಸೇತುವೆಯಾಗಿ ಮಹೇಶ್ ಕೆಲಸ ಮಾಡುತ್ತಿದ್ದಾರೆಯೇ ಎಂಬ ಪ್ರಶ್ನೆಗಳು ಉದ್ಭವವಾಗಿವೆ.