ರಾಜ್ಯ ಸರ್ಕಾರದಿಂದ ಜನರಿಗೆ ಮತ್ತೊಂದು ಹೊಸ ಭಾಗ್ಯ..!
ರಾಜ್ಯ ಸರ್ಕಾರ ಮುಂದಿನ ಬಜೆಟ್ನಲ್ಲಿ ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳಿಗೆ ಪ್ರತಿವರ್ಷ ಪುರುಷರಿಗೆ ಶರ್ಟ್, ಪಂಚೆ ಹಾಗೂ ಮಹಿಳೆಯರಿಗೆ ಸೀರೆ, ರವಿಕೆ ಕೊಡಲು ‘ಇಂದಿರಾ ವಸ್ತ್ರಭಾಗ್ಯ’ ಯೋಜನೆ ಜಾರಿಗೆ ತರಲು ಗಂಭೀರ ಚಿಂತನೆ ನಡೆಸಿದೆ.
ಬೆಂಗಳೂರು(ಜ.11): ರಾಜ್ಯ ಸರ್ಕಾರ ಮುಂದಿನ ಬಜೆಟ್ನಲ್ಲಿ ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳಿಗೆ ಪ್ರತಿವರ್ಷ ಪುರುಷರಿಗೆ ಶರ್ಟ್, ಪಂಚೆ ಹಾಗೂ ಮಹಿಳೆಯರಿಗೆ ಸೀರೆ, ರವಿಕೆ ಕೊಡಲು ‘ಇಂದಿರಾ ವಸ್ತ್ರಭಾಗ್ಯ’ ಯೋಜನೆ ಜಾರಿಗೆ ತರಲು ಗಂಭೀರ ಚಿಂತನೆ ನಡೆಸಿದೆ.
ಈ ಕುರಿತು ಜವಳಿ ಖಾತೆ ಸಚಿವ ರುದ್ರಪ್ಪ ಲಮಾಣಿ ಅವರು ಕಳೆದ ವಾರ ಸರ್ಕಾರಕ್ಕೆ ಪ್ರಸ್ತಾವ ಕಳಿಸಿದ್ದಾರೆ. ಒಂದೆಡೆ ಇಂದಿರಾ ವಸ್ತ್ರಭಾಗ್ಯ ಯೋಜನೆಯಡಿ ಬಡವರಿಗೆ ಅನುಕೂಲವಾದರೆ ಮತ್ತೊಂದೆಡೆ ಬಡವರಿಗೆ ನೀಡಲಾಗುವ ಬಟ್ಟೆಗಳನ್ನು ರಾಜ್ಯದ ಸರಿಸುಮಾರು 25 ಸಾವಿರ ನೇಕಾರ ಕುಟುಂಬಗಳಿಂದ ಖರೀದಿಸಿದರೆ ಅವರಿಗೂ ಅನುಕೂಲವಾಗುತ್ತದೆ.
ಇದರಿಂದ ಸರ್ಕಾರ 550 ಕೋಟಿ ರು.ಗಳನ್ನು ವೆಚ್ಚ ಮಾಡಬೇಕಾಗುತ್ತದೆ. ಜವಳಿ ಇಲಾಖೆಯಿಂದ ಈ ವೆಚ್ಚವನ್ನು ಭರಿಸಿ, ರಾಜ್ಯದ ಬಡವರಿಗೆ ಬಿಪಿಎಲ್ ಮತ್ತು ಅಂತ್ಯೋದಯ ಪಡಿತರ ಚೀಟಿಗಳ ಆಧಾರದ ಮೇಲೆ ನೀಡಬಹುದಾಗಿದೆ ಎಂದು ಪ್ರಸ್ತಾವದಲ್ಲಿ ಕೋರಿದ್ದಾರೆ.
ಏನೇನು ಕೊಡ್ತಾರೆ?: , ಪುರುಷರಿಗೆ 2 ಮೀಟರ್ ಗಾತ್ರದ 150 ರು. ಗಳ ದರದ ಒಂದು ಕಾಟನ್ ಪಂಚೆ ಹಾಗೂ 2 ಮೀಟರ್ ಗಾತ್ರದ 100 ರು. ದರದ ಒಂದು ಪಾಲಿಸ್ಟರ್ ಶರ್ಟ್ ಬಟ್ಟೆ ಸೇರಿದಂತೆ ಒಟ್ಟು 250 ರು. ದರದ ಬಟ್ಟೆ ಕೊಡಲು ಚಿಂತನೆ ನಡೆದಿದೆ. ಇನ್ನು ಮಹಿಳೆಯರಿಗೆ 5.5 ಮೀಟರ್ ಉದ್ದದ 200 ರು. ದರದ ಪಾಲಿಸ್ಟರ್ ಸೀರೆ ಮತ್ತು 0.80 ಮೀ. ಉದ್ದದ 50 ರು. ಮೌಲ್ಯದ ಪಾಲಿ ಮತ್ತು ಕಾಟನ್ ಮಿಶ್ರಿತ ರವಿಕೆ ನೀಡಲಾಗುತ್ತದೆ.