ಬೆಂಗಳೂರು(ಸೆ. 13): ಕಾವೇರಿ ವಿಚಾರದಲ್ಲಿ ಯಾವುದೇ ದೊಡ್ಡ ರಿಸ್ಕ್ ತೆಗೆದುಕೊಳ್ಳಲು ಸರಕಾರ ಹಿಂದೇಟು ಹಾಕಿದೆ. ತಮಿಳುನಾಡಿನ ಹರಿಸುತ್ತಿದ್ದ ನೀರನ್ನು ನಿಲ್ಲಿಸುವ ಅಥವಾ ವಿಧಾನಸಭೆಯನ್ನೇ ವಿಸರ್ಜಿಸಿ ಜನರ ಬಳಿಗೆ ತೆರಳಬಹುದೆಂಬ ವದಂತಿಗೆ ತೆರೆ ಬಿದ್ದಿದೆ. ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ಮುಂದುವರಿಸಿ, ಸುಪ್ರೀಂಕೋರ್ಟ್ ಆದೇಶ ಪಾಲಿಸಲು ಸರಕಾರ ನಿರ್ಧರಿಸಿದೆ. ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಸರಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಮೂಲಗಳ ಪ್ರಕಾರ, ನ್ಯಾಯಾಂಗ ನಿಂದನೆಯ ಅಸ್ತ್ರದಿಂದ ತಪ್ಪಿಸಿಕೊಳ್ಳಲು ಸರಕಾರ ಈ ನಿರ್ಧಾರ ಕೈಗೊಂಡಿರಬಹುದೆಂದು ಭಾವಿಸಲಾಗಿದೆ.
ಇದೇ ವೇಳೆ, ಮಂತ್ರಿ ಪರಿಷತ್ತು ಬುಧವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಕಾವೇರಿ ವಿಚಾರದಲ್ಲಿ ಮಧ್ಯಪ್ರವೇಶಿಸುವಂತೆ ಕೋರಲು ನಿಶ್ಚಯಿಸಲಾಗಿದೆ.
ಇದಕ್ಕೂ ಮುನ್ನ ಸಚಿವ ಸಂಪುಟ ಸಭೆಯಲ್ಲಿ ಬೇರೊಂದು ಸುಪ್ರೀಂಕೋರ್ಟ್ ಪೀಠದಲ್ಲಿ ವಿಚಾರಣೆಗೆ ಮನವಿ ಮಾಡಿಕೊಳ್ಳುವ ಕುರಿತು ಚರ್ಚೆ ನಡೆದಿತ್ತು. ಕಾವೇರಿ ಪ್ರಕರಣದ ವಿಚಾರಣೆ ನಡೆಯುತ್ತಿರುವ ಸುಪ್ರೀಂಕೋರ್ಟ್ ಪೀಠದಲ್ಲಿ ನ್ಯಾಯಮೂರ್ತಿಗಳಾಗಿರುವ ಲಲಿತ್ ಅವರು ಹಿಂದೆ ಜಯಲಲಿತಾ ಪರ ವಕೀಲರಾಗಿದ್ದರು. ಅವರಿಂದ ಕರ್ನಾಟಕಕ್ಕೆ ಯಾವುದೇ ನ್ಯಾಯ ದೊರಕುವುದಿಲ್ಲ. ಹೀಗಾಗಿ, ಸುಪ್ರೀಂಕೋರ್ಟ್ ಪೀಠವನ್ನೇ ಬದಲಾಯಿಸಬೇಕು. ಈ ನಿಟ್ಟಿನಲ್ಲಿ ಮಂಡ್ಯದ ರೈತರಿಂದ ಸುಪ್ರೀಂಕೋರ್ಟ್'ಗೆ ಮೇಲ್ಮನವಿ ಸಲ್ಲಿಸಿಸುವ ಕುರಿತು ಚರ್ಚೆಗಳಾದವು. ಅದರೆ, ಈ ಬಗ್ಗೆ ಸರಕಾರ ಅಂತಿಮ ನಿರ್ಧಾರಕ್ಕೆ ಇನ್ನೂ ಬಂದಿಲ್ಲ.
