ಹೊಸ ವರ್ಷದಂದೇ ಸರ್ಕಾರದಿಂದ ಬೆಲೆ ಏರಿಕೆ ಬಿಸಿ
ಹೊಸ ವರ್ಷದಂದೇ ಸರ್ಕಾರ ಸಾರ್ವಜನಿಕರಿಗೆ ಶಾಕ್ ನೀಡಿದೆ. ಅಟಲ್ ಜೀ ಜನಸ್ನೇಹಿ ಕೇಂದ್ರಗಳಲ್ಲಿ ವಿವಿಧ ಪ್ರಮಾಣ ಪತ್ರ, ಪಹಣಿ ಪತ್ರ, ಪಿಂಚಣಿ ಮಂಜೂರಾತಿ ಸೇರಿದಂತೆ 52 ಸೇವೆಗಳಿಗೆ ವಿಧಿಸಿದ್ದ ಶುಲ್ಕವನ್ನುಏರಿಕೆ ಮಾಡಿದೆ.
ಬೆಂಗಳೂರು : ಅಟಲ್ ಜೀ ಜನಸ್ನೇಹಿ ಕೇಂದ್ರಗಳಲ್ಲಿ ವಿವಿಧ ಪ್ರಮಾಣ ಪತ್ರ, ಪಹಣಿ ಪತ್ರ, ಪಿಂಚಣಿ ಮಂಜೂರಾತಿ ಸೇರಿದಂತೆ 52 ಸೇವೆಗಳಿಗೆ ವಿಧಿಸಿದ್ದ ಶುಲ್ಕವನ್ನು ಜನವರಿ 1ರಿಂದ ಹೆಚ್ಚಿಸಿ ಕಂದಾಯ ಇಲಾಖೆ ಆದೇಶಿಸಿದೆ.
ವಿವಿಧ ಪ್ರಮಾಣ ಪತ್ರಗಳ ಸೇವೆಗೆ ನಿಗದಿಪಡಿಸಿದ್ದ 15 ರು. ಶುಲ್ಕವನ್ನು 25 ರು.ಗಳಿಗೆ, ಪಹಣಿ ಪತ್ರದ ಶುಲ್ಕವನ್ನು 10 ರು.ನಿಂದ 15 ರು.ಗೆ (ಮೊದಲ ನಾಲ್ಕು ಪುಟಗಳ ಪಹಣಿಗೆ 15 ರು. ಹಾಗೂ 5ನೇ ಪುಟದ ನಂತರ ಪ್ರತಿ ಪುಟಕ್ಕೆ 2 ರು. ನಂತೆ ಹೆಚ್ಚಳ) ಜಾಸ್ತಿ ಮಾಡಲಾಗಿದೆ.
ಸ್ಪೀಡ್ ಪೋಸ್ಟ್ನಲ್ಲಿ ಲಭ್ಯ: ಯಾವುದೇ ನಾಗರಿಕರು ಸ್ವ-ಇಚ್ಛೆಯಿಂದ ಪ್ರಮಾಣ ಪತ್ರವನ್ನು ಅಂಚೆ ಅಥವಾ ಸ್ಪೀಡ್ ಪೋಸ್ಟ್ ಮೂಲಕ ಪಡೆಯಲು ಇಚ್ಛಿಸಿದರೆ ಅಂತಹ ಸೇವೆಗಳಿಗೂ ಸಹ ದರ ನಿಗದಿಪಡಿಸಿ ಆದೇಶ ಹೊರಡಿಸಲಾಗಿದೆ.
2006ರಿಂದ ಆರಂಭಗೊಂಡ ಈ ಸೇವೆಗಳ ಶುಲ್ಕವನ್ನು ಈವರೆಗೆ ಹೆಚ್ಚಿಸಿರುವುದಿಲ್ಲ. ಪ್ರಸ್ತುತ ಬಳಕೆದಾರರ ಶುಲ್ಕವನ್ನು ಆಧರಿಸಿ ಬರುವ ವಾರ್ಷಿಕ ಆದಾಯವು ಅಟಲ್ಜೀ ಜನಸ್ನೇಹಿ ಕೇಂದ್ರ ಮತ್ತು ಭೂಮಿ ಯೋಜನೆಯ ವ್ಯವಸ್ಥೆಯನ್ನು ನಡೆಸಲು ತಗಲುವ ವಾರ್ಷಿಕ ವೆಚ್ಚಕ್ಕಿಂತ ಕಡಿಮೆ ಇರುವ ಹಿನ್ನೆಲೆಯಲ್ಲಿ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಇತ್ತೀಚೆಗೆ ದರ ಹೆಚ್ಚಳಕ್ಕೆ ನಿರ್ಣಯ ಕೈಗೊಳ್ಳಲಾಗಿತ್ತು.