ವಿದ್ಯಾರ್ಥಿಗಳು ಬರೆಯುವ ಪರೀಕ್ಷಾ ವಿಧಾನದಲ್ಲಿ  ಬದಲಾವಣೆ ತರಲು ಚಿಂತನೆ ನಡೆಸಲಾಗಿದೆ ಎಂದು ಶಿಕ್ಷಣ ಸಚಿವ ಎನ್ ಮಹೇಶ್ ಹೇಳಿದ್ದಾರೆ. ಸದ್ಯ ಇರುವ  ಪುಸ್ತಕ ಮುಚ್ಚಿಟ್ಟು ಬರೆಯುವ ಪರೀಕ್ಷೆಗಳು ಅವೈಜ್ಞಾನಿಕವಾಗಿದ್ದು, ರಾಜ್ಯದಲ್ಲಿ ಪುಸ್ತಕ ನೋಡಿಕೊಂಡು ಪರೀಕ್ಷೆ ಬರೆಯುವ ಪದ್ಧತಿ ತರಲು ಚಿಂತನೆ ನಡೆಸಿದ್ದೇನೆ ಎಂದು ಹೇಳಿದ್ದಾರೆ. 

ಚಾಮರಾಜನಗರ : ಪುಸ್ತಕ ಮುಚ್ಚಿಟ್ಟು ಬರೆಯುವ ಪರೀಕ್ಷೆಗಳು ಅವೈಜ್ಞಾನಿಕವಾಗಿದ್ದು, ರಾಜ್ಯದಲ್ಲಿ ಪುಸ್ತಕ ನೋಡಿಕೊಂಡು ಪರೀಕ್ಷೆ ಬರೆಯುವ ಪದ್ಧತಿ ತರಲು ಚಿಂತನೆ ನಡೆಸಿದ್ದೇನೆ. ಇದು ದೇಶದಲ್ಲೇ ಮೊದಲು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎನ್. ಮಹೇಶ್ ತಿಳಿಸಿದ್ದಾರೆ.

Add Asianetnews Kannada as a Preferred SourcegooglePreferred

ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಬಹುಜನ ವಿದ್ಯಾರ್ಥಿ ಸಂಘದ ವತಿಯಿಂದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಜನ್ಮದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು. ಮಕ್ಕಳೇನು ಕೈದಿಗಳಾ?: ಪೊಲೀಸ್ ಭದ್ರತೆ ಹಾಗೂ ಸಿಸಿ ಕ್ಯಾಮೆರಾ ಅಳವಡಿಕೆಯಲ್ಲಿ ಪರೀಕ್ಷೆಗಳು ನಡೆಯುತ್ತಿವೆ. ಪರೀಕ್ಷೆ ಬರೆಯುವ ಮಕ್ಕಳು ಕೈದಿಗಳಾ? ಇಂತಹ ಪದ್ಧತಿ ಅವೈಜ್ಞಾನಿಕವಾಗಿದೆ ಎಂದು ಅವರು ಪ್ರತಿಪಾದಿಸಿದರು. ಪ್ರತಿ ಕ್ಲಾಸ್‌ನಲ್ಲಿ ಅಭ್ಯಾಸ ಮುಗಿದ ನಂತರ ಪ್ರಶ್ನೆ ತಯಾರಿಸಿ ಕೊಡಬೇಕು. ಶಿಕ್ಷಕರು ಪುಸ್ತಕ ನೋಡಿ ಬರೆಯಲು ಮಕ್ಕಳಿಗೆ ಹೇಳಬೇಕು. 

ಪ್ರಾರಂಭದಲ್ಲಿ ಪುಸ್ತಕ ನೋಡುತ್ತಾ ಬರೆಯುವುದನ್ನು ಅಭ್ಯಾಸ ಮಾಡಿದರೆ ಮುಂದೆ ಪುಸ್ತಕ ನೋಡದೇ ಬರೆಯತ್ತಾನೆ. ಪುಸ್ತಕ ನೋಡಿಕೊಂಡೇ ಪರೀಕ್ಷೆ ಬರೆಯುವ ಮೂಲಕ ಮಕ್ಕಳಲ್ಲಿ ವಿಶ್ಲೇಷಣಾ ಗುಣ ಮತ್ತು ಕ್ರಿಯಾಶೀಲ ಗುಣ ಬೆಳೆಯುತ್ತದೆ ಎಂದು ತಿಳಿಸಿದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಸಿ.ಪುಟ್ಟರಂಗಶೆಟ್ಟಿ ಇದ್ದರು.

ಪ್ರಾಥಮಿಕ ಹಂತದಲ್ಲೇ ಇಂಗ್ಲಿಷ್ ಕಲಿಕೆ: ಇಂಗ್ಲಿಷ್ ಭಾಷೆ ಜೀವನಕ್ಕೆ ಅನಿವಾರ್ಯವಾಗಿದ್ದು, ಅದನ್ನೊಂದು ಭಾಷೆಯನ್ನಾಗಿ ಪ್ರಾಥಮಿಕ ಶಾಲೆಯಲ್ಲೇ ಕಲಿಸುವ ನಿಟ್ಟಿನಲ್ಲಿ ಚರ್ಚೆ ಮಾಡಲಾಗುತ್ತಿದೆ ಎಂದರು. ಇದೇ ವೇಳೆ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿನ ತರಗತಿಗಳಿಗೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಮೊಬೈಲ್ ಪೋನ್ ಕೊಂಡೊಯ್ಯುವುದನ್ನು ನಿರ್ಬಂಧಿಸಲಾಗಿದೆ. ಯಾವ ಸಂದರ್ಭದಲ್ಲಿ ಬೇಕಾದರೂ ಶಾಲೆಗೆ ಜಿಲ್ಲಾಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ಮಾಡುತ್ತೇನೆ. ಕ್ಲಾಸ್ ರೂಂಗಳಲ್ಲಿ ಮೊದಲು ನಗುನಗುತ್ತಾ ಮಕ್ಕಳೊಂದಿಗೆ ಶಿಕ್ಷಕರು ಮಾತನಾಡಬೇಕು ಎಂದರು.