ಮಂಗಳವಾರ ಅಂದರೆ ಆಗಸ್ಟ್ 20 ರಂದು ಬಿಎಸ್ ಯಡಿಯೂರಪ್ಪ ಸಂಪುಟ ರಚನೆಗೆ ಕಾಲ ಕೂಡಿ ಬಂದಿದೆ. ಅಳೆದು-ತೂಗಿ ಲೆಕ್ಕಾಚಾರ ಹಾಕಿ ಪಟ್ಟಿ ಅಂತಿಮ ಮಾಡಲಾಗಿದೆ. ಹಾಗಾದರೆ ಅಂತಿಮ ಪಟ್ಟಿಯಲ್ಲಿ ಯಾರೆಲ್ಲ ಇದ್ದಾರೆ.

ಬೆಂಗಳೂರು[ಆ. 18] ಕೊನೆಗೂ ಸಿಎಂ ಯಡಿಯೂರಪ್ಪ ಸರ್ಕಾರಕ್ಕೆ ಕದನ ಕಲಿಗಳ ಆಯ್ಕೆ ನಡೆದಿದೆ. ಮಂಗಳವಾರ ಅಂದ್ರೆ ಆಗಸ್ಟ್ 20ರಂದು ಸಂಪುಟ ರಚನೆ ಖಚಿತವಾಗಿದೆ. ಅಂದು ಬಿಜೆಪಿ ಶಾಸಕಾಂಗ ಸಭೆಗೂ ಮುನ್ನವೇ ನೂತನ ಸಚಿವರ ಪ್ರಮಾಣ ವಚನ ಸಮಾರಂಭಕ್ಕೆ ಭರದ ಸಿದ್ಧತೆ ನಡೆದಿದೆ.

Add Asianetnews Kannada as a Preferred SourcegooglePreferred

ಹೈಕಮಾಂಡ್ ಅಣತಿಯಂತೆ ಅಳೆದು ತೂಗಿ ಸಂಪುಟ ರಚನೆಗೆ ಮುಂದಾಗಿರುವ ಬಿಎಸ್ವೈ, ತಮ್ಮ ಸಂಪುಟಕ್ಕೆ ಮೊದಲ ಹಂತದಲ್ಲಿ 13 ರಿಂದ 15 ಶಾಸಕರಿಗೆ ಸಚಿವ ಸ್ಥಾನ ನೀಡಲು ಚಿಂತನೆ ನಡೆಸಿದ್ದಾರೆ. ಆದ್ರೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಇದುವರೆಗೂ ಸಚಿವರ ಫೈನಲ್ ಪಟ್ಟಿ ನೀಡಿಲ್ಲ. ಸೋಮವಾರ ಫೈನಲ್ ಲಿಸ್ಟ್ ಯಡಿಯೂರಪ್ಪ ಕೈ ಸೇರುವ ಸಾಧ್ಯತೆಯಿದೆ.

ಲಿಂಗಾಯತ ಬಣಜಿಗ ಕೋಟಾದಡಿಯಲ್ಲಿ ಜಗದೀಶ್ ಶೆಟ್ಟರ್ ಹಾಗೂ ಉಮೇಶ್ ಕತ್ತಿ ಹೆಸರು ಕೇಳಿ ಬರುತ್ತಿದ್ದರೆ, ಲಿಂಗಾಯತ ನೊಣಬ ಕೋಟಾದಡಿಯಲ್ಲಿ ಮಾಧುಸ್ವಾಮಿ, ಲಿಂಗಾಯತ ಗೌಡ ಕೋಟಾದಡಿಯಲ್ಲಿ ವಿ. ಸೋಮಣ್ಣ , ಲಿಂಗಾಯತ ಪಂಚಮಸಾಲಿಯಲ್ಲಿ ಮಹಿಳಾ ಕೋಟಾಕ್ಕೆ ಶಶಿಕಲಾ ಜೊಲ್ಲೆ , ಬ್ರಾಹ್ಮಣ ಸಮುದಾಯದಲ್ಲಿ ಸುರೇಶ್ ಕುಮಾರ್, ಕುರುಬ ಸಮುದಾಯದಲ್ಲಿ ಕೆ.ಎಸ್.ಈಶ್ವರಪ್ಪ, ಒಕ್ಕಲಿಗ ಸಮುದಾಯದಲ್ಲಿ ಆರ್. ಅಶೋಕ್ ಹಾಗೂ ಸಿಟಿ ರವಿ, ದಲಿತ ಸಮುದಾಯದಲ್ಲಿ ಗೋವಿಂದ ಕಾರಜೋಳ ಹಾಗೂ ಎಂಪಿ ಕುಮಾರಸ್ವಾಮಿ, ವಾಲ್ಮೀಕಿ ಸಮುದಾಯದಲ್ಲಿ ಶ್ರೀರಾಮುಲು, ಬಂಟರ ಸಮುದಾಯದಲ್ಲಿ ಹಾಲಾಡಿ ಶ್ರೀನಿವಾಸ ಶೆಟ್ಟಿ, ಈಡಿಗ ಸಮುದಾಯ, ಕೋಲಿ ಸಮುದಾಯದಿಂದ ರವಿಕುಮಾರ್‌ ಗೆ ಸ್ಥಾನ ಸಿಗುವ ಸಾಧ್ಯತೆಯಿದೆ ಎನ್ನಲಾಗಿದೆ.

ಮಂತ್ರಿಗಿರಿಗಾಗಿ ಯಾವ ಯಾವ ನಾಯಕರ ನಡುವೆ ಪೈಪೋಟಿಯಿದೆ ಅಂತ ನೋಡೋದಾದ್ರೆ, ಲಿಂಗಾಯತ ಸಮುದಾಯದಲ್ಲಿ ಜಗದೀಶ್ ಶೆಟ್ಟರ್ ಮತ್ತು ಬಸವರಾಜ್ ಬೊಮ್ಮಾಯಿ ಪೈಪೋಟಿ ಶುರುವಾಗಿದೆ. ಹಾಗೇಯೇ ಪಂಚಮಸಾಲಿ ಲಿಂಗಾಯತ ಸಮುದಾಯದಲ್ಲಿ ಮುರುಗೇಶ್ ನಿರಾಣಿ , ಕಳಕಪ್ಪ ಬಂಡಿ ಮತ್ತು ಶಶಿಕಲಾ ಜೊಲ್ಲೆ ನಡುವೆ ಜಿದ್ದಾಜಿದಿಯಿದೆ. ಬ್ರಾಹ್ಮಣ ಸಮುದಾಯದಲ್ಲಿ ರಾಮದಾಸ್ ಮತ್ತು ರವಿ ಸುಬ್ರಮಣ್ಯಂ ಸುರೇಶ್ ಸುರೇಶ್ ಕುಮಾರ್ ನಡುವೆ ಪೈಪೋಟಿಯಿದ್ರೆ, ಈಡಿಗ ಸಮುದಾಯದಲ್ಲಿ ಸುನೀಲ್ ಕುಮಾರ್ ಮತ್ತು ಕುಮಾರ ಬಂಗಾರಪ್ಪ ಹಾಗೂ ಕೋಟಾ ಶ್ರೀನಿವಾಸ ಪೂಜಾರಿ ನಡುವೆ ಪೈಪೋಟಿಯಿದೆ. ಸಚಿವಗಿರಿ ರೇಸ್ ನಲ್ಲಿ ಈ ಹೆಸರು ಕೇಳಿ ಬರ್ತಿದ್ದು, ಕೊನೆ ಘಳಿಗೆಯಲ್ಲಿ ಅಚ್ಚರಿಯ ಆಯ್ಕೆ ನಡೆಯಬಹುದು.