Asianet Suvarna News Asianet Suvarna News

ಐದೂ ಕ್ಷೇತ್ರದಲ್ಲಿ ನಮ್ಮದೇ ಗೆಲುವು

ಹಳೆಯದೆಲ್ಲವನ್ನೂ ಮರೆತು ದೇಶದ ಹಿತದೃಷ್ಟಿಯಿಂದ ಒಟ್ಟಾಗಿ ಚುನಾವಣೆ ಎದುರಿಸಲು ಮುಂದಾಗಿದ್ದೇವೆ. ಐದು ಕ್ಷೇತ್ರ ಗೆಲ್ಲುವ ಮೂಲಕ ದೇಶಕ್ಕೆ ಸ್ಪಷ್ಟ ಸಂದೇಶ ರವಾನಿಸುತ್ತೇವೆ ಎಂದು ಕಾಂಗ್ರೆಸ್ - ಜೆಡಿಎಸ್ ನಾಯಕರು ಭರವಸೆ ವ್ಯಕ್ತಪಡಿಸಿದ್ದಾರೆ. 

Karnataka Bypoll We Will 5 Constituency Says Congress JDS Leader
Author
Bengaluru, First Published Oct 21, 2018, 12:28 PM IST

ಬೆಂಗಳೂರು :  ಐದು ಕ್ಷೇತ್ರಗಳಿಗೆ ನಡೆಯುವ ಉಪ ಚುನಾವಣೆಯಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಕೈಗೊಳ್ಳಲು, ಅಗತ್ಯಬಿದ್ದರೆ ಜಂಟಿ ಪ್ರಚಾರ ನಡೆಸಲು ನಿರ್ಧರಿಸುವ ಮೂಲಕ ಜೆಡಿಎಸ್ ಹಾಗೂ ಕಾಂಗ್ರೆಸ್ ನಾಯಕರು ಬಿಜೆಪಿ ವಿರುದ್ಧ ರಣಕಹಳೆ ಮೊಳಗಿಸಿದ್ದಾರೆ.

ಹನ್ನೆರಡು ವರ್ಷದ ಬಳಿಕ ಮಾಜಿ ಪ್ರಧಾನಿ ಎಚ್ .ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜಂಟಿ ಸುದ್ದಿಗೋಷ್ಠಿ ನಡೆಸಿ, ಉಪ ಚುನಾವಣೆಯಲ್ಲಿ ಐದೂ ಕ್ಷೇತ್ರಗಳನ್ನೂ ಗೆಲ್ಲುತ್ತೇವೆ. ಈ ಮೂಲಕ ಜಾತ್ಯತೀತ ಶಕ್ತಿಗಳು ಒಗ್ಗೂಡಿದರೆ ಕೋಮುವಾದಿ ಪಕ್ಷ ಕೊಚ್ಚಿ ಹೋಗುತ್ತದೆ ಎಂಬ ಸಂದೇಶವನ್ನು ಇಡೀ ದೇಶಕ್ಕೆ ರವಾನಿಸುತ್ತೇವೆ ಎಂದು ಗುಡುಗಿದರು. 

ನಗರದ ಖಾಸಗಿ ಹೋಟೆಲ್‌ನಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೇಗೌಡ ಅವರು, ಹನ್ನೆರಡು ವರ್ಷಗಳ ಬಳಿ ತಾವು ಸಿದ್ದರಾಮಯ್ಯ ಒಂದೇ ವೇದಿಕೆ ಯಲ್ಲಿದ್ದೇವೆ. ಹಳೆಯದೆಲ್ಲವನ್ನೂ ಮರೆತು ದೇಶದ ಹಿತದೃಷ್ಟಿಯಿಂದ ಒಟ್ಟಾಗಿ ಚುನಾವಣೆ ಎದುರಿಸಲು ಮುಂದಾಗಿದ್ದೇವೆ. ಐದು ಕ್ಷೇತ್ರ ಗೆಲ್ಲುವ ಮೂಲಕ ದೇಶಕ್ಕೆ ಸ್ಪಷ್ಟ ಸಂದೇಶ ರವಾನಿಸುತ್ತೇವೆ ಎಂದು ಹೇಳಿದರು.

ಉಪ ಚುನಾವಣೆ ಹಾಗೂ ಮುಂದಿನ ಲೋಕಸಭೆ ಯನ್ನು ಎರಡೂ ಪಕ್ಷ ಒಟ್ಟಾಗಿ ಎದುರಿಸುತ್ತೇವೆ. ಜತೆಗೆ ಅಗತ್ಯವಾದರೆ ಜಂಟಿಯಾಗಿ ಪ್ರಚಾರ ಕಾರ್ಯವನ್ನು ನಡೆಸುತ್ತೇವೆ. ಹಿಂದೆ ಪರಸ್ಪರ ಹೋರಾಟ ಮಾಡಿದ್ದೇವೆ, ಚುನಾವಣೆಯಲ್ಲಿ ಸೆಣಸಾಡಿದ್ದೇವೆ. ಇದೀಗ ಎಲ್ಲವನ್ನೂ ಮರೆತು ಒಟ್ಟಾಗಿ ಹೋಗಬೇಕಿದೆ. ಈ ಹಿಂದೆ ಏನೇನು ತಪ್ಪು ಮಾಡಿದ್ದರೆ ಎಲ್ಲದಕ್ಕೂ ಕ್ಷಮೆ ಯಾಚಿಸುತ್ತೇನೆ. ನನ್ನ ಹಿರಿತನಕ್ಕೆ ತಕ್ಕಂತೆ ನಡೆದುಕೊಳ್ಳಬೇಕು ಎಂದು ನಿಶ್ಚಯಿಸಿದ್ದೇನೆ ಎಂದರು

Follow Us:
Download App:
  • android
  • ios