ಅಯ್ಯೋ ಹೀಗಾಗಬಾರದಿತ್ತು.. ಮಾಜಿ ಸಿಎಂ ಕ್ಷೇತ್ರಕ್ಕೆ ಏನೇನೂ ಇಲ್ಲ!
ವಿವಿಧ ಯೋಜನೆಗಳನ್ನು ನೀಡಲು ಮಾಜಿ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿದ್ದರೂ ಕುಮಾರಸ್ವಾಮಿ ಯಾವುದಕ್ಕೂ ಸ್ಪಂದಿಸಿದಂತೆ ಕಂಡು ಬಂದಿಲ್ಲ. ಬಜೆಟ್ ನಲ್ಲಿ ಸಿದ್ದರಾಮಯ್ಯ ಪ್ರತಿನಿಧಿಸುವ ಬದಾಮಿ ಕ್ಷೇತ್ರಕ್ಕೆ ಯಾವ ವಿಶೇಷ ಕೊಡುಗೆಯನ್ನು ನೀಡಲಾಗಿಲ್ಲ.
ಬಾಗಲಕೋಟೆ(ಜು.5) ಮೈತ್ರಿ ಸರ್ಕಾರದ ಮೊದಲ ಬಜೆಟ್ ಬಾದಾಮಿ ಜನತೆಗೆ ಶಾಕ್ ನೀಡಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಬದಾಮಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರೂ ಜನತೆಯ ನಿರೀಕ್ಷೆಗಳು ಹುಸಿಯಾಗಿದೆ. ಪ್ರವಾಸೋದ್ಯಮ, ಜವಳಿಪಾರ್ಕ್,ಕೆರೆಗೆ ನೀರು ತುಂಬಿಸೋ ಯೋಜನೆ,ಕೈಗಾರಿಕಾ ಸ್ಥಾಪನೆ ಕುರಿತು ಬಜೆಟ್ ನಲ್ಲಿ ಯಾವುದೇ ಘೋಷಣೆ ಮಾಡಿಲ್ಲದಿರುವುದು ಜನರ ಅತೃಪ್ತಿಗೆ ಕಾರಣವಾಗಿದೆ.
ಬದಾಮಿ ಕ್ಷೇತ್ರದ ಅಭಿವೃದ್ಧಿ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಸಿಎಂ ಕುಮಾರಸ್ವಾಮಿಗೆ ಪತ್ರ ಬರೆದಿದ್ದರು. ಕುಮಾರಸ್ವಾಮಿ ಸಹ ಇದಕ್ಕೆ ಉತ್ತರ ಬರೆದಿದ್ದರು. ಆದರೆ ಬಜೆಟ್ ನಲ್ಲಿ ಸಿದ್ದರಾಮಯ್ಯ ಪತ್ರಕ್ಕೆ ಯಾವುದೆ ಮಕನ್ನಣೆ ಸಿಕ್ಕಿಲ್ಲ.
ಐತಿಹಾಸಿಕ ತಾಣ, ನೇಕಾರರ ಸಮಸ್ಯೆ ನಿವಾರಣೆ ಮತ್ತು ಮುಳುಗಡೆ ಸಂತ್ರಸ್ತರಿಗೆ ಬಜೆಟ್ ನಲ್ಲಿ ಉತ್ತರ ಸಿಗುತ್ತದೆ ಎಂದು ಭಾವಿಸಿದ್ದರು. ಬಾದಾಮಿ, ಗುಳೇದಗುಡ್ಡಕ್ಕೆ ಬಂದಾಗ ಪ್ರವಾಸಿತಾಣ ಅಭಿವೃದ್ಧಿ. ನೇಕಾರರ ಉತ್ತೇಜನ ಕುರಿತು ವಾಗ್ದಾನ ನೀಡಿದ್ದರು. ಒಂದು ಕಡೆ ಕುಮಾರಸ್ವಾಮಿ ಮಾತಿಗೆ ತಪ್ಪಿದ್ದರೆ ಇನ್ನೊಂದು ಕಡೆ ಸಿದ್ದರಾಮಯ್ಯ ತಮ್ಮ ಸ್ವ ಕ್ಷೇತ್ರಕ್ಕೆ ಯೋಜನೆಗಳನ್ನು ಕೊಡಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ.