ರಾಜ್ಯ ಬಿಜೆಪಿ ಮೊದಲ ಅಧ್ಯಕ್ಷ ಎ. ಕೆ. ಸುಬ್ಬಯ್ಯ ನಿಧನ
ಮಾಜಿ ವಿಧಾನ ಪರಿಷತ್ ಸದಸ್ಯ ಎ ಕೆ ಸುಬ್ಬಯ್ಯ(83) ಇನ್ನಿಲ್ಲ| ರಾಜ್ಯ ಉಚ್ಚ ನ್ಯಾಯಾಲಯದ ಖ್ಯಾತ ವಕೀಲರಾಗಿದ್ದ ಸುಬ್ಬಯ್ಯ| ವಿರಾಜಪೇಟೆ ತಾಲ್ಲೂಕಿನ ಬೆಳ್ಳೂರು ಗ್ರಾಮದ ಎ ಕೆ ಸುಬ್ಬಯ್ಯ| ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಎ ಕೆ ಎಸ್
ಬೆಂಗಳೂರು(ಆ.27): ಹಿರಿಯ ರಾಜಕಾರಣಿ, ಹೋರಾಟಗಾರ, ವಕೀಲ ಎ.ಕೆ.ಸುಬ್ಬಯ್ಯ ಇಂದು (ಮಂಗಳವಾರ) ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಎ. ಕೆ. ಸುಬ್ಬಯ್ಯರಿಗೆ ಬೆಂಗಳೂರಿನ ಮಣಿಪಾಲ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೆ ಇಂದು ಮಧ್ಯಾಹ್ನ ಕೊನೆಯುಸಿರೆಳೆದಿದ್ದಾರೆ
ಕೊಡಗು ಜಿಲ್ಲೆಯ ವೀರಾಜಪೇಟೆ ತಾಲೂಕಿನ ಬೆಳ್ಳೂರಿನಲ್ಲಿ ಅಜ್ಜಿಕುಟೀರ ಕಾರ್ಯಪ್ಪ ಮತ್ತು ಸೀತಮ್ಮ ದಂಪತಿ ಪುತ್ರನಾಗಿ 1936ರ ಆಗಸ್ಟ್ 8ರಂದು ಜನಿಸಿದ ಎ.ಕೆ.ಸುಬ್ಬಯ್ಯ, 1980ರಲ್ಲಿ ಕರ್ನಾಟಕ ಬಿಜೆಪಿಯ ಮೊದಲ ಅಧ್ಯಕ್ಷರಗಿ ಆಯ್ಕೆಯಾದರು. ಅವರ ನಾಯಕತ್ವದಲ್ಲೇ 1983ರ ಚುನಾವಣೆಯಲ್ಲಿ ಬಿಜೆಪಿಯು ಕರ್ನಾಟಕದಲ್ಲಿ 12ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಹೊಸ ಮೈಲಿಗಲ್ಲು ಸೃಷ್ಟಿಸಿತ್ತು.
ನಾಲ್ಕು ಬಾರಿ ವಿಧಾನ ಪರಿಷತ್ ಸದಸ್ಯರಾಗಿದ್ದ ಎ.ಕೆ.ಸುಬ್ಬಯ್ಯ, ಅಟಲ್ ಬಿಹಾರಿ ವಾಜಪೇಯಿ ಅವರ ಒಡನಾಡಿ ಕೂಡಾ ಹೌದು. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ 19 ತಿಂಗಳು ಜೈಲುವಾಸ ಅನುಭವಿಸಿದ್ದ ಸುಬ್ಬಯ್ಯ, ವಿಧಾನ ಪರಿಷತ್ ಪ್ರಖರ ವಾಗ್ಮಿ ಎಂದು ಕರೆಸಿಕೊಂಡಿದ್ದರು.