ಮೊದಲ ಪಟ್ಟಿಯಲ್ಲಿ ಹೆಸರು ಘೋಷಣೆಯಾಗದವರಿಗೆ ಆರಂಭವಾಗಿದೆ ಢವ ಢವ
ಮೊದಲ ಪಟ್ಟಿಯಲ್ಲಿ ಟಿಕೆಟ್ ಘೋಷಿಸದ ಇನ್ನುಳಿದ 152 ಕ್ಷೇತ್ರಗಳ ಬಿಜೆಪಿಯ ಆಕಾಂಕ್ಷಿಗಳಿಗೆ ಇದೀಗ ಆತಂಕ ಶುರುವಾಗಿದೆ.
ಬೆಂಗಳೂರು: ಮೊದಲ ಪಟ್ಟಿಯಲ್ಲಿ ಟಿಕೆಟ್ ಘೋಷಿಸದ ಇನ್ನುಳಿದ 152 ಕ್ಷೇತ್ರಗಳ ಬಿಜೆಪಿಯ ಆಕಾಂಕ್ಷಿಗಳಿಗೆ ಇದೀಗ ಆತಂಕ ಶುರುವಾಗಿದೆ. ಭಾನುವಾರ ಭಾರತೀಯ ಜನತಾ ಪಕ್ಷದ ಮೊದಲ ಪಟ್ಟಿ ಪ್ರಕಟಗೊಂಡ ಟಿಕೆಟ್ಗಾಗಿ ಬೆನ್ನಲ್ಲೇ ಕಾದು ಕುಳಿತಿದ್ದ ಪಕ್ಷದ ಅನೇಕ ಪ್ರಭಾವಿ ಮುಖಂಡರು, ಮಾಜಿ ಶಾಸಕರು ಹಾಗೂ ಕಳೆದ ಬಾರಿ ಕಡಿಮೆ ಮತಗಳ ಅಂತರದಿಂದ ಸೋಲು ಅನುಭವಿಸಿದವರು ಗೊಂದಲಕ್ಕೆ ಸಿಲುಕಿದ್ದಾರೆ. ಮುಂದಿನ ಪಟ್ಟಿಯಲ್ಲಾದರೂ ಟಿಕೆಟ್ ಸಿಗುತ್ತಾ ಅಥವಾ ಇಲ್ಲವಾ ಎಂಬ ಚಿಂತೆಯಲ್ಲಿ ಮುಳುಗಿದ್ದಾರೆ ಎಂದು ತಿಳಿದು ಬಂದಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣಾ ಕ್ಷೇತ್ರದಿಂದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪುತ್ರ ವಿಜಯೇಂದ್ರ ಅಭ್ಯರ್ಥಿಯಾಗುತ್ತಾರೆ ಎಂಬ ಬಲವಾದ ವದಂತಿ ನಡುವೆಯೂ ಮೊದಲ ಪಟ್ಟಿಯಲ್ಲಿ ಅವಕಾಶ ಸಿಗದಿರುವುದು ತಮ್ಮ ಪುತ್ರ ಹಾಗೂ ಸಹೋದರರಿಗೆ ಟಿಕೆಟ್ಗಾಗಿ ಕಾಯುತ್ತಿದ್ದ ಇತರ ಮುಖಂಡರಿಗೂ ಆತಂಕ ಉಂಟು ಮಾಡಿದೆ.
ಅದೇ ರೀತಿ ಮೊದಲ ಪಟ್ಟಿಯಲ್ಲೇ ಟಿಕೆಟ್ ನಿರೀಕ್ಷೆ ಇಟ್ಟುಕೊಂಡಿದ್ದ ಮಾಜಿ ಸಚಿವ ಮುರುಗೇಶ್ ನಿರಾಣಿ, ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ, ಸೊರಬ ಅಥವಾ ಸಾಗರ ಕ್ಷೇತ್ರದ ಆಕಾಂಕ್ಷಿಯಾಗಿರುವ ಮಾಜಿ ಸಚಿವ ಹರತಾಳು ಹಾಲಪ್ಪ, ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ, ತುಮಕೂರಿನ ಮಾಜಿ ಶಾಸಕ ಸೊಗಡು ಶಿವಣ್ಣ, ನರಗುಂದದ ಮಾಜಿ ಸಚಿವ ಸಿ.ಸಿ.ಪಾಟೀಲ್, ಜೇವರ್ಗಿಯ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ಮೈಸೂರಿನ ಮಾಜಿ ಶಾಸಕ ಎಸ್.ಎ.ರಾಮದಾಸ್, ಮೂಡಿಗೆರೆಯ ಮಾಜಿ ಶಾಸಕ ಕುಮಾರಸ್ವಾಮಿ, ಮಳವಳ್ಳಿಯ ಮಾಜಿ ಶಾಸಕ ಬಿ.ಸೋಮಶೇಖರ್, ನವಲಗುಂದದ ಮಾಜಿ ಶಾಸಕ ಶಂಕರಗೌಡ ಮುನೇನಕೊಪ್ಪ, ಚನ್ನಗಿರಿಯ ಮಾಡಾಳ್ ವಿರೂಪಾಕ್ಷಪ್ಪ, ಹಾವೇರಿಯ ಮಾಜಿ ಶಾಸಕ ನೆಹರು ಓಲೇಕಾರ್, ಕೊಳ್ಳೇಗಾಲದ ಮಾಜಿ ಶಾಸಕ ನಂಜುಂಡಸ್ವಾಮಿ, ಗದಗ ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರು, ರೋಣ ಕ್ಷೇತ್ರದ ಮಾಜಿ ಶಾಸಕ ಕಳಕಪ್ಪ ಬಂಡಿ ಮೊದಲಾದವರು ಹೆಚ್ಚು ಆತಂಕಕ್ಕೆ ಒಳಗಾಗಿದ್ದಾರೆ ಎನ್ನಲಾಗಿದೆ.