ಕಟ್ಟಪ್ಪ ವಿರುದ್ಧದ ಹೋರಾಟದಲ್ಲಿ ಕನ್ನಡ ಸಂಘಟನೆಗಳ ಒಗ್ಗಟ್ಟು ಕ್ಷೀಣಿಸಿದೆ. ಕನ್ನಡಹೋರಾಟಗಾರರಲ್ಲಿನ ಒಗ್ಗಟ್ಟು ಮುರಿದುಬೀಳುತ್ತಿದೆ ಎಂದು ಕೇಳಿಬರುತ್ತಿರುವ ಸುದ್ದಿಯನ್ನು ವಾಟಾಳ್ ನಾಗರಾಜ್ ಸಾರಸಗಟಾಗಿ ತಳ್ಳಿಹಾಕಿದ್ದಾರೆ.

ಬೆಂಗಳೂರು(ಏ. 19): 'ಕಟ್ಟಪ್ಪ' ಸತ್ಯರಾಜ್ ಕನ್ನಡಿಗರ ಕ್ಷಮೆ ಯಾಚಿಸುವವರೆಗೂ ಬಾಹುಬಲಿ-2 ಸಿನಿಮಾನವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಬಿಡುವುದಿಲ್ಲ ಎಂದು ಕನ್ನಡಪರ ಸಂಘಟನೆಗಳು ಪುನರುಚ್ಚರಿಸಿವೆ. ಅಲ್ಲದೇ, ಬಾಹುಬಲಿ ಬಿಡುಗಡೆ ವಿರೋಧಿಸಿ ಏ. 28ರಂದು ಬೆಂಗಳೂರು ಬಂದ್'ಗೆ ಕರೆಕೊಡಲಾಗಿದೆ. ನಗರದ ಪ್ರೆಸ್'ಕ್ಲಬ್'ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ವಾಟಾಳ್ ನಾಗರಾಜ್ ಸೇರಿದಂತೆ ಕನ್ನಡ ಹೋರಾಟಗಾರರು, ತಾವು ಒಗ್ಗಟ್ಟಾಗಿರುವುದಾಗಿ ಹೇಳಿಕೊಂಡಿದ್ದಾರೆ.

Add Asianetnews Kannada as a Preferred SourcegooglePreferred

ಬಾಹುಬಲಿ-2 ಸಿನಿಮಾ ಏಪ್ರಿಲ್ 28ರಂದು ಬಿಡುಗಡೆಯಾಗುತ್ತಿದೆ. ಅಂದೇ ಬೆಂಗಳೂರು ಬಂದ್ ಆಚರಿಸಲು ಕನ್ನಡ ಸಂಘಟನೆಗಳು ನಿರ್ಧರಿಸಿವೆ. ಕನ್ನಡ ದ್ರೋಹಿ ಸತ್ಯರಾಜ್ ಕ್ಷಮೆ ಕೇಳದೇ ಇದ್ದರೆ ಅಂದು ಬಂದ್ ಆಚರಿಸುವುದು ನಿಶ್ಚಿತ ಎಂದು ವಾಟಾಳ್ ನಾಗರಾಜ್ ಹೇಳಿದ್ದಾರೆ. ಏ.28ರಂದು ಟೌನ್'ಹಾಲ್'ನಿಂದ ಕನ್ನಡಿಗರ ಸ್ವಾಭಿಮಾನದ ಮೆರವಣಿಗೆ ನಡೆಯುವುದೆಂದೂ ವಾಟಾಳ್ ತಿಳಿಸಿದ್ದಾರೆ.

ಇದೇ ವೇಳೆ, ಕಟ್ಟಪ್ಪ ವಿರುದ್ಧದ ಹೋರಾಟದಲ್ಲಿ ಕನ್ನಡ ಸಂಘಟನೆಗಳ ಒಗ್ಗಟ್ಟು ಕ್ಷೀಣಿಸಿದೆ. ಕನ್ನಡಹೋರಾಟಗಾರರಲ್ಲಿನ ಒಗ್ಗಟ್ಟು ಮುರಿದುಬೀಳುತ್ತಿದೆ ಎಂದು ಕೇಳಿಬರುತ್ತಿರುವ ಸುದ್ದಿಯನ್ನು ವಾಟಾಳ್ ನಾಗರಾಜ್ ಸಾರಸಗಟಾಗಿ ತಳ್ಳಿಹಾಕಿದ್ದಾರೆ. ಎಲ್ಲಾ ಹೋರಾಟಗಾರರೂ ಇಲ್ಲಿಯೇ ಇದ್ದೇವೆ. ತಮ್ಮ ಒಗ್ಗಟ್ಟಲ್ಲಿ ಯಾವುದೇ ಚ್ಯುತಿ ಇಲ್ಲ ಎಂದು ವಾಟಾಳ್ ಸ್ಪಷ್ಟಪಡಿಸಿದ್ದಾರೆ.