ರಾಹುಲ್ ಗಾಂಧಿ ವಿರುದ್ಧ ಧ್ವನಿ ಎತ್ತಿದ ಸಿಂಧಿಯಾ!
ರಾಹುಲ್ಗೆ ಜ್ಯೋತಿರಾಧಿತ್ಯ ಸಿಂಧಿಯಾ ಸಡ್ಡು| ರಾಹುಲ್ಗೆ ವಿರುದ್ಧ ಧ್ವನಿ ಎತ್ತಿದ ರಾಹುಲ್ ಆಪ್ತ ಸಿಂಧಿಯಾ| ದೇಶದ ವಿಚಾರದಲ್ಲಿ ರಾಜಕೀಯ ಸಲ್ಲ: ದ್ವಿವೇದಿ, ಮಿಲಿಂದ್| 370 ರದ್ದಿಗೆ ಕಾಂಗ್ರೆಸ್ ವಿರೋಧ: ಕಾಂಗ್ರೆಸ್ ನಾಯಕರ ಸ್ವಾಗತ!
ದೆಹಲಿ[ಆ.07]: 370ನೇ ವಿಧಿ ರದ್ದು ಮಾಡಿದ ಕೇಂದ್ರದ ನಿರ್ಧಾರವನ್ನು ವಿರೋಧ ಮಾಡಿದ್ದ ಕಾಂಗ್ರೆಸ್ಗೆ ಭಾರೀ ಮುಖಭಂಗವಾಗಿದೆ. ಒಂದೆಡೆ ಸೋನಿಯಾ ಮತ್ತು ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ನಿರ್ಧಾರ ವಿರೋಧಿಸಿದ್ದರೆ, ಕೆಲ ಹಿರಿ- ಕಿರಿ ನಾಯಕರು ಬಹಿರಂಗವಾಗಿಯೇ ಸರ್ಕಾರದ ನಿರ್ಧಾರ ಬೆಂಬಲಿಸುವ ಮೂಲಕ ಪಕ್ಷಕ್ಕೆ ಸಡ್ಡು ಹೊಡೆದಿದ್ದಾರೆ.
ಅದರಲ್ಲೂ ರಾಹುಲ್ ಗಾಂಧಿ ಆಪ್ತ, ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ರೇಸ್ನಲ್ಲಿರುವ ಜ್ಯೋತಿರಾಧಿತ್ಯ ಸಿಂಧಿಯಾ ಕೇಂದ್ರದ ಪರವಾಗಿ ನಿಂತಿದ್ದು ಕೈ ಪಾಲಿಗೆ ಹಿನ್ನಡೆಯಾಗಿದೆ. ಈ ಸಂಬಂಧ ಟ್ವೀಟ್ ಮಾಡಿರುವ ಅವರು ಕೇಂದ್ರದ ಈ ನಿರ್ಧಾರವನ್ನು ನಾನು ಬೆಂಬಲಿಸುತ್ತೇನೆ. ಸಾಂವಿಧಾನಿಕ ಪ್ರಕ್ರಿಯೆಯನ್ನು ಅನುಸರಿಸಿದ್ದರೆ ಉತ್ತಮವಾಗುತ್ತಿತ್ತು. ಆಗ ಯಾವುದೇ ಪ್ರಶ್ನೆಗಳನ್ನು ಎತ್ತಬಹುದಿತ್ತು. ಅದೇನೇ ಇದ್ದರೂ, ಇದು ನಮ್ಮ ದೇಶದ ಹಿತದೃಷ್ಟಿಯಿಂದ ಮತ್ತು ನಾನು ಇದನ್ನು ಬೆಂಬಲಿಸುತ್ತೇನೆ ಎಂದು ಹೇಳಿದ್ದಾರೆ.
ಇನ್ನು ಕೈ ಹಿರಿಯ ನಾಯಕರಾದ ಜನಾರ್ಧನ್ ದ್ವಿವೇದಿ ಹಾಗೂ ದೀಪೆಂದರ್ ಹೂಡ 370ನೇ ವಿಧಿಯನ್ನು ರದ್ದು ಮಾಡಿದ ಕೇಂದ್ರದ ನಿಲುವನ್ನು ಸ್ವಾಗತಿಸಿದ್ದು, ರಾಷ್ಟ್ರತ ಹಿತಕ್ಕಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು ಹಾಗಾಗಿ ನಾವು ಕೇಂದ್ರದ ಈ ನಿರ್ಧಾರವನ್ನು ಸ್ವಾಗತಿಸುತ್ತೇವೆ. ಇದರಿಂದಾಗಿ ಕಾಶ್ಮೀರ ಸಂಬಂಧ ಉಂಟಾಗಿದ್ದ ಐತಿಹಾಸಿಕ ಪ್ರಮಾದ ಅಳಿಸಿದಂತಾಗಿದೆ ಎಂದಿದ್ದಾರೆ.