ಅಡುಗೆಭಟ್ಟನಾಗಿದ್ದಾನೆ ‘ಬಾಲರಾಕ್ಷಸ’: ಮೋಜಿನ ಜೀವನದಲ್ಲಿ ನಿರ್ಭಯ ಪ್ರಕರಣದ ಬಾಲಾಪರಾಧಿ
ಆದರೆ ಆತನಿಗೆ ತನ್ನನ್ನು ಜನರು ಹೊಡೆದು ಕೊಲ್ಲಬಹುದು ಎಂಬ ಭೀತಿ ಇತ್ತು. ಹೀಗಾಗಿ ಎನ್ಜಿಒವೊಂದು ಬಾಲ ರಾಕ್ಷಸನನ್ನು ದಕ್ಷಿಣ ಭಾರತದ ರೆಸ್ಟೋರೆಂಟ್ವೊಂದಕ್ಕೆ ಸೇರಿಸಿದೆ.
ನವದೆಹಲಿ(ಮೇ.06): ನಿರ್ಭಯಾ ಅತ್ಯಾಚಾರ ಪ್ರಕರಣದಲ್ಲಿ ಬಾಲಾಪರಾಯಾಗಿ ಮೂರು ವರ್ಷ ಶಿಕ್ಷೆ ಪೂರೈಸಿ ಹೊರಬಂದಿರುವ ‘ಬಾಲರಾಕ್ಷಸ’ ಇದೀಗ ದಕ್ಷಿಣ ಭಾರತದ ರೆಸ್ಟೋರೆಂಟ್ವೊಂದರಲ್ಲಿ ಅಡುಗೆ ಭಟ್ಟನಾಗಿ ಕೆಲಸ ಮಾಡುತ್ತಿದ್ದಾನೆ!
2012ರ ಡಿ.16ರಂದು ನಡೆದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ನಿರ್ಭಯಾ ಮೇಲೆ ಅತ್ಯಂತ ಅಮಾನುಷವಾಗಿ ವರ್ತಿಸಿದ್ದು ಇದೇ ‘ಬಾಲರಾಕ್ಷಸ.’ ಘಟನೆ ನಡೆದಾಗ ಆತನಿಗೆ 18 ವರ್ಷವಾಗಿರಲಿಲ್ಲ ಎಂಬ ಕಾರಣಕ್ಕೆ ಇತರ ಆರೋಪಿಗಳಂತೆ ಗಂಭೀರ ಶಿಕ್ಷೆಯಿಂದ ಆತ ಪಾರಾಗಿದ್ದ. ಮೂರು ವರ್ಷ ಅನುಭವಿಸಿ ಹೊರಬಂದಿದ್ದ. ಆದರೆ ಆತನಿಗೆ ತನ್ನನ್ನು ಜನರು ಹೊಡೆದು ಕೊಲ್ಲಬಹುದು ಎಂಬ ಭೀತಿ ಇತ್ತು. ಹೀಗಾಗಿ ಎನ್ಜಿಒವೊಂದು ಬಾಲ ರಾಕ್ಷಸನನ್ನು ದಕ್ಷಿಣ ಭಾರತದ ರೆಸ್ಟೋರೆಂಟ್ವೊಂದಕ್ಕೆ ಸೇರಿಸಿದೆ.
ಸದ್ಯ ಆತನಿಗೆ 23 ವರ್ಷವಾಗಿದ್ದು, ಉತ್ತಮ ಜೀವನ ಸಾಗಿಸುತ್ತಿದ್ದಾನೆ. ಆತನಿಗೆ ಉದ್ಯೋಗ ಕೊಟ್ಟಿರುವ ಮಾಲೀಕರಿಗೂ ಈತ ದೆಹಲಿ ಗ್ಯಾಂಗ್ರೇಪ್ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾದವ ಎಂಬುದು ಗೊತ್ತಿಲ್ಲ. ಶುಕ್ರವಾರ ಗ್ಯಾಂಗ್ರೇಪ್ ಪ್ರಕರಣದ ಆಪರಾಧಿಗಳ ಗಲ್ಲು ಶಿಕ್ಷೆಯನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿರುವುದು ಕೂಡ ಆತನಿಗೆ ಗೊತ್ತಾಗುವ ಸಂಭವ ಕಡಿಮೆ. ಏಕೆಂದರೆ, ಕೆಲಸ ಮಾಡುತ್ತಿರುವ ಸ್ಥಳದಲ್ಲಿ ಆತ ರಾಷ್ಟ್ರೀಯ ಸುದ್ದಿವಾಹಿನಿಗಳನ್ನು ನೋಡುವ ಸಾಧ್ಯತೆ ಇಲ್ಲ ಎಂದು ಎನ್ಜಿಒ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.