ಹಿಮಾಚಲದ ಹೈಕೋರ್ಟ್ ಸಿಜೆ ಆಗಿ ಕನ್ನಡಿಗ ನ್ಯಾ. ನಾರಾಯಣಸ್ವಾಮಿ!
ಹಿಮಾಚಲದ ಹೈಕೋರ್ಟ್ ಸಿಜೆ ಆಗಿ ಕನ್ನಡಿಗ ನ್ಯಾ.ಲಿಂಗಪ್ಪ ನಾರಾಯಣಸ್ವಾಮಿ ಪ್ರಮಾಣ ಸ್ವೀಕಾರ| ಕರ್ನಾಟಕ ಆಡಳಿತಾತ್ಮಕ ನ್ಯಾಯಾಧೀಕರಣ ಹಾಗೂ ಕೇಂದ್ರೀಯ ಆಡಳಿತಾತ್ಮಕ ನ್ಯಾಯಾಧೀಕರಣದಲ್ಲೂ ಸೇವೆ ಸಲ್ಲಿಸಿದ್ದ ನಾರಾಯಣಸ್ವಾಮಿ
ಶಿಮ್ಲಾ[ಅ.07]: ಕರ್ನಾಟಕ ಮೂಲದ ಹಾಗೂ ಕರ್ನಾಟಕ ಹೈಕೋರ್ಟ್ನಲ್ಲಿ ಅತೀ ದೀರ್ಘಕಾಲೀನವಾಗಿ ನ್ಯಾಯಾಧೀಶರಾಗಿದ್ದ ಲಿಂಗಪ್ಪ ನಾರಾಯಣ ಸ್ವಾಮಿ ಅವರು ಹಿಮಾಚಲ ಪ್ರದೇಶದ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಗಳಾಗಿ ಪ್ರಮಾಣವಚನ ಸ್ವೀಕಾರ ಮಾಡಿದರು.
ಭಾನುವಾರ ಹಿಮಾಚಲದ ರಾಜಭವನದಲ್ಲಿ ನಡೆದ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದಲ್ಲಿ ನ್ಯಾ.ಲಿಂಗಪ್ಪ ನಾರಾಯಣ ಸ್ವಾಮಿ ಅವರಿಗೆ ಹಿಮಾಚಲಪ್ರದೇಶದ ರಾಜ್ಯಪಾಲ ಬಂಡಾರು ದತ್ತಾತ್ರೇಯ ಅವರು ಪ್ರಮಾಣವಚನವನ್ನು ಬೋಧಿಸಿದರು.
1987ರಲ್ಲಿ ವಕೀಲರಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದ ನ್ಯಾ. ಲಿಂಗಪ್ಪ ಅವರು, ಕರ್ನಾಟಕ ಹೈಕೋರ್ಟ್ನಲ್ಲೇ ವಕೀಲರಾಗಿ ಸೇವೆ ಸಲ್ಲಿಸಿದರು. ಆ ನಂತರ ಕರ್ನಾಟಕ ಆಡಳಿತಾತ್ಮಕ ನ್ಯಾಯಾಧೀಕರಣ ಹಾಗೂ ಕೇಂದ್ರೀಯ ಆಡಳಿತಾತ್ಮಕ ನ್ಯಾಯಾಧೀಕರಣದಲ್ಲೂ ಸೇವೆ ಸಲ್ಲಿಸಿದ್ದರು.
ಕೊನೆಗೆ 2007ರ ಜು.4ರಂದು ಕರ್ನಾಟಕ ಹೈಕೋರ್ಟ್ಗೆ ಹೆಚ್ಚುವರಿ ನ್ಯಾಯಾಧೀಶರನ್ನಾಗಿ ನ್ಯಾ.ಲಿಂಗಪ್ಪ ಅವರು ನೇಮಕಗೊಂಡರು. ಬಳಿಕ 2009ರ ಏ.17ರಂದು ಕರ್ನಾಟಕದ ಶಾಶ್ವತ ನ್ಯಾಯಾಧೀಶರಾಗಿ ಬಡ್ತಿ ಪಡೆದರು. ಕರ್ನಾಟಕ ಹೈಕೋರ್ಟ್ನ ಹಾಲಿ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಅವರ ನೇಮಕವಾಗುವವರೆಗೂ ನ್ಯಾ.ಲಿಂಗಪ್ಪ ಅವರು ಹಂಗಾಮಿ ಮುಖ್ಯ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದರು.