ಸಿಎಂ ಯೋಗಿ ಆಸ್ಪತ್ರೆ ಭೇಟಿ ವೇಳೆ ಪತ್ರಕರ್ತರಿಗೆ ಗೃಹ ಬಂಧನದ ಆರೋಪ| ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಸೇರಿದಂತೆ ಇತರ ಪ್ರಮುಖ ವಿಪಕ್ಷ ನಾಯಕರಿಂದ ಯೋಗಿ ವಿರುದ್ಧ ಆಕ್ರೋಶ

ಲಖನೌ[ಜು.02]: ಉತ್ತರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಭಾನುವಾರ ಮೊರಾದಾಬಾದ್‌ ಆಸ್ಪತ್ರೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಪ್ರಶ್ನೆ ಕೇಳುವ ಕೆಲ ಪತ್ರಕರ್ತರನ್ನು ಕೊಠಡಿಯೊಂದರಲ್ಲಿ ಕೂಡಿ ಹಾಕಲಾಗಿತ್ತು ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ವಿಚಾರವನ್ನಿಟ್ಟುಕೊಂಡು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಸೇರಿದಂತೆ ಇತರ ಪ್ರಮುಖ ವಿಪಕ್ಷ ನಾಯಕರು ಯೋಗಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Add Asianetnews Kannada as a Preferred SourcegooglePreferred

ಆದರೆ, ಇಂಥ ಘಟನೆಯೇ ನಡೆದಿಲ್ಲ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ. ‘ಪತ್ರಕರ್ತರನ್ನು ಕೊಠಡಿಯಲ್ಲಿ ಕೂಡಿ ಹಾಕಲಾಗಿತ್ತು ಎಂಬುದು ಶುದ್ಧ ಸುಳ್ಳು. ಆಸ್ಪತ್ರೆ ಪರಿಶೀಲನೆ ವೇಳೆ ಹಲವು ಪತ್ರಕರ್ತರು ಇದ್ದರು. ಈ ವೇಳೆ ಯಾವುದೇ ಮಾಧ್ಯಮ ಪ್ರತಿನಿಧಿಗಳು ವಾರ್ಡ್‌ ಒಳಗೆ ಪ್ರವೇಶಿಸದಂತೆ ವಿನಂತಿಸಿಕೊಂಡಿದ್ದೆವು ಅಷ್ಟೇ’ ಎಂದಿದ್ದಾರೆ.

ಆದರೆ, ಆಸ್ಪತ್ರೆಯಲ್ಲಿ ಗದ್ದಲ ಸಂಭವಿಸಬಾರದು ಎಂಬ ಕಾರಣಕ್ಕಾಗಿ ಕೆಲವು ಪತ್ರಕರ್ತರ ಆಸ್ಪತ್ರೆ ಪ್ರವೇಶಕ್ಕೆ ಪೊಲೀಸರು ಅವಕಾಶ ನೀಡಿರಲಿಲ್ಲ ಎಂದು ಒಪ್ಪಿಕೊಂಡರು.