ಕರ್ನಾಟಕ ರಾಜಕಾರಣದ ಬಗ್ಗೆ ವಿಧಾನಸೌಧದ ಮುಂದೆ ಪತ್ರಕರ್ತೆಯರ ಟಿಕ್‌ಟಾಕ್ | ದೇಶದ್ ಕಥೆ ಇಷ್ಟೇ ಕಣಣ್ಣೋ.. ಎಂದು ಮಾಡಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ 

ರಾಜ್ಯ ರಾಜಕಾರಣ ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಿಸುತ್ತಿದೆ. ಪತನ ಹಂತದಲ್ಲಿರುವ ಸರ್ಕಾರವನ್ನು ಉಳಿಸಿಕೊಳ್ಳಲು ದೋಸ್ತಿಗಳು ಸರ್ಕಸ್ ಮಾಡುತ್ತಿದ್ದರೆ, ಅಧಿಕಾರ ಹಿಡಿಯುವ ಬಗ್ಗೆ ಬಿಜೆಪಿ ಚಿಂತನೆ ನಡೆಸುತ್ತಿದೆ. ವಿಶ್ವಾಸಮತ ಸಾಬೀತುಪಡಿಸುವಂತೆ ರಾಜ್ಯಪಾಲರು ನೀಡಿದ ಎರಡನೇ ಗಡುವಿಗೂ ಸಿಎಂ ಕುಮಾರಸ್ವಾಮಿ ಸಡ್ಡು ಹೊಡೆದಿದ್ದಾರೆ. 

Add Asianetnews Kannada as a Preferred SourcegooglePreferred

ರಾಜ್ಯಪಾಲ ವಾಜು ಬಾಯಿ ವಾಲಾ ನಡೆಯ ವಿರುದ್ಧವೇ ಸಿಎಂ ಕುಮಾರಸ್ವಾಮಿ ಸಿಎಂ ಸುಪ್ರೀಂ ಕದ ತಟ್ಟಿದ್ದಾರೆ. ರಾಜ್ಯಪಾಲರೂ ಕೇಂದ್ರಕ್ಕೆ ವರದಿ ಸಲ್ಲಿಸಿದ್ದಾರೆ. ರಾಜ್ಯಪಾಲರ ಮುಂದಿನ ನಡೆ, ಕೇಂದ್ರದ ನಿರ್ಧಾರ ಹಾಗೂ ಸುಪ್ರೀಂ ಕೋರ್ಟ್ ನಲ್ಲಿ ಸೋಮವಾರ ಏನಾಗಲಿದೆ ಎಂಬುದು ಸೋಮವಾರ ಗೊತ್ತಾಗಲಿದೆ. ಎಲ್ಲರ ಚಿತ್ರ ರಾಜಭವನದತ್ತ ನೆಟ್ಟಿದೆ. 

ರಾಜ್ಯ ರಾಜಕಾರಣದ ಪ್ರಹಸನಗಳನ್ನು ನೋಡಿ ನೋಡಿ ಜನರ ಬೇಸತ್ತಿದ್ದಾರೆ. ಮಾಧ್ಯಮಗಳಲ್ಲಿ ಕಳೆದ ಒಂದು ವಾರಗಳಿಂದ ಇದೇ ಸುದ್ದಿ. ಎಲ್ಲಾ ಕಡೆ ಬರೀ ಇದೇ ಸುದ್ದಿಗಳು. ದಿನವಿಡೀ ರಾಜಕೀಯ ಹೈಡ್ರಾಮದ ವರದಿಗಳನ್ನು ಮಾಡಿ ಮಾಡಿ, ರಾಜಕಾರಣಿಗಳಿಗೆ ಮೈಕ್ ಹಿಡಿದು ಹಿಡಿದು ಸಾಕಾಗಿ ಹೋಗಿರುವ ಪತ್ರಕರ್ತೆಯರಿಬ್ಬರೂ ರಾಜ್ಯದ ರಾಜಕಾರಣಕ್ಕೆ ಸಂಬಂಧಿಸಿದ ಟಿಕ್ ಟಾಕ್ ವಿಡೀಯೋವನ್ನು ಮಾಡಿದ್ದಾರೆ. ವಿಧಾನಸೌಧದ ಮುಂದೆ ನಿಂತು ‘ದೇಶದ ಕಥೆ ಇಷ್ಟೇ ಕಣಣ್ಣೋ... ಚಿಂತೆ ಮಾಡಿ ಲಾಭ ಇಲ್ಲಣ್ಣೋ’ ಹಾಡಿಗೆ ಟಿಕ್ ಮಾಡಿದ್ದು ರಾಜಕಾರಣಕ್ಕೆ ಹಿಡಿದ ಕನ್ನಡಿಯಂತಿದೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ಪಡೆದುಕೊಂಡಿದೆ. ಈ ವಿಡಿಯೋದಲ್ಲಿರುವವರೊಬ್ಬರು ಸುವರ್ಣ ನ್ಯೂಸ್ ಪ್ರತಿನಿಧಿ ರಕ್ಷಾ ಹಾಗೂ ಇನ್ನೊಬ್ಬರು ಟಿವಿ 5 ಪ್ರತಿನಿಧಿ ಅರ್ಚನಾ ಎನ್ನುವುದು ವಿಶೇಷ.

"