ಜೈಪುರ ಸಾಹಿತ್ಯ ಉತ್ಸವಕ್ಕೆ ನಸ್ರೀನ್'ಗಿಲ್ಲ ಆಹ್ವಾನ
ನಸ್ರೀನ್ ಅವರ ಹೇಳಿಕೆ ಖಂಡಿಸಿ ರಾಜಸ್ಥಾನ ಮುಸ್ಲಿಂ ಫೋರಂ, ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್, ಜಮಾತ್-ಇ-ಇಸ್ಲಾಮಿ ಮತ್ತು ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಪ್ರತಿಭಟಿಸಿತ್ತು.
ಜೈಪುರ(ಜ.24): ಬಾಂಗ್ಲಾದ ಖ್ಯಾತ ಲೇಖಕಿ ತಸ್ಲೀಮಾ ನಸ್ರೀನ್ ಅವರನ್ನು ಮುಂದಿನ ವರ್ಷದ ಜೈಪುರ ಸಾಹಿತ್ಯ ಉತ್ಸವಕ್ಕೆ ಆಹ್ವಾನಿಸುವುದಿಲ್ಲ ಎಂದು ಆಯೋಜಕರು ಸ್ಪಷ್ಟಪಡಿಸಿದ್ದಾರೆ.
ಸೋಮವಾರ ನಡೆದ ಸಾಹಿತ್ಯೋತ್ಸವದಲ್ಲಿ ನಸ್ರೀನ್ ಅವರ ಏಕರೂಪ ನಾಗರಿಕ ಸಂಹಿತೆ ಕುರಿತ ಹೇಳಿಕೆ ಪ್ರತಿಭಟನೆಗೆ ಕಾರಣವಾಗಿತ್ತು. ‘‘ಪ್ರತಿಭಟನಾಕಾರರು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಎಲ್ಲಾ ರೀತಿಯಲ್ಲೂ ಅಲ್ಪಸಂಖ್ಯಾತರನ್ನು ನಾವು ಬೆಂಬಲಿಸುತ್ತಿದ್ದೇವೆ, ಅವರ ಎಲ್ಲಾ ಅಭಿಪ್ರಾಯಗಳಿಗೂ ಇದು ವೇದಿಕೆಯಾಗಿದೆ ಎಂದು ತಿಳಿಸಿದ್ದೇವೆ. ಮುಂದಿನ ಉತ್ಸವಕ್ಕೆ ಅವರಿಗೆ ಆಹ್ವಾನ ನೀಡಬಾರದೆಂಬ ಪ್ರತಿಭಟನಾಕಾರರ ಮನವಿಯನ್ನು ಪುರಸ್ಕರಿಸುತ್ತೇವೆ,’’ ಎಂದು ಜೆಎಲ್ಎಫ್ ಆಯೋಜಕ ಸಂಜಯ್ ಸ್ಪಷ್ಟಪಡಿಸಿದ್ದಾರೆ.
ನನಗೆ ರಾಷ್ಟ್ರೀಯತೆ, ಧಾರ್ಮಿಕ ಮೂಲಭೂತವಾದಿಗಳ ಮೇಲೆ ನಂಬಿಕೆಯಿಲ್ಲ. ನನಗೆ ವಿಚಾರವಾದ, ಮಾನವೀಯತೆ, ಸ್ವಾತಂತ್ರ್ಯ, ಹಕ್ಕುಗಳನ್ನು ಮುಕ್ತವಾಗಿ ನೀಡುವ ಜಗತ್ತಿನ ಬಗ್ಗೆ ವಿಶ್ವಾಸವಿದೆ. ಎಲ್ಲಿಯವರೆಗೆ ಇಸ್ಲಾಂ ರಾಷ್ಟ್ರಗಳು ಟೀಕೆಗಳನ್ನು ಒಪ್ಪುವುದಿಲ್ಲವೋ, ಅಲ್ಲಿಯವರೆಗೆ ಇಸ್ಲಾಂ ರಾಷ್ಟ್ರಗಳನ್ನು ಜಾತ್ಯಾತೀತ ರಾಷ್ಟ್ರಗಳೆಂದು ಕರೆಯಲು ಸಾಧ್ಯವಿಲ್ಲ. ನಾನು ಇಸ್ಲಾಂ ಧರ್ಮದ ಹುಳುಕುಗಳನ್ನು ಟೀಕಿಸಿದಾಗ ಜನರು ನನ್ನನ್ನು ಕೊಲ್ಲಲು ಬಯಸುತ್ತಾರೆ ಎಂದು ತಸ್ಲೀಮಾ ಹೇಳಿದ್ದರು.
ನಸ್ರೀನ್ ಅವರ ಹೇಳಿಕೆ ಖಂಡಿಸಿ ರಾಜಸ್ಥಾನ ಮುಸ್ಲಿಂ ಫೋರಂ, ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್, ಜಮಾತ್-ಇ-ಇಸ್ಲಾಮಿ ಮತ್ತು ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಪ್ರತಿಭಟಿಸಿತ್ತು.