ಲೋಕಸಭಾ ಚುನಾವಣೆಯ ಬೆನ್ನಲ್ಲೇ ಬಿಜೆಪಿಗೆ ಮೈತ್ರಿ ಪಕ್ಷದಿಂದ ಬಿಗ್ ಶಾಕ್| ದೋಸ್ತಿ ಬಿಹಾರಕ್ಕಷ್ಟೇ, ಹೊರ ರಾಜ್ಯಗಳಲ್ಲಿ ಏಕಾಂಗಿ ಸ್ಪರ್ಧೆಗೆ ನಿರ್ಧಾರ

ಪಾಟ್ನಾ[ಜೂ.09]: ಬಿಜೆಪಿ ಜೊತೆ ಬಿಹಾರದಲ್ಲಿ ಮೈತ್ರಿ ಮಾಡಿಕೊಂಡಿದ್ದ ನಿತೀಶ್ ಕುಮಾರ್ ಪಕ್ಷ JDU ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜಾರ್ಖಂಡ್ ಸೇರಿದಂತೆ ಒಟ್ಟು 4 ರಾಜ್ಯಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲಿದೆ. ಇಂದು ಭಾನುವಾರ ಪಾಟ್ನಾದಲ್ಲಿ ಆಯೋಜಿಸಿದ್ದ ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಯಾವೆಲ್ಲಾ ರಾಜ್ಯಗಳಲ್ಲಿ JDU ಏಕಾಂಗಿ ಸ್ಪರ್ಧೆ

JDU ಸಭೆಯಲ್ಲಿ ಜಾರ್ಖಂಡ್, ಹರ್ಯಾಣ, ದೆಹಲಿ ಹಾಗೂ ಜಮ್ಮು ಕಾಶ್ಮೀರ ಹೀಗೆ ಒಟ್ಟು ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ ಕಣಕ್ಕಿಳಿಯಲು ನಿರ್ಧರಿಸಲಾಗಿದೆ. ಜಾರ್ಖಂಡ್ ನಲ್ಲಿ ಜೆಡಿಯು ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ ಅನ್ಯ ಮೂರು ರಾಜ್ಯಗಳಲ್ಲೂ ನಿತೀಶ್ ಪಕ್ಷ ಏಕಾಂಗಿಯಾಗಿ ಕಣಕ್ಕಿಳಿಯುತ್ತಿರುವುದು ಜೆಡಿಯು ಮಿತ್ರ ಪಕ್ಷ ಸೇರಿದಂತೆ ಪ್ರತಿಪಕ್ಷಗಳಿಗೆ ಶಾಕ್ ನೀಡಿದೆ.

ನಿತೀಶ್ ಕುಮಾರ್ ಹೇಳಿದ್ದೇನು?

ಲಭ್ಯವಾದ ಮಾಹಿತಿ ಅನ್ವಯ ಈ ಸಭೆಯಲ್ಲಿ ಮಾತನಾಡಿದ ಸಿಎಂ ನಿತೀಶ್ ಕುಮಾರ್ 'ಬಿಹಾರದಲ್ಲಿ NDA ಮೈತ್ರಿ ಕೂಟದ ಎಲ್ಲಾ ಪಕ್ಷಗಳ ನಡುವೆ ಒಗ್ಗಟ್ಟಿದೆ. ಇದೇ ಕಾರಣದಿಂದ ಲೋಕಸಭಾ ಚುನಾವಣೆಯಲ್ಲಿ JDUಗೆ ಭರ್ಜರಿ ಗೆಲುವು ಸಿಕ್ಕಿದೆ. ಆದರೆ ಇದರೊಂದಿಗೆ ನಾವು ನಮ್ಮ ಪಕ್ಷವನ್ನು ಇನ್ನಷ್ಟು ವಿಸ್ತರಿಸಬೇಕು. ಇತರ ರಾಜ್ಯಗಳಲ್ಲೂ ನಮ್ಮ ಪಕ್ಷವನ್ನು ಅಸ್ತಿತ್ವಕ್ಕೆ ತರಬೇಕು' ಎಂದಿದ್ದಾರೆ.

ಮೌನ ವಹಿಸಿದ ಪ್ರಶಾಂತ್ ಕಿಶೋರ್

ಈ ಸಭೆಯಲ್ಲಿ ಎಲ್ಲರ ದೃಷ್ಟಿ ಪ್ರಶಾಂತ್ ಕಿಶೋರ್ ಮೇಲಿತ್ತು, ಅವರು ಏನಾದರೂ ಮಾತನಾಡಬಹುದು ಎಂಬ ಭರವಸೆ ಇಟ್ಟುಕೊಂಡಿದ್ದರು. ಆದರೆ ಇಂತಹ ಮಹತ್ವಪೂರ್ಣ ಸಭೆಯಲ್ಲಿ ಪ್ರಶಾಂತ್ ಕಿಶೋರ್ ಗೆ ಮಾತನಾಡುವ ಅವಕಾಶ ಸಿಗಲಿಲ್ಲ. ಸಭೆಯಲ್ಲಿ ನಾಲ್ಕು ರಾಜ್ಯಗಳ ಪಕ್ಷದ ರಾಜ್ಯಾಧ್ಯಕ್ಷರು ಹಾಗೂ ನಿತೀಶ್ ಕುಮಾರ್ ಮಾತ್ರ ಮಾತನಾಡಿದ್ದರು.