ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಣಾಳಿಕೆ ಸಿದ್ಧತೆಯಲ್ಲಿ ತೊಡಗಿರುವ ಜೆಡಿಎಸ್‌ ಸಾರ್ವಜನಿಕ ಸಲಹೆಗಳಿಗೂ ಮನ್ನಣೆ ನೀಡಿದ್ದು, ಜನರ ಸಲಹೆಗಳನ್ನು ಪ್ರಣಾಳಿಕೆಯಲ್ಲಿ ಸೇರಿಸಲು ತೀರ್ಮಾನಿಸಿದೆ.

ಬೆಂಗಳೂರು : ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಣಾಳಿಕೆ ಸಿದ್ಧತೆಯಲ್ಲಿ ತೊಡಗಿರುವ ಜೆಡಿಎಸ್‌ ಸಾರ್ವಜನಿಕ ಸಲಹೆಗಳಿಗೂ ಮನ್ನಣೆ ನೀಡಿದ್ದು, ಜನರ ಸಲಹೆಗಳನ್ನು ಪ್ರಣಾಳಿಕೆಯಲ್ಲಿ ಸೇರಿಸಲು ತೀರ್ಮಾನಿಸಿದೆ.

Add Asianetnews Kannada as a Preferred SourcegooglePreferred

ಪ್ರಣಾಳಿಕೆಯಲ್ಲಿ ಸೇರಿಸಬೇಕಾದ ಅಂಶಗಳ ಬಗ್ಗೆ ಸಾರ್ವಜನಿಕರಿಂದ ಆಪೇಕ್ಷಿಸಲಾದ ಸಲಹೆಗೆ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ಬಂದಿದೆ. ಅದರಲ್ಲಿ ಎರಡು ಪ್ರಮುಖ ವಿಷಯಗಳನ್ನು ಜೆಡಿಎಸ್‌ ಪ್ರಣಾಳಿಕೆಯಲ್ಲಿ ಸೇರಿಸಿದೆ. ರಾಜ್ಯ ರಸ್ತೆ ಸಾರಿಗೆ ಇಲಾಖೆಯಲ್ಲಿ ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ನೌಕರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಲಾಗುವುದು ಮತ್ತು ವೇತನದಲ್ಲಿರುವ ತಾರತಮ್ಯವನ್ನು ಸರಿಪಡಿಸುವ ಬಗ್ಗೆ ಸೇರಿಸಲಾಗಿದೆ.

ಪ್ರಣಾಳಿಕೆ ಸಿದ್ಧಪಡಿಸಲು ಪ್ರಜಾಸತ್ತಾತ್ಮಕ ಮಾದರಿ ಅನುಸರಿಸಿದ ಜೆಡಿಎಸ್‌ ಪಕ್ಷವು, ಪತ್ರಿಕಾ ಜಾಹಿರಾತು ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಸಮಾಜದ ಪ್ರತಿಯೊಬ್ಬರ ಅಭಿಪ್ರಾಯ ಕೇಳಿತ್ತು. ಇದಕ್ಕೆ ಜನರಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸಹಸ್ರಾರು ಜನರು ತಮ್ಮ ಸಲಹೆ ನೀಡಿದ್ದಾರೆ. ಈ ಪೈಕಿ ಎರಡು ಪ್ರಮುಖ ಅಂಶಗಳನ್ನು ಪರಿಗಣಿಸಲಾಗಿದೆ ಎಂದು ಜೆಡಿಎಸ್‌ ಪ್ರಕಟಣೆ ಹೇಳಿದೆ.

ಗುತ್ತಿಗೆ ಪದ್ಧತಿಯು ಆಧುನಿಕ ಜೀತ ಪದ್ಧತಿಯೇ ಆಗಿದ್ದು, ಸರ್ಕಾರದ ಎಲ್ಲಾ ಇಲಾಖೆಯಲ್ಲಿನ ಗುತ್ತಿಗೆ/ತಾತ್ಕಾಲಿಕ ನೌಕರರನ್ನು ಈ ಸಮಸ್ಯೆಯಿಂದ ಮುಕ್ತಗೊಳಿಸಲು ಗುತ್ತಿಗೆ/ಹೊರಗುತ್ತಿಗೆ, ದಿನಗೂಲಿ, ಅತಿಥಿ ಶಿಕ್ಷಕರು, ಉಪನ್ಯಾಸಕರು ಸೇರಿದಂತೆ ಎಲ್ಲಾ ಬಗೆಯ ತಾತ್ಕಾಲಿಕ ನೌಕರರಿಗೆ 60 ವರ್ಷದವರೆಗೆ ಸೇವಾ ಭದ್ರತೆ ಒದಗಿಸುವ ಭರವಸೆ ನೀಡಲಾಗಿದೆ. ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವುದು ಮತ್ತು ಎಲ್ಲ ಗುತ್ತಿಗೆ ನೌಕರರನ್ನು ಹಂತ ಹಂತವಾಗಿ ಕಾಯಂಗೊಳಿಸಲು ಪ್ರಸ್ತುತ ಇರುವ ಕಾನೂನು ಅಡ್ಡಿಗಳನ್ನು ನಿವಾರಿಸಲು ಕ್ರಮ ಕೈಗೊಳ್ಳುವ ವಿಶ್ವಾಸವನ್ನು ಜೆಡಿಎಸ್‌ ನೀಡಿದೆ.