ದೂರ ದೂರ ಎನ್ನುತ್ತಲೇ ರೆಡ್ಡಿ ಬೆನ್ನಿಗೆ ನಿಂತ BJP:ರೆಡ್ಡಿ-ಯಡ್ಡಿ ಗುಪ್ತ್ ಗುಪ್ತ್ ಮೀಟಿಂಗ್
ಜನಾರ್ದನ ರೆಡ್ಡಿಗೂ ಬಿಜೆಪಿಗೂ ಸಂಬಂಧವಿಲ್ಲ, ಜನಾರ್ದನ ರೆಡ್ಡಿ ಬಿಜೆಪಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರೆ ನನಗೆ ಫೋಟೋ ವಾಟ್ಸಾಪ್ ಮಾಡಿ ಎಂದು ಫರ್ಮಾನು ಹೊರಡಿಸಿದ್ದ ಬಿಜೆಪಿ ಇದೀಗ ದೂರ ದೂರ ಎನ್ನುತ್ತಲೇ ರೆಡ್ಡಿಗೆ ನಾವಿದ್ದೇವೆ ಡೋಂಟ್ ವರಿ ಎಂದ ಬಿ.ಎಸ್ ಯಡಿಯೂರಪ್ಪ ಅಭಯ ನೀಡಿದ್ದಾರೆ.
ಬೆಂಗಳೂರು, [ನ.17]: ಬಹಿರಂಗವಾಗಿ ಒಪ್ಪಿಕೊಳ್ಳಲು ಹಿಂದೇಟು ಹಾಕಿದ್ದರೂ ಆಂತರಿಕವಾಗಿ ಬಿಜೆಪಿ ಮಾಜಿ ಸಚಿವ ಜನಾರ್ದನ ರೆಡ್ಡಿ ಬೆನ್ನಿಗೆ ನಿಂತಿದೆ.
ನಿನ್ನೆ [ಶುಕ್ರವಾರ] ರಾತ್ರಿ ಯಡಿಯೂರಪ್ಪ ನಿವಾಸಕ್ಕೆ ಭೇಟಿ ನೀಡಿದ್ದ ಜನಾರ್ದನ ರೆಡ್ಡಿ ಹದಿನೈದು ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ. ಜಾಮೀನಿನ ಮೇಲಿರುವ ರೆಡ್ಡಿ ಬೆಂಬಲಕ್ಕೆ ನಿಂತಿರೋ ಕೇಸರಿ ಪಡೆಯ ನಡೆ ಕುತೂಹಲಕ್ಕೆ ಕಾರಣವಾಗಿದೆ.
ಜನಾರ್ದನ ರೆಡ್ಡಿ-ಯಡಿಯೂರಪ್ಪ ರಹಸ್ಯ ಸಭೆ: ರೆಡ್ಡಿಗೆ ಯಡ್ಡಿ ಹೇಳಿದ್ದೇನು?
ಜನಾರ್ದನ ರೆಡ್ಡಿಗೂ ಬಿಜೆಪಿಗೂ ಸಂಬಂಧವಿಲ್ಲ, ಜನಾರ್ದನ ರೆಡ್ಡಿ ಬಿಜೆಪಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರೆ ನನಗೆ ಫೋಟೋ ವಾಟ್ಸಾಪ್ ಮಾಡಿ. ಹೀಗಂತ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಮತ್ತು ರಾಜ್ಯ ಉಸ್ತುವಾರಿ ಮುರಳೀಧರ ರಾವ್ ಫರ್ಮಾನು ಹೊರಡಿಸಿದ್ದರು.
ಉಪಚುನಾವಣೆಯ ಸಮಯದಲ್ಲಿ ಕೂಡಾ ಸಾಧ್ಯವಾದಷ್ಟೂ ಜನಾರ್ದನ ರೆಡ್ಡಿಯಿಂದ ಅಂತರದಲ್ಲೇ ಇದ್ದ ಬಿಜೆಪಿ ನಿಲುವು ನಿನ್ನೆಯಿಂದೀಚೆಗೆ ಬದಲಾಗತೊಡಗಿದೆ.
ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ವಿಚಾರದಲ್ಲಿ ಸರಕಾರದ ವಿರುದ್ಧ ಹರಿಹಾಯುವ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಜನಾರ್ದನ ರೆಡ್ಡಿಯನ್ನು ಸಮರ್ಥಿಸಿಕೊಂಡು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದರು.
ಇದಾದ ಎರಡೇ ಗಂಟೆಯಲ್ಲಿ ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ಯಡಿಯೂರಪ್ಪ ನಿವಾಸಕ್ಕೆ ತೆರಳಿದ್ದ ಜನಾರ್ದನ ರೆಡ್ಡಿ ಹದಿನೈದು ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ.
ನಿನ್ನೆ ರಾತ್ರಿ ಯಡಿಯೂರಪ್ಪ ಜೊತೆ ಮಾತುಕತೆ ನಡೆಸಿದ್ದು, ಪ್ರಸಕ್ತ ವಿದ್ಯಮಾನಗಳ ಕುರಿತು ಇಬ್ಬರೂ ಚರ್ಚೆ ನಡೆಸಿದ್ದಾರೆ. ಈ ವೇಳೆ ರೆಡ್ಡಿಗೆ ಯಡಿಯೂರಪ್ಪ ಸಮಾಧಾನ ಹೇಳಿ ಅಭಯ ನೀಡಿದ್ದಾರೆ.
(ಇದಕ್ಕೆ ಬಳಸಿರುವುದು ಸಾಂದರ್ಭಿಕ ಚಿತ್ರವಾಗಿರುತ್ತದೆ]