ಪುರಿ ಮಂದಿರದಲ್ಲಿ ಸಂಭವಿಸಿತಾ ಪವಾಡ!
12ನೇ ಶತಮಾನದ ಇಲ್ಲಿನ ಪುರಿ ಜಗನ್ನಾಥ ಮಂದಿರದ ಒಳಗಿನ ಖಜಾನೆಯ ನಕಲಿ ಕೀಲಿ ಕೈಗಳು ಪತ್ತೆಯಾಗಿವೆ ಎಂದು ಪುರಿ ಜಿಲ್ಲಾಧಿಕಾರಿ ಅರವಿಂದ್ ಅಗರವಾಲ್ ಅವರು ತಿಳಿಸಿದ್ದಾರೆ.
ಪುರಿ(ಒಡಿಶಾ): 12ನೇ ಶತಮಾನದ ಇಲ್ಲಿನ ಪುರಿ ಜಗನ್ನಾಥ ಮಂದಿರದ ಒಳಗಿನ ಖಜಾನೆಯ ನಕಲಿ ಕೀಲಿ ಕೈಗಳು ಪತ್ತೆಯಾಗಿವೆ ಎಂದು ಪುರಿ ಜಿಲ್ಲಾಧಿಕಾರಿ ಅರವಿಂದ್ ಅಗರವಾಲ್ ಅವರು ತಿಳಿಸಿದ್ದಾರೆ. ಅಲ್ಲದೆ, ಇದೊಂದು ಪವಾಡ ಎಂದು ಹೇಳಿದ್ದಾರೆ. ಆದರೆ, ಬಿಜೆಪಿ ಸೇರಿದಂತೆ ಇತರ ಪ್ರತಿಪಕ್ಷಗಳು ಖಜಾನೆಯ ಅಸಲಿ ಕೀಲಿ ಕೈಗಳು ಏನಾದವು ಎಂಬುದಾಗಿ ಪ್ರಶ್ನಿಸುತ್ತಿವೆ.
ಏ.4ರಂದು ಪುರಿ ಮಂದಿರದ ಖಜಾನೆಯ ಕೀಲಿ ಕೈಗಳು ನಾಪತ್ತೆಯಾಗಿವೆ ಎಂಬುದನ್ನು ಪುರಿ ಜಿಲ್ಲಾಡಳಿತ ಕಂಡುಕೊಂಡಿತ್ತು. ಇದು ರಾಜಕೀಯ ಆರೋಪ-ಪ್ರತ್ಯಾರೋಪಗಳಿಗೂ ಕಾರಣವಾಗಿತ್ತು. ಆದರೆ, ಈ ಕುರಿತು ವಿಚಾರಣೆ ಕೈಗೊಂಡಿದ್ದ ನಾಲ್ವರು ಸಿಬ್ಬಂದಿಗಳಿಗೆ ದಾಖಲೆಗಳನ್ನಿಟ್ಟಿರುವ ಕೊಠಡಿಯಲ್ಲಿ ರತ್ನ ಭಂಡಾರದ ನಕಲಿ ಕೀಲಿ ಕೈಗಳು ಎಂಬುದಾಗಿ ಬರೆದ ಕಂದುಬಣ್ಣದ ಲಕೋಟೆ ಪತ್ತೆಯಾಗಿದೆ ಎಂದು ಪತ್ರಕರ್ತರಿಗೆ ಜಿಲ್ಲಾಧಿಕಾರಿ ಅಗರವಾಲ್ ಅವರು ಶುಕ್ರವಾರ ಮಾಹಿತಿ ನೀಡಿದ್ದಾರೆ.
ನಾಪತ್ತೆಯಾದ ಭಂಡಾರ ಕೀಲಿ ಕೈಗಳಿಗಾಗಿ ಐದು ದಿನಗಳಿಂದ ಹುಡುಕಿದರೂ ಪತ್ತೆಯಾಗಿರಲಿಲ್ಲ. ಹೀಗಾಗಿ, ನೀನೇ ರಕ್ಷಿಸಬೇಕು ಎಂದು ದೇವರ ಮೊರೆ ಹೋಗಿದ್ದೆ. ಇದೀಗ ಪವಾಡಸದೃಶದಂತೆ ಕೀಲಿ ಕೈಗಳು ಪತ್ತೆಯಾಗಿವೆ ಎಂದಿದ್ದಾರೆ 2007ನೇ ಬ್ಯಾಚ್ ಐಎಎಸ್ ಅಧಿಕಾರಿ ಅಗರವಾಲ್.