ಲೋಕಸಭಾ ಚುನಾವನೆಯಲ್ಲಿ  ಭರ್ಜರಿ ಬಹುಮತ ಪಡೆದ ವೈಎಸ್ ಆರ್ ಕಾಂಗ್ರೆಸ್ ಮುಖ್ಯಸ್ಥ ಜಗನ್ ಮೋಹನ್ ರೆಡ್ಡಿ ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗಿ ವಿಶೇಷ ಬೇಡಿಕೆ ಸಲ್ಲಿಸಿದರು. 

ನವದೆಹಲಿ: ಆಂಧ್ರ ಪ್ರದೇಶದ ನಿಯೋಜಿತ ಮುಖ್ಯಮಂತ್ರಿ ಹಾಗೂ ವೈಎಸ್‌ಆರ್‌ ಕಾಂಗ್ರೆಸ್‌ ಅಧ್ಯಕ್ಷ ವೈಎಸ್‌ ಜಗನ್‌ಮೋಹನ್‌ ರೆಡ್ಡಿ ಅವರು ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದು, ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ಕೋರಿಕೆ ಸಲ್ಲಿಸಿದ್ದಾರೆ.

Add Asianetnews Kannada as a Preferred SourcegooglePreferred

ಲೋಕ ಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಿ ನಿವಾಸದಲ್ಲಿ ಮೋದಿ ಅವರನ್ನು ಭೇಟಿಯಾದ ಜಗನ್‌, ರಾಜ್ಯ ಹಣಕಾಸು ಪರಿಸ್ಥಿತಿಗಳನ್ನು ವಿವರಿಸಿ ಕೇಂದ್ರದಿಂದ ಅನುದಾನ ನೀಡುವಂತೆ ಕೇಳಿಕೊಂಡಿದ್ದಾರೆ. ಇದೇ ವೇಳೆ ಮೇ 30ರಂದು ತಮ್ಮ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಬರುವಂತೆ ಮೋದಿ ಅವರನ್ನು ಜಗನ್‌ ಆಹ್ವಾನಿಸಿದ್ದಾರೆ. ಬಳಿಕ ಜಗನ್‌ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರನ್ನು ಭೇಟಿಯಾಗಿ ರಾಜ್ಯದ ಪ್ರಮುಖ ಬೇಡಿಕೆಗಳಿಗೆ ಬೆಂಬಲವನ್ನು ಕೋರಿದರು.

ಭೇಟಿಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಗನ್‌, ‘ಆಂಧ್ರಕ್ಕೆ ವಿಶೇಷ ಸ್ಥಾನ ಪಡೆದುಕೊಳ್ಳಲು ನಾವು ಈಗ ಬೇಡಿಕೆ ಇಡುವ ಮತ್ತು ಆಗ್ರಹಿಸುವ ಸ್ಥಿತಿಯಲ್ಲಿ ಇಲ್ಲ. ನಾವು ಬೇರೆಯವರ ಕನಿಕರದಿಲ್ಲಿ ಇರಬೇಕಾಗಿ ಬಂದಿದೆ. ಒಂದು ವೇಳೆ ಬಿಜೆಪಿ 250ಕ್ಕಿಂತಲೂ ಕಡಿಮೆ ಸ್ಥಾನಗಳನ್ನು ಪಡೆದುಕೊಂಡಿದ್ದರೆ ಒಳ್ಳೆಯ ಅವಕಾಶ ಇರುತ್ತಿತ್ತು. ಬೆಂಬಲ ಬೇಕಾದರೆ ನಮ್ಮ ಬೇಡಿಕೆ ಈಡೇರಿಸಿ ಎಂದು ಕೇಳಬಹುದಾಗಿತ್ತು. ಆದರೆ, ಬಿಜೆಪಿ 353 ಸ್ಥಾನಗಳನ್ನು ಪಡೆದುಕೊಂಡಿದೆ. ಅವರಿಗೆ ಈಗ ನಮ್ಮ ಅಗತ್ಯವಿಲ್ಲ. ಆದರೆ, ಕಾಲ ಹೀಗೆಯೇ ಇರುವುದಿಲ್ಲ ಎನ್ನುವುದನ್ನು ಮೋದಿ ಅವರಿಗೆ ನಾನು ಪದೇ ಪದೇ ನೆನಪಿಲು ಬಯಸುತ್ತೇನೆ’ ಎಂದು ಹೇಳಿದ್ದಾರೆ.

ನಾಯ್ಡು ಯೋಜನೆಗಳ ತನಿಖೆ: 
ಇದೇ ವೇಳೆ, ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಅವಧಿಯಲ್ಲಿ ಜಾರಿಯಾದ ನೂತನ ರಾಜಧಾನಿ ಅಮರಾವತಿ ನಿರ್ಮಾಣ ಮತ್ತು ಪೊಲಾವರಂ ಯೋಜನೆ ಇತರ ಯೋಜನೆಗಳಲ್ಲಿ ಆಗಿರುವ ಅವ್ಯವಹಾರಗಳ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ.