Asianet Suvarna News Asianet Suvarna News

ಕಾಂಗ್ರೆಸ್ ಹೈಕಮಾಂಡ್‌ಗೆ ಜಾರ್ಜ್ ಎಟಿಎಂ ಇದ್ದಂತೆ: ಶೆಟ್ಟರ್

ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಬಿ-ರಿಪೋರ್ಟ್ ಹಾಕುವಂತೆ ಸಿಐಡಿ ಮೇಲೆ ಒತ್ತಡ ಹೇರಿ ಯಶಸ್ವಿಯಾಗಿದ್ದಾರೆ.

jagadish shetter allegation on george

ಬೀದರ್(ಸೆ.28):ಕಾಂಗ್ರೆಸ್ ಹೈಕಮಾಂಡ್‌ಗೆ ಸಚಿವ ಕೆ.ಜೆ. ಜಾರ್ಜ್ ಎಟಿಎಂ ಇದ್ದಂತೆ. ಹೀಗಾಗಿ ಅವರ ಹಿತರಕ್ಷಣೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅನಿವಾರ್ಯ ಎಂದು ಪ್ರತಿಪಕ್ಷದ ನಾಯಕ ಜಗದೀಶ ಶೆಟ್ಟರ್ ವ್ಯಂಗ್ಯವಾಡಿದರು.

ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ವೀಕ್ಷಣೆಗೆ ಮಂಗಳವಾರ ಆಗಮಿಸಿದ್ದ ಸಂದರ್ಭ ಜನವಾಡಾ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಬಿ-ರಿಪೋರ್ಟ್ ಹಾಕುವಂತೆ ಸಿಐಡಿ ಮೇಲೆ ಒತ್ತಡ ಹೇರಿ ಯಶಸ್ವಿಯಾಗಿದ್ದಾರೆ. ಬಿ-ರಿಪೋರ್ಟ್ ದಾಖಲಾಗುತ್ತಿದ್ದಂತೆ ಅವಸರವಾಗಿ ಜಾರ್ಜ್‌ಗೆ ಮತ್ತೆ ಸಚಿವ ಸ್ಥಾನ ನೀಡಿದ್ದಾರೆ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ರಾಜ್ಯದಲ್ಲಿ ಕಾವೇರಿ ವಿಚಾರ ಹೊತ್ತಿ ಉರಿಯುತ್ತಿದೆ. ಅತಿವೃಷ್ಟಿ, ಅನಾವೃಷ್ಟಿಯ ವಾತಾವರಣ ರಾಜ್ಯದಲ್ಲಿ ಜನರನ್ನು ಸಂಕಷ್ಟಕ್ಕೆ ನೂಕಿದೆ. ಆದರೆ ಮುಖ್ಯಮಂತ್ರಿಗೆ ಜಾರ್ಜ್ ಅವರಿಗೆ ಸಚಿವ ಸ್ಥಾನ ಒದಗಿಸಿಕೊಡುವುದೇ ಪ್ರಮುಖವಾದಂತಾಗಿದೆ. ಹಿರಿಯ ಸಾಹಿತಿ ಕಲ್ಬುರ್ಗಿ ಹತ್ಯೆ, ಮಲ್ಲಿಕಾರ್ಜುನ ಬಂಡೆ ಶೂಟೌಟ್ ಪ್ರಕರಣ ಸೇರಿ ಹಲವು ಪ್ರಕರಣಗಳ ತನಿಖೆ ನಡೆಸುತ್ತಿರುವ ಸಿಐಡಿ ವರ್ಷಗಳು ಕಳೆದರೂ ವರದಿ ಸಲ್ಲಿಸಿಲ್ಲ. ಆದರೆ ಕೆ.ಜೆ. ಜಾರ್ಜ್ ಅವರ ಪ್ರಕರಣದಲ್ಲಿ ವಿಶೇಷ ಕಾಳಜಿ ವಹಿಸಿ ಕೇವಲ ಒಂದೂವರೆ ತಿಂಗಳಲ್ಲಿ ರಿಪೋರ್ಟ್ ಸಲ್ಲಿಕೆಯಾಗುವಂತೆ ಮಾಡಲಾಗಿದೆ ಎಂದು ದೂರಿದರು.

ವೈಮಾನಿಕ ಸಮೀಕ್ಷೆ ನಾಮ್‌ಕೇವಾಸ್ತೆ:
ವೈಮಾನಿಕ ಸಮೀಕ್ಷೆಗಿಂತ ಬರ ಪೀಡಿತ ಪ್ರದೇಶಗಳಿಗೆ ಮುಖ್ಯಮಂತ್ರಿಗಳಿಗೆ ಖುದ್ದು ಭೇಟಿ ನೀಡಿದರೆ ಮಾತ್ರ ವಾಸ್ತವತೆ ಅರಿಯಬಹುದಾಗಿದೆ ವೈಮಾನಿಕ ಸಮೀಕ್ಷೆ ನಾಮ್‌ಕೇವಾಸ್ತೆ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ತಿಳಿಸಿದರು. ಸಿಎಂ ವೈಮಾನಿಕ ಸಮೀಕ್ಷೆ ನಡೆಸುವುದು ತಪ್ಪಲ್ಲ ಆದರೆ, ನೆರೆ ಪೀಡಿತ ಪ್ರದೇಶಗಳಿಗೆ ಖುದ್ದು ಭೇಟಿ ನೀಡಿದರೆ ಹಾನಿಯ ವಾಸ್ತವ ಸ್ಥಿತಿ ಅರಿತುಕೊಳ್ಳಲು ಮತ್ತು ಅಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಲು ಸಾಧ್ಯವಾಗುತ್ತದೆ ಎಂದರು.
ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಿ

ಹಮನಾಬಾದ್/ಔರಾದ್: ಬೆಳೆ ಹಾನಿ ಕುರಿತು ಸಮೀಕ್ಷೆ ನಡೆಸಿ ಕೇಂದ್ರಕ್ಕೆ ಕೂಡಲೇ ಪ್ರಸ್ತಾವನೆ ಸಲ್ಲಿಸಲಿ. ಅಲ್ಲಿಯವರೆಗೆ ರಾಜ್ಯ ಸರ್ಕಾರವೇ ಪರಿಹಾರ ವಿತರಿಸಿ ಕೇಂದ್ರದಿಂದ ಬಂದ ಹಣವನ್ನು ಮರು ಹೊಂದಾಣಿಕೆ ಮಾಡಿಕೊಳ್ಳಲಿ ಎಂದು ಆಗ್ರಹಿಸಿದ ಅವರು, ವಿಶೇಷ ಪ್ಯಾಕೇಜ್‌ಗಾಗಿ ಕೇಂದ್ರಕ್ಕೆ ಪ್ರಸ್ತಾನೆ ಸಲ್ಲಿಸಿದ್ದಲ್ಲಿ ಅನುದಾನ ತರಲು ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು. ರೈತರ ಸಾಲ ಮನ್ನಾಕ್ಕಾಗಿ ಕೆಂದ್ರದ ಕಡೆ ನೋಡುವ ಅವಶ್ಯಕತೆ ಇಲ್ಲ. ಸರ್ಕಾರ ರೈತರಿಗೆ ನೇರವು ನೀಡುವ ಮನಸ್ಸು ಮಾಡಬೇಕು ಎಂದರು.

371ಜೆ ಸಮಗ್ರ ಚರ್ಚೆ: ಹೈ-ಕೈ ಭಾಗದ ಅಭಿವೃದ್ಧಿಗಾಗಿ 371ಜೆ ಜಾರಿಗೆ ಬಂದಿದೆ, ಆದರೆ, ಇದು ಕೆವಲ ತೋರಿಕೆಗೆ ಮಾತ್ರ ಇದ್ದು ಸರ್ಕಾರ ಈ ಭಾಗಕ್ಕೆ ಇದನ್ನ ಸಂಪೂರ್ಣವಾಗಿ ಜಾರಿಗೆ ಮಾಡಿ ವಿಶೇಷ ಅನುದಾನ ನೀಡಿ ಕೆಲಸ ಮಾಡುವುದಕ್ಕೆ ಆದ್ಯತೆ ನೀಡದಿರುವುದರಿಂದ ಈ ಭಾಗಕ್ಕೆ ಸಾಕಷ್ಟು ಅನ್ಯಾಯವಾಗಿದೆ. ಬರುವ ಅವೇಶನದಲ್ಲಿ 371ಜೆ ಕುರಿತು ಸಮಗ್ರವಾಗಿ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು.