ಮುಸ್ಲಿಂ ದೇಶಗಳಿಂದ ಪಾಕಿಸ್ತಾನಕ್ಕೆ ತಪರಾಕಿ!
ಕಾಶ್ಮೀರ ವಿಚಾರವಾಗಿ ಮುಸ್ಲಿಂ ದೇಶಗಳು ಇದೀಗ ಪಾಕಿಸ್ತಾನದ ವಿರುದ್ಧ ಗರಂ ಆಗಿವೆ. ಇದರಿಂದ ಪಾಕ್ಗೆ ಭಾರಿ ಮುಖಭಂಗವಾದಂತಾಗಿದೆ.
ಇಸ್ಲಾಮಾಬಾದ್ [ಸೆ.17]: ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಮಾಡುವ 370ನೇ ವಿಧಿ ರದ್ದು ಮಾಡಿದ ಭಾರತದ ನಿರ್ಧಾರವನ್ನು ಜಾಗತಿಕ ವಿಷಯವನ್ನಾಗಿ ಮಾಡಲು ವಿವಿಧ ವೇದಿಕೆಗಳಲ್ಲಿ ಅವಮಾನ ಅನುಭವಿಸಿದ್ದ ಪಾಕಿಸ್ತಾನಕ್ಕೆ ಇದೀಗ ಮುಸ್ಲಿಂ ದೇಶಗಳೂ ಪರೋಕ್ಷ ತಪರಾಕಿ ಹಾಕಿವೆ.
ಭಾರತದ ವಿರುದ್ಧ ಯುದ್ಧೋನ್ಮಾದ ಪ್ರದರ್ಶಿಸುವ ಬದಲು ತಾಳ್ಮೆಯಿಂದ ವರ್ತಿಸಿ ಎಂದು ಪ್ರಮುಖ ಮುಸ್ಲಿಂ ದೇಶಗಳ ನಾಯಕರು ಇಮ್ರಾನ್ ಖಾನ್ಗೆ ಸಲಹೆ ನೀಡಿದ್ದಾರೆ ಎಂದು ಪಾಕಿಸ್ತಾನದ ‘ದ ಎಕ್ಸ್ಪ್ರೆಸ್ ಟ್ರಿಬ್ಯೂನ್’ ಪತ್ರಿಕೆ ವರದಿ ಮಾಡಿದೆ. ಇದರೊಂದಿಗೆ ಕಾಶ್ಮೀರ ವಿಷಯದಲ್ಲಿ ಮುಸ್ಲಿಂ ದೇಶಗಳ ಬೆಂಬಲವನ್ನೂ ಪಡೆಯಲು ವಿಫಲವಾದ ಪಾಕಿಸ್ತಾನ ಭಾರೀ ಮುಖಭಂಗಕ್ಕೆ ತುತ್ತಾಗಿದೆ.
ಸೆ.3ರಂದು ಸೌದಿ ಅರೇಬಿಯಾದ ವಿದೇಶಾಂಗ ಖಾತೆ ರಾಜ್ಯ ಸಚಿವ ಅದಿಲ್ ಅಲ್ ಜುಬೈರ್, ಯುಎಇ ವಿದೇಶಾಂಗ ಸಚಿವ ಅಬ್ದುಲ್ಲಾ ಬಿನ್ ಅಲ್ ನಹ್ಯಾನ್ ಪಾಕಿಸ್ತಾನಕ್ಕೆ ಆಗಮಿಸಿದ ಪ್ರಧಾನಿ ಇಮ್ರಾನ್ ಖಾನ್, ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಷಿ, ಸೇನಾ ಮುಖ್ಯಸ್ಥ ಖಮರ್ ಜಾವೇದ್ ಬಜ್ವಾ ಜೊತೆ ಮಾತುಕತೆ ನಡೆಸಿದ್ದರು. ಈ ಮಾತುಕತೆ ವೇಳೆ ಭಾರತದೊಂದಿಗೆ ಸಂಘರ್ಷ ನಡೆಸುವುದನ್ನು ಬಿಟ್ಟು ತಾಳ್ಮೆ ಪ್ರದರ್ಶಿಸಬೇಕು. ಸದ್ಯ ಉಭಯ ದೇಶಗಳ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಭಾರತದ ಜೊತೆ ಹಿಂಬಾಗಿಲ ರಾಜತಾಂತ್ರಿಕ ಮಾತುಕತೆ ನಡೆಸಬೇಕು ಎಂದು ಸಲಹೆ ನೀಡಿದ್ದಾರೆ ಎಂದು ಪತ್ರಿಕೆ ವರದಿ ಮಾಡಿದೆ.
ಪಿಒಕೆ ಭಾರತದ ಅವಿಭಾಜ್ಯ ಅಂಗ: ಪಾಕಿಸ್ತಾನ ಅಲ್ಲಿಂದ ತೆರಳಲಿ: ಬ್ರಿಟನ್ ಸಂಸದ
ಅಲ್ಲದೆ ತಾವು ಕೇವಲ ಸೌದಿ ಮತ್ತು ಯುಎಇ ಪರವಾಗಿ ಮಾತ್ರ ಇಲ್ಲಿಗೆ ಆಗಮಿಸಿಲ್ಲ, ಬದಲಾಗಿ ಇತರೆ ಮುಸ್ಲಿಂ ದೇಶಗಳ ಪ್ರತಿನಿಧಿಗಳಾಗಿಯೂ ಆಗಮಿಸಿದ್ದು, ಅವುಗಳ ಅಭಿಪ್ರಾಯವೂ ಇದೇ ಆಗಿದೆ ಎಂದು ಉಭಯ ನಾಯಕರು ಪಾಕ್ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎನ್ನಲಾಗಿದೆ.
ಜೊತೆಗೆ ಅಗತ್ಯವಾದಲ್ಲಿ ಉಭಯ ದೇಶಗಳ ನಡುವೆ ಹಿಂಬಾಗಿಲ ಮಾತುಕತೆಗೆ ಸೂಕ್ತ ವೇದಿಕೆ ಒದಗಿಸಿಕೊಡಲೂ ತಾವು ಸಿದ್ಧ ಎಂಬ ಸಂದೇಶವನ್ನೂ ಪಾಕ್ಗೆ ರವಾನಿಸಿದ್ದಾರೆ ಎಂದು ಪತ್ರಿಕೆ ವರದಿ ಮಾಡಿದೆ.