ರಾಹುಲ್ ಪ್ರಭಾವ: ಗೋವಾದ ವೃದ್ಧ ರಾಜ್ಯಾಧ್ಯಕ್ಷ ರಾಜೀನಾಮೆ
ಪಕ್ಷದ ನಾಯಕತ್ವ ನೀಡುವಾಗ ಯುವಕರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಎಂಬ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮಾತಿನಿಂದ ಸ್ಫೂರ್ತಿಗೊಂಡು, ಗೋವಾ ಕಾಂಗ್ರೆಸ್ ಅಧ್ಯಕ್ಷ ಶಾಂತಾರಾಮ್ ನಾಯ್ಕ್ (71) ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಪಣಜಿ: ಪಕ್ಷದ ನಾಯಕತ್ವ ನೀಡುವಾಗ ಯುವಕರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಎಂಬ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮಾತಿನಿಂದ ಸ್ಫೂರ್ತಿಗೊಂಡು, ಗೋವಾ ಕಾಂಗ್ರೆಸ್ ಅಧ್ಯಕ್ಷ ಶಾಂತಾರಾಮ್ ನಾಯ್ಕ್ (71) ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ರಾಹುಲ್ರ ಭಾನುವಾರದ ಘೋಷಣೆಯಿಂದ ಪ್ರಭಾವಿತರಾಗಿ ತಾವು ರಾಜೀನಾಮೆ ಸಲ್ಲಿಸಿರುವುದಾಗಿ ನಾಯ್ಕ್ ಹೇಳಿದ್ದಾರೆ. ದೆಹಲಿಯಲ್ಲಿ 2 ದಿನಗಳ ಕಾಲ ನಡೆದ ಎಐಸಿಸಿ ಅಧಿವೇಶನದ ವೇಳೆ ಸಂಪೂರ್ಣ ವೇದಿಕೆ ಖಾಲಿ ಬಿಡಲಾಗಿತ್ತು. ಪ್ರತಿಯೊಬ್ಬ ನಾಯಕರೂ ತಮ್ಮ ಸರದಿ ಬಂದಾಗ ವೇದಿಕೆ ಹತ್ತಿ ಭಾಷಣ ಮಾಡುತ್ತಿದ್ದರು.
ಸೋನಿಯಾ ಗಾಂಧಿ ಸೇರಿದಂತೆ ಪ್ರತಿಯೊಬ್ಬರೂ ಕೆಳಗೆ ಕುಳಿತಿದ್ದರು. ರಾಹುಲ್ ಭಾಷಣ ಮಾಡುವಾಗ ವೇದಿಕೆ ಖಾಲಿ ಬಿಟ್ಟಿದ್ದ ಉದ್ದೇಶ ತಿಳಿಸಿದರು. ಯುವ ತಲೆಮಾರು ನಾಯಕತ್ವ ವಹಿಸಿಕೊಳ್ಳಲಿ ಎಂಬ ಉದ್ದೇಶದಿಂದ ವೇದಿಕೆ ಖಾಲಿ ಬಿಡಲಾಗಿದೆ ಎಂದು ಅವರು ಹೇಳಿದ್ದರು. ಹೀಗಾಗಿ ತಮ್ಮ ತಲೆಮಾರು ಯುವಕರಿಗೆ ನಾಯಕತ್ವ ಬಿಟ್ಟುಕೊಡುವ ಸಲುವಾಗಿ ರಾಜೀನಾಮೆ ನೀಡಿದ್ದೇನೆ ಎಂದು ಹೇಳಿದ್ದಾರೆ.