ಭಾರತದ ಗುಪ್ತಚರ ವರದಿ ಉದ್ದೇಶಪೂರ್ವಕ ಮುಚ್ಚಿಟ್ಟಿದ್ದ ಅಧಿಕಾರಿಗಳು: ಲಂಕಾ ಸರ್ಕಾರ

ಕೊಲಂಬೋ[ಏ.25]: ಭಾರತದ ಗುಪ್ತಚರ ವರದಿ ಇದ್ದಾಗಲೂ ಶ್ರೀಲಂಕಾ ಸರ್ಕಾರ ಅದನ್ನು ನಿರ್ಲಕ್ಷಿಸಿದ್ದು ಏಕೆ ಎಂಬ ಪ್ರಶ್ನೆಗಳಿಗೆ ಕೊನೆಗೂ ಉತ್ತರ ಸಿಕ್ಕಿದೆ. ಸರ್ಕಾರದಲ್ಲಿನ ಕೆಲ ಉನ್ನತ ಅಧಿಕಾರಿಗಳು ಉದ್ದೇಶಪೂರ್ವಕವಾಗಿಯೇ ಸ್ಫೋಟ ನಡೆಯುವ ಸಾಧ್ಯತೆ ಕುರಿತ ಭಾರತದ ವರದಿಯನ್ನು ಮುಚ್ಚಿಟ್ಟಿದ್ದರು ಎಂದು ಲಂಕಾ ಸರ್ಕಾರ ಬಹಿರಂಗಪಡಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಭಾರತೀಯ ದೂತಾವಾಸ ಕಚೇರಿ, ಚರ್ಚ್, ಹೋಟೆಲ್‌ ಹಾಗೂ ರಾಜಕಾರಣಿಗಳ ಮೇಲೆ ದಾಳಿ ನಡೆಯುವ ಸಾಧ್ಯತೆ ಇದೆ ಎಂದು 10 ದಿನಗಳ ಹಿಂದೆಯೇ ಭಾರತದ ಗುಪ್ತಚರ ಸಂಸ್ಥೆಗಳು ಲಂಕಾದ ಗುಪ್ತಚರ ಸಂಸ್ಥೆಯೊಂದಿಗೆ ಮಾಹಿತಿ ಹಂಚಿಕೊಂಡಿದ್ದವು. ಇನ್ನು ಏ.7ರಂದು ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ನೇತೃತ್ವದಲ್ಲಿ ಭದ್ರತಾ ಮಂಡಳಿ ಸಭೆ ನಡೆದಿತ್ತಾದರೂ ಅಂದು ಗುಪ್ತಚರ ಇಲಾಖೆಗೆ ಸೇರಿದ ಅಧಿಕಾರಿಗಳು ಭಾರತದ ವರದಿ ಕುರಿತು ಮಾಹಿತಿ ನೀಡಿರಲಿಲ್ಲ.

ಹಿರಿಯ ಅಧಿಕಾರಿಗಳು ಭಾರತದ ಗುಪ್ತಚರ ವರದಿಯನ್ನು ಉದ್ದೇಶ ಪೂರ್ವಕವಾಗಿ ಬಹಿರಂಗಪಡಿಸದೆ ಬಚ್ಚಿಟ್ಟುಕೊಂಡಿದ್ದರು. ವರದಿ ಇದ್ದೂ ಕ್ರಮ ತೆಗೆದುಕೊಳ್ಳಲು ಮುಂದಾಗಲಿಲ್ಲ ಎಂದು ಸಾರ್ವಜನಿಕ ಉದ್ಯಮ ಖಾತೆ ಸಚಿವ ಲಕ್ಷ್ಮಣ್‌ ಕಿರಿಯೆಲ್ಲಾ ಸಂಸತ್‌ಗೆ ತಿಳಿಸಿದ್ದಾರೆ. ಈ ಬಗ್ಗೆ ತನಿಖೆ ಆಗಬೇಕು ಎಂದೂ ಒತ್ತಾಯಿಸಿದ್ದಾರೆ.