ಮರಣದಂಡನೆ ನಿಷೇಧ ನಿರ್ಣಯಕ್ಕೆ ಭಾರತ ಆಕ್ಷೇಪ
‘‘ಪ್ರತಿಯೊಂದು ರಾಷ್ಟ್ರಕ್ಕೂ ತಮ್ಮ ಕಾನೂನು ವ್ಯವಸ್ಥೆ ಕುರಿತು ನಿರ್ಧರಿಸುವ ಅಧಿಕಾರವಿದೆ. ಹಾಗಾಗಿಯೇ ನೂತನ ತಿದ್ದುಪಡಿ ಪರ ಮತ ಚಲಾಯಿಸಿದ್ದೇವೆ’’
ನವದೆಹಲಿ(ನ.19): ಮರಣ ದಂಡನೆ ಮೇಲೆ ನಿಷೇಧ ಹೇರುವ ವಿಶ್ವಸಂಸ್ಥೆಯ ನಿರ್ಣಯಕ್ಕೆ ಭಾರತ ಆಕ್ಷೇಪ ವ್ಯಕ್ತಪಡಿಸಿದೆ.
ಪ್ರತಿಯೊಂದು ರಾಷ್ಟ್ರಕ್ಕೂ ತಮ್ಮ ಕಾನೂನು ವ್ಯವಸ್ಥೆಯನ್ನು ಹೊಂದುವ ಪರಮಾಧಿಕಾರವಿದೆ ಮತ್ತು ಮರಣದಂಡನೆ ಮೇಲಿನ ನಿಷೇಧದ ವಿಶ್ವಸಂಸ್ಥೆಯ ನಿರ್ಣಯವು ಭಾರತದ ಶಾಸನಬದ್ಧ ಕಾನೂನಿಗೆ ವಿರುದ್ಧವಾಗಿದೆ ಎಂದು ಭಾರತ ಪ್ರತಿಪಾದಿಸಿದೆ. ಆದರೆ, ಆಂತರಿಕ ಕಾನೂನು ವ್ಯವಸ್ಥೆಯನ್ನು ತಿದ್ದುಪಡಿ ಮೂಲಕ ಅಭಿವೃದ್ಧಿಗೊಳಿಸುವ ಸಾರ್ವಭೌಮತ್ವಕ್ಕೆ ಭಾರತ ಬೆಂಬಲ ಸೂಚಿಸಿದೆ.
‘‘ಪ್ರತಿಯೊಂದು ರಾಷ್ಟ್ರಕ್ಕೂ ತಮ್ಮ ಕಾನೂನು ವ್ಯವಸ್ಥೆ ಕುರಿತು ನಿರ್ಧರಿಸುವ ಅಧಿಕಾರವಿದೆ. ಹಾಗಾಗಿಯೇ ನೂತನ ತಿದ್ದುಪಡಿ ಪರ ಮತ ಚಲಾಯಿಸಿದ್ದೇವೆ,’’ ಎಂದು ಭಾರತದ ಪ್ರತಿನಿ ಮಯಾಂಕ್ ಜೋಷಿ ಹೇಳಿದ್ದಾರೆ. ಆದರೆ, ವಿಶ್ವಸಂಸ್ಥೆಯ ನಿರ್ಣಯವು ಭಾರತದ ಶಾಸನಬದ್ಧ ಕಾನೂನನ್ನು ಉಲ್ಲಂಘಿಸುತ್ತದೆ. ಹಾಗಾಗಿ ನಿರ್ಣಯದ ವಿರುದ್ಧ ಮತ ಚಲಾಯಿಸಿರುವುದಾಗಿ ಭಾರತದ ನಿಯೋಗ ಹೇಳಿದೆ.
ನೂತನ ನಿರ್ಣಯದ ಪರ 115 ಮತಗಳು, 38 ಮತಗಳು ವಿರುದ್ಧವಾಗಿ ಮತ್ತು ತಟಸ್ಥ ಧೋರಣೆ ಪರ 31 ಮತಗಳು ಚಲಾವಣೆಯಾಗಿವೆ ಎಂದು ವಿಶ್ವಸಂಸ್ಥೆ ತಿಳಿಸಿದೆ.