ಪಾಕ್ ರಾಯಭಾರಿಗೆ ಉರಿ ದಾಳಿಯ ಸಾಕ್ಷಿ ಸಲ್ಲಿಕೆ
ನವದೆಹಲಿ(ಸೆ.21): ಜಮ್ಮು ಮತ್ತು ಕಾಶ್ಮೀರದ ಉರಿಯಲ್ಲಿ ನಡೆದ ದಾಳಿಯಲ್ಲಿ ತನ್ನ ಪಾತ್ರವೇ ಇಲ್ಲ ಎಂದು ಹೇಳಿಕೊಳ್ಳುತ್ತಿರುವ ಪಾಕಿಸ್ತಾನಕ್ಕೆ ಭಾರತ ಬುಧವಾರ ಸಾಕ್ಷ್ಯಗಳನ್ನು ಸಲ್ಲಿಸಿದೆ.
ನವದೆಹಲಿಯಲ್ಲಿರುವ ಪಾಕಿಸ್ತಾನ ಹೈಕಮಿಷನರ್ ಅಬ್ದುಲ್ ಬಸಿತ್ರನ್ನು ವಿದೇಶಾಂಗ ಸಚಿವಾಲಯಕ್ಕೆ ಕರೆಯಿಸಿಕೊಂಡ ವಿದೇಶಾಂಗ ಕಾರ್ಯದರ್ಶಿ ಸುಬ್ರಹ್ಮಣ್ಯನ್ ಜೈಶಂಕರ್ ಉಗ್ರರು ಬಳಸಿದ್ದ ಆಹಾರ ಪೊಟ್ಟಣಗಳು, ಗ್ರೆನೇಡ್, ಬಳಕೆ ಮಾಡಿದ್ದ ಜಿಪಿಎಸ್ ಸಲಕರಣೆಗಳು, ಔಷಧ ಮತ್ತು ಇತರ ಸಲಕರಣೆಗಳು ಇದ್ದ ಬಗ್ಗೆ ವಿವರಣೆಗಳನ್ನು ಅವರಿಗೆ ನೀಡಿದರು.
ಭಾರತದ ವಿರುದ್ಧದ ಭಯೋತ್ಪಾದನೆ ನಡೆಸುವವರಿಗೆ ತನ್ನ ನೆಲವನ್ನು ಬಳಸಲು ಅವಕಾಶನೀಡುವುದಿಲ್ಲ ಎಂಬುದಾಗಿ 2004ರಲ್ಲೇ ಪಾಕಿಸ್ತಾನ ಸರ್ಕಾರ ತನ್ನ ಬದ್ಧತೆಯನ್ನು ಘೋಷಿಸಿತ್ತು. ಈ ಅಂಶವನ್ನು ಪಾಕಿಸ್ತಾನ ಹೈಕಮಿಷನರ್ಗೆ ವಿದೇಶಾಂಗ ಕಾರ್ಯದರ್ಶಿ ನೆನಪಿಸಿದರು ಎಂದು ವಿದೇಶಾಂಗ ಇಲಾಖೆ ವಕ್ತಾರ ವಿಕಾಸ್ ಸ್ವರೂಪ್ ತಿಳಿಸಿದ್ದಾರೆ.