Asianet Suvarna News Asianet Suvarna News

ಚಿಂತಾಕ್ರಾಂತರಾಗಿದ್ದಾರೆ ಪ್ರಧಾನಿ ನರೇಂದ್ರ ಮೋದಿ

ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ ಇಬ್ಬರೂ ಬ್ಯಾಂಕ್’ಗಳನ್ನು ವಂಚಿಸಿರುವ ಪ್ರಕರಣದಲ್ಲಿ ಯುಪಿಎ ಸರ್ಕಾರದ ಅವಧಿಯನ್ನು ಎಷ್ಟೇ ಟೀಕಿಸಿದರೂ ಮೋದಿ ಸಾಮ್ರಾಜ್ಯದ ಒಳಗೆ ಇದು ಒಂದಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ. 4 ವರ್ಷದಿಂದ ಅಧಿಕಾರದಲ್ಲಿರುವ ನರೇಂದ್ರ ಮೋದಿ ಅವರು ಹಣಕಾಸು ಇಲಾಖೆ ಹಾಗೂ ಬ್ಯಾಂಕ್‌ನ ಉನ್ನತ ಅಧಿಕಾರಿಗಳಿಗೂ ತಿಳಿಯದಂತೆ ಇಷ್ಟೊಂದು ದೊಡ್ಡ ಹಗರಣ ನಡೆದಿದ್ದಾದರೂ ಹೇಗೆ ಎಂದು ತಲೆಕೆಡಿಸಿಕೊಂಡಿದ್ದಾರೆ.

India Gate Article

ನವದೆಹಲಿ : ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ ಇಬ್ಬರೂ ಬ್ಯಾಂಕ್’ಗಳನ್ನು ವಂಚಿಸಿರುವ ಪ್ರಕರಣದಲ್ಲಿ ಯುಪಿಎ ಸರ್ಕಾರದ ಅವಧಿಯನ್ನು ಎಷ್ಟೇ ಟೀಕಿಸಿದರೂ ಮೋದಿ ಸಾಮ್ರಾಜ್ಯದ ಒಳಗೆ ಇದು ಒಂದಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ. 4 ವರ್ಷದಿಂದ ಅಧಿಕಾರದಲ್ಲಿರುವ ನರೇಂದ್ರ ಮೋದಿ ಅವರು ಹಣಕಾಸು ಇಲಾಖೆ ಹಾಗೂ ಬ್ಯಾಂಕ್‌ನ ಉನ್ನತ ಅಧಿಕಾರಿಗಳಿಗೂ ತಿಳಿಯದಂತೆ ಇಷ್ಟೊಂದು ದೊಡ್ಡ ಹಗರಣ ನಡೆದಿದ್ದಾದರೂ ಹೇಗೆ ಎಂದು ತಲೆಕೆಡಿಸಿಕೊಂಡಿದ್ದಾರೆ.

ಪ್ರಧಾನಿ ಕಚೇರಿ ಅಧಿಕಾರಿಗಳು, ಹಣಕಾಸು ಇಲಾಖೆಯ ಬ್ಯಾಂಕಿಂಗ್ ವಿಭಾಗದೊಂದಿಗೆ ಸಭೆಗಳ ಮೇಲೆ ಸಭೆಗಳನ್ನು ನಡೆಸುತ್ತಿದ್ದಾರೆ. 200ಕ್ಕೂ ಹೆಚ್ಚು ವಿದೇಶದಲ್ಲಿ ಹಣ ತೆಗೆದುಕೊಳ್ಳುವ ಬ್ಯಾಂಕ್ ಗ್ಯಾರಂಟಿ ಪತ್ರವನ್ನು ಕೊಟ್ಟಿದ್ದರೂ, ಇಂಟರ್‌ನೆಟ್ ಸಂಪರ್ಕ ಇರುವ ಕೋರ್ ಬ್ಯಾಂಕಿಂಗ್ ನಿರ್ವಹಣೆ ಮಾಡುವ ಉನ್ನತ ಅಧಿಕಾರಿಗಳಿಗೆ ಗೊತ್ತಾಗದೆ ಇರುವುದು ಹೇಗೆ? ಉಸ್ತುವಾರಿ ವ್ಯವಸ್ಥೆಯಲ್ಲಿಯೇ ಏನಾದರೂ ಸಮಸ್ಯೆಗಳಿವೆಯೇ ಎಂಬುದನ್ನು ಪತ್ತೆಹಚ್ಚುವಂತೆ ಸಿಬಿಐ ಅಧಿಕಾರಿಗಳಿಗೆ ಮೋದಿ ಆದೇಶ ನೀಡಿದ್ದಾರಂತೆ.

ಕಾಂಗ್ರೆಸ್ಸನ್ನು ಎಷ್ಟೇ ಟೀಕಿಸಿದರೂ ಮೋದಿ ಹೆಸರಿನ ಇನ್ನೊಬ್ಬ ವ್ಯಕ್ತಿಯೇ ಇಷ್ಟೊಂದು ದೊಡ್ಡ ಹಗರಣದಲ್ಲಿ ಸಿಕ್ಕಿಬಿದ್ದಿರುವುದು ಪ್ರಾಮಾಣಿಕ ಇಮೇಜ್ ಇರುವ ಪ್ರಧಾನಿ ಮೋದಿಗೆ ಸ್ವಲ್ಪ ಇರಿಸು ಮುರುಸು ತಂದಿದೆ. ಚುನಾವಣೆಗೆ ಮುಂಚೆ ವರ್ಷಾಂತ್ಯದ ಒಳಗೆ ನೀರವ್ ಮೋದಿ, ಮೆಹುಲ್ ಚೋಕ್ಸಿ ಮತ್ತು ವಿಜಯ ಮಲ್ಯರನ್ನು ಭಾರತಕ್ಕೆ ತರುವುದು ಸರ್ಕಾರಕ್ಕೆ ಅನಿವಾರ್ಯ ಆಗಬಹುದು. ಇಲ್ಲವಾದಲ್ಲಿ ಜನರ ಮೂಡ್ ಬದಲಾಗಲು ರಾಜಕಾರಣದಲ್ಲಿ ಬಹಳ ಹೊತ್ತು ಹಿಡಿಯೋದಿಲ್ಲ.

ಯತ್ನಾಳ್ ಬಿಜೆಪಿ ಸೇರ್ಪಡೆಗೇಕೆ ವ್ಯಕ್ತವಾಗುತ್ತಿದೆ ವಿರೋಧ ..?

ವಿಜಯಪುರದ ಪಂಚಮಸಾಲಿ ನಾಯಕ ಬಸನಗೌಡ ಪಾಟೀಲ್ ಯತ್ನಾಳರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳಲು ಸ್ಥಳೀಯ ಉತ್ತರ ಕರ್ನಾಟಕದ ಆರ್‌ಎಸ್‌ಎಸ್ ನಾಯಕರು ವಿರೋಧಿಸುತ್ತಿದ್ದು, ಅಮಿತ್ ಶಾವರೆಗೂ ವಿರೋಧ ಮುಟ್ಟುವಂತೆ ನೋಡಿಕೊಂಡಿದ್ದಾರೆ. ಆರ್‌ಎಸ್‌ಎಸ್ ನಾಯಕರ ಜೊತೆಗೆ ಜಗದೀಶ್ ಶೆಟ್ಟರ್ ಮತ್ತು ಪ್ರಹ್ಲಾದ್ ಜೋಶಿ ಕೂಡ ಯತ್ನಾಳ್ ವಿರುದ್ಧ ನಿಂತಿದ್ದಾರೆ.

ಆದರೆ, ಯಡಿಯೂರಪ್ಪ ಮಾತ್ರ ಏನಕೇನ ಯತ್ನಾಳ್‌ರನ್ನು ಬಿಜೆಪಿಗೆ ಸೇರಿಸಿಕೊಳ್ಳಿ ಎಂದು ಹೈಕಮಾಂಡ್ ಮೇಲೆ ಒತ್ತಡ ಹಾಕುತ್ತಿದ್ದಾರೆ. ಅಮಿತ್ ಶಾ ಎದುರು ಯತ್ನಾಳ್ ಕೂಡ, ‘ಶಾಜೀ, ವಿಜಯಪುರ ಟಿಕೆಟ್ ಮುಜೆ ಪಕ್ಕಾ ಕರೋ’ ಎಂದು ಷರತ್ತು ಹಾಕಿದ್ದು ಕೂಡ ಸಮಸ್ಯೆ ಹೆಚ್ಚಾಗುವಂತೆ ಮಾಡಿದೆ. ಯಡಿಯೂರಪ್ಪ ಹಾಕಿರುವ ಲೆಕ್ಕಾಚಾರದ ಪ್ರಕಾರ ಯತ್ನಾಳ್ ಪಕ್ಷಕ್ಕೆ ಬಂದರೆ ಮಾತ್ರ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಯಲ್ಲಿ ಸ್ಥಾನಗಳು ಹೆಚ್ಚಾಗಲಿವೆ. ಇಲ್ಲದೆ ಹೋದರೆ ಯತ್ನಾಳ್ ಒಬ್ಬೊಬ್ಬ ಪಕ್ಷೇತರ ಅಭ್ಯರ್ಥಿಗಳನ್ನು ಹಾಕಿದರೂ ಬಿಜೆಪಿ ಗೆಲ್ಲುವುದು ಕಷ್ಟವಂತೆ.

Follow Us:
Download App:
  • android
  • ios