ಎರಡು ತೀರ್ಪು: ಅಪ್ಪ, ಮಗನ ಡಿಫರೆಂಟ್ ಛಾಪು!
ಸುಪ್ರೀಂ ಕೋರ್ಟ್ ನ ಎರಡು ಪ್ರಮುಖ ತೀರ್ಪುಗಳು! ತಂದೆ ಕೊಟ್ಟಿದ್ದ ತೀರ್ಪಿಗೆ ವಿರುದ್ಧ ನಿಲುವು ತಳೆದ ಜಸ್ಟೀಸ್ ಚಂದ್ರಚೂಡ್! ಜಸ್ಟೀಸ್ ವಿವೈ ಚಂದ್ರಚೂಡ್ ಪುತ್ರ ಜಸ್ಟೀಸ್ ವಿವೈ ಚಂದ್ರಚೂಡ್! ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿದ್ದ ಜಸ್ಟೀಸ್ ವಿವೈ ಚಂದ್ರಚೂಡ್! ಖಾಸಗಿ ಹಕ್ಕನ್ನು ಮೂಲಭೂತ ಹಕ್ಕಿನ ವ್ಯಾಪ್ತಿಗೆ ತರಲು ನಿರಾಕರಿಸಿದ್ದ ವಿವೈ ಚಂದ್ರಚೂಡ್! ವ್ಯಭಿಚಾರ ಕಾನೂನನ್ನು ಅಸಿಂಧುಗೊಳಿಸಲು ನಿರಾಕರಿಸಿದ್ದ ವಿವೈ ಚಂದ್ರಚೂಡ್
ನವದೆಹಲಿ(ಸೆ.27): ಜಸ್ಟೀಸ್ ಡಿವೈ ಚಂದ್ರಚೂಡ್ ಸದ್ಯ ಭಾರತದಲ್ಲಿ ಮನೆಮಾತಾಗಿರುವ ವ್ಯಕ್ತಿ. ಕಳೆದ ಎರಡು ದಿನಗಳಿಂದ ಸುಪ್ರೀಂ ಕೋರ್ಟ್ ದೇಶದ ಗತಿ ಬದಲಿಸಬಲ್ಲ ಹಲವು ತೀರ್ಪುಗಳನ್ನು ನೀಡಿದೆ. ಅದರಲ್ಲಿ ಆಧಾರ್ ಕುರಿತ ತೀರ್ಪು ಮತ್ತು ಅನೈತಿಕ ಸಂಬಂಧ ಕುರಿತಾದ ತೀರ್ಪು ಅತ್ಯಂತ ಪ್ರಮುಖವಾದವು.
ಈ ಎರಡೂ ತೀರ್ಪಿನಲ್ಲೂ ಜಸ್ಟೀಸ್ ಡಿವೈ ಚಂದ್ರಚೂಡ್ ಉಳಿದ ನ್ಯಾಯಮೂರ್ತಿಗಳಿಗಿಂತ ವಿಭಿನ್ನವಾದ ನಿಲುವು ತಳೆದು ಸುದ್ದಿಯಾಗಿದ್ದಾರೆ. ಆಧಾರ್ ಕುರಿತ ತೀರ್ಪಿನಲ್ಲಿ ಚಂದ್ರಚೂಡ್ ಸಂಪೂರ್ಣವಾಗಿ ಆಧಾರ್ ವಿರೋಧಿ ನಿಲುವು ತಳೆದಿದ್ದರು. ಆಧಾರ್ ವ್ಯಕ್ತಿಯ ಖಾಸಗಿತನವನ್ನು ಹರಣ ಮಾಡುತ್ತಿದೆ ಎಂಬುದು ಚಂದ್ರಚೂಡ್ ಅವರ ನಿಲುವಾಗಿತ್ತು. ಅದರಂತೆ ವ್ಯಭಿಚಾರ ಕಾನೂನನ್ನು ಅಕ್ರಮ ಎಂದು ತೀರ್ಪು ನೀಡುವಲ್ಲೂ ಚಂದ್ರಚೂಡ್ ಪಾತ್ರ ಅತ್ಯಂತ ಮಹತ್ವದ್ದು.
ಆದರೆ ಬಹುತೇಕರಿಗೆ ಗೊತ್ತಿರದ ಸಂಗತಿ ಎಂದರೆ ಜಸ್ಟೀಸ್ ಡಿವೈ ಚಂದ್ರಚೂಡ್ ಅವರ ತಂದೆ ಜಸ್ಟೀಸ್ ವಿವೈ ಚಂದ್ರಚೂಡ್ ಕೂಡ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿದ್ದವರು. ವಿವೈ ಚಂದ್ರಚೂಡ್ ಖಾಸಗಿತನದ ಹಕ್ಕನ್ನು ಸಂವಿಧಾನ ಮೂಲಭೂತ ಹಕ್ಕೆಂದು ಪರಿಗಣಿಸಲು ನಿರಾಕರಿಸಿದ್ದರು.
1976 ರಲ್ಲಿ ಸುಪ್ರೀಂ ಕೋರ್ಟ್ ನ ಪಂಚ ಸದಸ್ಯ ಪೀಠ ಖಸಗಿತನದ ಹಕ್ಕನ್ನು ಮೂಲಭೂತ ಹಕ್ಕಿನ ವ್ಯಾಪ್ತಿಯಲ್ಲಿ ತರಲು ನಿರಾಕರಿಸಿತ್ತು. ಜಸ್ಟೀಸ್ ವಿವೈ ಚಂದ್ರಚೂಡ್ ಈ ಪೀಠದ ಸದಸ್ಯರಲ್ಲಿ ಒಬ್ಬರು. ಅದರಂತೆ 1975 ರಲ್ಲಿ ವ್ಯಭಿಚಾರ ಕಾನೂನನ್ನು ಅಸಿಂಧುಗೊಳಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಜಸ್ಟೀಸ್ ವಿವೈ ಚಂದ್ರಚೂಡ್ ನೇತೃತ್ವದ ಪೀಠ ತಳ್ಳಿ ಹಾಕಿತ್ತು. ಅಲ್ಲದೇ ಐಪಿಸಿ ಸೆಕ್ಷನ್ 497 ನ್ನು ಸಿಂಧುಗೊಳಿಸತ್ತು.
ಆದರೆ ಸದ್ಯ ತಂದೆ ವಿವೈ ಚಂದ್ರಚೂಡ್ ಅವರ ತೀರ್ಪಿನ ವಿರುದ್ಧ ನಿಲುವು ತಳೆದಿರುವ ಪುತ್ರ ಜಸ್ಟೀಸ್ ಡಿವೈ ಚಂದ್ರಚೂಡ್ ಎರಡೂ ಪ್ರಕರಣಗಳ ತೀರ್ಪಿನಲ್ಲಿ ತಮ್ಮದೇ ಆದ ನಿಲುವು ತಳೆದಿದ್ದಾರೆ. ಈ ಮೂಲಕ ಬದಲಾದ ಸಮಯಕ್ಕೆ ಬದಲಾದ ನಿಲುವು ಹೊಂದುವುದೇ ನಮ್ಮ ಮುಂದಿರುವ ಏಕೈಕ ಮಾರ್ಗ ಎಂಬುದನ್ನು ಜಸ್ಟೀಸ್ ಡಿವೈ ಚಂದ್ರಚೂಡ್ ತೀರ್ಪಿನಲ್ಲಿ ಕಾಣಬಹುದಾಗಿದೆ.