ಸುಮಲತಾರನ್ನು ಬಿಜೆಪಿಗೆ ಸ್ವಾಗತಿಸಿದ ಬಿಜೆಪಿ ಮುಖಂಡ
ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಇದೇ ವೇಳೆ ಮಂಡ್ಯ ಕ್ಷೇತ್ರವನ್ನು ಕಾಂಗ್ರೆಸ್ - ಜೆಡಿಎಸ್ ಮೈತ್ರಿಯಲ್ಲಿ ಜೆಡಿಎಸ್ ಗೆ ಬಿಟ್ಟುಕೊಡಲಾಗಿದೆ. ಇದರಿಂದ ಮಂಡ್ಯ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಸುಮಲತಾ ಟಿಕೆಟ್ ವಿಚಾರದಲ್ಲಿ ಗೊಂದಲವಾಗಿದೆ. ಇದೀಗ ಬಿಜೆಪಿ ಮುಖಂಡರು ಒಂದು ವೇಳೆ ಸುಮಲತಾ ಪಕ್ಷಕ್ಕೆ ಬಂದರೆ ಸ್ವಾಗತ ಎಂದು ಹೇಳಿದ್ದಾರೆ.
ಬಾಗಲಕೋಟೆ : ಜೆಡಿಎಸ್ ವರಿಷ್ಠ ದೇವೇಗೌಡರಿಗೆ 28 ಮಕ್ಕಳು ಇದ್ದಿದ್ದರೆ ರಾಜ್ಯದ 28 ಲೋಕಸಭಾ ಕ್ಷೇತ್ರಕ್ಕೂ ಅವರನ್ನೇ ಅಭ್ಯರ್ಥಿಗಳನ್ನಾಗಿ ನಿಲ್ಲಿಸುತ್ತಿದ್ದರು ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ, ಸಿದ್ದರಾಮಯ್ಯ, ಈಶ್ವರಪ್ಪ ಅವರು ಕುಟುಂಬ ರಾಜಕಾರಣ ಮಾಡುತ್ತಿಲ್ಲವೇ ಎಂದು ಮಾತನಾಡುವ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ದೇವೇಗೌಡರ ಕುಟುಂಬ ಇದೀಗ ತಮ್ಮಲ್ಲಿನ ಎಲ್ಲರನ್ನೂ ರಾಜಕೀಯ ಮಾಡಲು ಹಚ್ಚಿ ಒಕ್ಕಲಿಗ ನಾಯಕತ್ವವನ್ನೂ ಕಳೆದುಕೊಳ್ಳುತ್ತಿದ್ದಾರೆ ಎಂದರು. ನನಗೆ 28 ಮಕ್ಕಳು ಹುಟ್ಟಲಿಲ್ಲವಲ್ಲ ಎಂದು ದೇವೇಗೌಡರು ಯೋಚಿಸುತ್ತಿರಬಹುದು. ಕೊನೆ ಪಕ್ಷ 14 ಜನ ಮಕ್ಕಳಾದರೂ ಇದ್ದಿದ್ದರೆ 14 ಜನ ಸೊಸೆಯಂದಿರು ಇರುತ್ತಿದ್ದರು. ಅವರಿಗೂ ಟಿಕೆಟ್ ನೀಡಬಹುದಾಗಿತ್ತು ಎಂದು ಮೂದಲಿಸಿದರು.
ರೇವಣ್ಣ ಕ್ಷಮೆ ಕೇಳಲಿ: ದಿ.ಅಂಬರೀಷ್ ಅವರ ಪತ್ನಿ ಸುಮಲತಾಗೆ ಸಚಿವ ಎಚ್.ಡಿ.ರೇವಣ್ಣ ಮಾಡಿರುವ ಅವಮಾನ ಕೇವಲ ಅವರಿಗೆ ಮಾಡಿದ ಅವಮಾನವಲ್ಲ. ರಾಜ್ಯದ ಮಹಿಳಾ ಕುಲಕ್ಕೇ ಮಾಡಿದ ಅವಮಾನ. ತಕ್ಷಣವೇ ರೇವಣ್ಣ ಕ್ಷಮೆಯಾಚಿಸಬೇಕು. ಕ್ಷಮೆ ಕೇಳದಿದ್ದರೆ ರೇವಣ್ಣನವರನ್ನು ಸಚಿವ ಸ್ಥಾನದಿಂದ ಕಿತ್ತು ಬಿಸಾಕಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಸುಮಲತಾ ಬಿಜೆಪಿಗೆ ಬಂದರೆ ಖಂಡಿತಾ ಸ್ವಾಗತಿಸುತ್ತೇವೆ ಎಂದರು.