‘ಜೆಡಿಎಸ್ ವರಿಷ್ಠ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ವೆಂಕಟೇಶಗೌಡ ಎಂಬುವವರು ಮಾಡಿರುವ ₹20 ಸಾವಿರ ಕೋಟಿ ಬೇನಾಮಿ ಹಣದ ಬಗ್ಗೆ ತೆರಿಗೆ ಇಲಾಖೆಗೆ ಬರೆದಿರುವ ಪತ್ರದಲ್ಲಿ ನನ್ನ ಪಾತ್ರ ಸಾಬೀತುಪಡಿಸಿದರೆ, ಎಚ್ಡಿಕೆ ನಿವಾಸಕ್ಕೆ ತೆರಳಿ ಬಹಿರಂಗ ಕ್ಷಮೆಯಾಚಿಸುತ್ತೇನೆ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸವಾಲು ಹಾಕಿದ್ದಾರೆ.
ಹುಬ್ಬಳ್ಳಿ (ಮೇ.25): ‘ಜೆಡಿಎಸ್ ವರಿಷ್ಠ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ವೆಂಕಟೇಶಗೌಡ ಎಂಬುವವರು ಮಾಡಿರುವ ₹20 ಸಾವಿರ ಕೋಟಿ ಬೇನಾಮಿ ಹಣದ ಬಗ್ಗೆ ತೆರಿಗೆ ಇಲಾಖೆಗೆ ಬರೆದಿರುವ ಪತ್ರದಲ್ಲಿ ನನ್ನ ಪಾತ್ರ ಸಾಬೀತುಪಡಿಸಿದರೆ, ಎಚ್ಡಿಕೆ ನಿವಾಸಕ್ಕೆ ತೆರಳಿ ಬಹಿರಂಗ ಕ್ಷಮೆಯಾಚಿಸುತ್ತೇನೆ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸವಾಲು ಹಾಕಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವೆಂಕಟೇಶಗೌಡ ಎಂಬುವವರು ಆದಾಯ ತೆರಿಗೆ ಇಲಾಖೆಗೆ ಬರೆದಿರುವ ಪತ್ರ ಸಿದ್ಧವಾಗಿದ್ದು ಬಿಜೆಪಿ ಕಚೇರಿಯಲ್ಲಿ ಎಂದು ಕುಮಾರಸ್ವಾಮಿ ಮಾಡಿರುವ ಆರೋಪದಲ್ಲಿ ಹುರುಳಿಲ್ಲ. ಕುಮಾರಸ್ವಾಮಿ ಅವರು ತಾವು ಅಕ್ರಮ ಆಸ್ತಿ ಸಂಪಾದಿಸಿಲ್ಲ ಎಂಬುದನ್ನು ಸಾಬೀತು ಪಡಿಸಲಿ, ಇಲ್ಲವೇ ವೆಂಕಟೇಶಗೌಡರ ವಿರುದ್ಧ ಕಾನೂನು ಕ್ರಮಕೈಗೊಳ್ಳಲಿ. ಈ ಪ್ರಕರಣದಲ್ಲಿ ತಮ್ಮದು ಯಾವುದೇ ಪಾತ್ರ ಇಲ್ಲ ಎಂದು ಸ್ಪಷ್ಟಪಡಿಸಿದರು.
ದಲಿತರ, ಅಲ್ಪಸಂಖ್ಯಾತರ, ಹಿಂದುಳಿದವರಿಂದ ರಾಜ್ಯಾದ್ಯಂತ ಬಿಜೆಪಿಗೆ ಸಿಗುತ್ತಿರುವ ಬೆಂಬಲ ಕಂಡು ಸಹಿಸದ ಕಾಂಗ್ರೆಸ್ ಹಾಗೂ ಜೆಡಿಎಸ್, ತಮ್ಮ ವಿರುದ್ಧ ಸಲ್ಲದ ಆರೋಪ ಮಾಡುತ್ತಿವೆ. ಕುಮಾರಸ್ವಾಮಿ ಅವರು ‘ಹಿಟ್ ಆ್ಯಂಡ್ ರನ್’ನಂತಹ ಹೇಳಿಕೆ ನೀಡುವುದನ್ನು ಬಿಟ್ಟು, ಜವಾಬ್ದಾರಿಯಿಂದ ನಡೆದುಕೊಳ್ಳಲಿ ಎಂದರು.
ಐಎಎಸ್ ಅಧಿಕಾರಿ ಅನುರಾಗ ತಿವಾರಿಯ ಹತ್ಯೆಯ ನೈತಿಕ ಹೊಣೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಹೊರಬೇಕು. ಅವರ ಸರ್ಕಾರದಲ್ಲಿ ಪ್ರಾಮಾಣಿಕ ಐಎಎಸ್- ಐಪಿಎಸ್ ಅಧಿಕಾರಿಗಳಿಗೆ ರಕ್ಷಣೆ ಇಲ್ಲದಂತಾಗಿದೆ. ತಮ್ಮ ಬೆಂಬಲಿಗರೊಂದಿಗೆ ಕೈಜೋಡಿಸುವ ಅಧಿಕಾರಿಗಳ ಬೆನ್ನು ತಟ್ಟುವ ಮುಖ್ಯಮಂತ್ರಿಗಳು ಪ್ರಾಮಾಣಿಕ ಅಧಿಕಾರಿಗಳಿಗೆ ಕಿರುಕುಳ ನೀಡುತ್ತಿದ್ದಾರೆ. ಕೆಲ ಐಎಎಸ್ ಅಧಿಕಾರಿಗಳು ತಮ್ಮನ್ನೂ ಭೇಟಿಯಾಗಿದ್ದು, ಬೇರೆಡೆ ವರ್ಗಾವಣೆಗಾಗಿ ದುಂಬಾಲು ಬಿದ್ದಿದ್ದಾರೆ ಎಂದು ಯಡಿಯೂರಪ್ಪ ತಿಳಿಸಿದರು.
