ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಪತನವಾಗಲಿದೆ. ಬಿಎಸ್ ವೈ ಮತ್ತೆ ಸಿಎಂ ಆಗಲಿದ್ದಾರೆ ಎನ್ನುವ ಬಿಜೆಪಿ ನಾಯಕರ ಹೇಳಿಕೆ ನಿರಂತರವಾಗಿರುವ ಬೆನ್ನಲ್ಲೇ ಅವರನ್ನು ಕಾಂಗ್ರೆಸಿಗೆ ಆಹ್ವಾನಿಸಲಾಗಿದೆ. ಈ ಮೂಲಕ ಕೈ ನಾಯಕರೋರ್ವರು ಟಾಂಗ್ ನೀಡಿದ್ದಾರೆ.

ವಿಜಯಪುರ : ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ಬಿ.ಎಸ್.ಯಡಿಯೂರಪ್ಪ ಕಾಂಗ್ರೆಸ್ ಗೆ ಬಂದರೆ ಮುಖ್ಯಮಂತ್ರಿಯಾಗಲು ಸಹಕರಿಸುತ್ತೇವೆ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ. 

Add Asianetnews Kannada as a Preferred SourcegooglePreferred

ವಿಜಯಪುರದಲ್ಲಿ ಮಾತನಾಡಿದ ಪಾಟೀಲ್, ಬಿಎಸ್ ವೈ ಅವರನ್ನು ಕಾಂಗ್ರೆಸ್ ಗೆ ಆಹ್ವಾನಿಸುವ ಮೂಲಕ ಸಿ.ಟಿ. ರವಿ ಅವರಿಗೆ ಟಾಂಗ್ ನೀಡಿದ್ದಾರೆ. ಬಿಎಸ್ ವೈ ಸಿಎಂ ಆಗಲು ಎಂ.ಬಿ.ಪಾಟೀಲ್ ಸಹಕಾರ ನೀಡಲಿ ಎನ್ನುವ ಸಿ.ಟಿ.ರವಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. 

ನಾನು ಒಂದು ಪಕ್ಷದಲ್ಲಿದ್ದೇನೆ. ಬಿ.ಎಸ್.ಯಡಿಯೂರಪ್ಪ ಇನ್ನೊಂದು ಪಕ್ಷದಲ್ಲಿದ್ದಾರೆ. ಅವರು ನಮ್ಮ ಪಕ್ಷಕ್ಕೆ ಬಂದಲ್ಲಿ ಮುಖ್ಯಮಂತ್ರಿಯಾಗಲು ಸಹಾಯ ಮಾಡುವುದಾಗಿ ಎಂ.ಬಿ.ಪಾಟೀಲ್ ಹೇಳಿದರು. 

ಲಿಂಗಾಯತರಿಗೆ ಕೇಂದ್ರ ಸಂಪುಟದಲ್ಲಿ ಅನ್ಯಾಯವಾಗಿದೆ ಎಂದು ಎಂ.ಬಿ.ಪಾಟೀಲ್ ನೀಡಿದ್ದ ಹೇಳಿಕೆಗೆ ಸಿ.ಟಿ.ರವಿ ಪ್ರತಿಕ್ರಿಯಿಸಿ ಬಿಎಸ್ ವೈ ಸಿಎಂ ಆಗಲು ಎಂ.ಬಿ.ಪಾಟೀಲ್ ಸಹಕಾರ ನೀಡಲಿ ಎಂದಿದ್ದರು. ಇದೀಗ ಬಿಎಸ್ ವೈ ಅವರನ್ನು ಕಾಂಗ್ರೆಸ್ ಗೆ ಆಹ್ವಾನಿಸುವ ಮೂಲಕ ಸಿ.ಟಿ.ರವಿಗೆ ಟಾಂಗ್ ನೀಡಿದ್ದಾರೆ.