ಇದು ವಿಪರ್ಯಾಸವಾದ್ರೂ ನಿಜ. ನಾವು-ನೀವು ನಂಬಲೇಬೇಕು. ಇಂಗ್ಲೆಂಡ್ ತಂಡ ಭಾರತ ಪ್ರವಾಸ ಕೈಗೊಂಡಾಗ ಭಾರತದಲ್ಲಿ ಯಾವುದಾದ್ರೂ ಒಂದು ಆಹಿತಕರ ಘಟನೆ ನಡೆಯುತ್ತದೆ. ಒಂದಲ್ಲ ಎರಡಲ್ಲ ಹಲವು ಬಾರಿ ಇದು ಸಾಬೀತಾಗಿದೆ. ಕೆಲವ್ರಿಗೆ ಇದು ತಮಾಷೆ ಎನಿಸಿದ್ರೂ ಇದು ಸತ್ಯ. 1984ರಿಂದ 2016ವರೆಗಿನ ಆ ದುರ್ಘಟನೆಗಳು ಇಲ್ಲಿವೆ ನೋಡಿ.
ಬೆಂಗಳೂರು: ಇಂಗ್ಲೆಂಡ್ ಕ್ರಿಕೆಟ್ ತಂಡ ಭಾರತ ಪ್ರವಾಸ ಕೈಗೊಂಡಿದೆ ಅಂದ್ರೆ ಸಾಕು ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಭಯ ಶುರುವಾಗುತ್ತದೆ. ಕಳೆದ ಮೂರು ದಶಕಗಳಿಂದ ಕ್ರಿಕೆಟ್ ಫಾಲೋ ಮಾಡುತ್ತಿರುವವರಿಗೆ ಈ ವಿಷಯ ತಿಳಿದಿದೆ. ಭಾರತಕ್ಕೆ ಇಂಗ್ಲೆಂಡ್ ತಂಡ ಆಗಮಿಸಿದರೆ ಸಾಕು ಇಲ್ಲಿ ಒಂದು ದೊಡ್ಡ ದುರಂತ ನಡೆಯುವುದು ಖಚಿತ. ಕಳೆದ ಮೂರು ದಶಕದಲ್ಲಿ ಇಂಗ್ಲೆಂಡ್ ತಂಡ ಅಪ್ರಿಯ ಘಟನೆಗಳ ಬಿಸಿ ಅನುಭವಿಸಿದೆ.
1984ರಲ್ಲಿ ಇಂದಿರಾಗಾಂಧಿ ಹತ್ಯೆ
1984ರಲ್ಲಿ ಇಂಗ್ಲೆಂಡ್ ತಂಡ 5 ಟೆಸ್ಟ್'ಗಳ ಸರಣಿ ಆಡಲು ಭಾರತ ಪ್ರವಾಸಕೈಗೊಂಡಿತ್ತು. ನವೆಂಬರ್ 28ರಂದು ಇಂಗ್ಲೆಂಡ್ ಮೊಹಾಲಿಯಲ್ಲಿ ಅಭ್ಯಾಸ ಪಂದ್ಯವಾಡಬೇಕಿತ್ತು. ಆದರೆ ಅಕ್ಟೋಬರ್ 31ರಂದೇ ಇಂದಿರಾಗಾಂಧಿ ಹತ್ಯೆಯಾಯ್ತು. ಹಾಗಾಗಿ ಪಂಜಾಬ್'ನ ಮೊಹಾಲಿಯಲ್ಲಿ ಬಿಗುವಿನ ವಾತಾವರಣ ಮುಂದುವರೆಯಿತು. ಇಂಧಿರಾಗಾಂಧಿ ಹತ್ಯೆಯಿಂದಾಗಿ ಹಲವು ದಿನಗಳ ಕಾಲ ಇಂಗ್ಲೆಂಡ್ ತಂಡ ಅಭ್ಯಾಸ ಪಂದ್ಯವಿಲ್ಲದೆ ಹೊಟೇಲ್'ನಲ್ಲೇ ದಿನ ಕಳೆಯುವಂತಹ ಇಕ್ಕಟ್ಟಿಗೆ ಸಿಲುಕಿತ್ತು.
1993ರಲ್ಲಿ ಮುಂಬೈ ಬಾಂಬ್ ಬ್ಲಾಸ್ಟ್:
1993ರಲ್ಲಿ ಇಂಗ್ಲೆಂಡ್ ತಂಡ ಜನವರಿಯಿಂದ ಮಾರ್ಚ್'ವರೆಗೆ ಏಕದಿನ ಮತ್ತು ಟೆಸ್ಟ್ ಸರಣಿ ಆಡಲು ಭಾರತ ಪ್ರವಾಸ ಕೈಗೊಂಡಿತ್ತು. ಇಂಗ್ಲೆಂಡ್ ಫೆಬ್ರವರಿ 19ರಿಂದ 23ವರೆಗೆ ಮುಂಬೈನಲ್ಲಿ 3ನೇ ಟೆಸ್ಟ್ ಆಡಿತ್ತು. ಆದರೆ ಇದಾದ ತತ್'ಕ್ಷಣ ಮುಂಬೈ ಭೀಕರ ಬಾಂಬ್ ಬ್ಲಾಸ್ಟ್'ನಿಂದ ಬಳಲಿತು. ಅಹ್ಮದಾಬಾದ್'ನಲ್ಲಿ 4ನೇ ಏಕದಿನ ಪಂದ್ಯ ಆಡಬೇಕಿತ್ತು. ಆದರೆ ಅಲ್ಲಿ ಪರಿಸ್ಥಿತಿ ತೀರ ಹದಗೆಟ್ಟ ಕಾರಣ, ಇಂಗ್ಲೆಂಡ್ ತಂಡದ ಆಟಗಾರರಿಗೂ ಸೂಕ್ತ ಭದ್ರತೆ ನೀಡುವುದು ಭಾರತ ಸರ್ಕಾರಕ್ಕೆ ಕಷ್ಟವಾಗಿತ್ತು. ಹಾಗಾಗಿ ಪಂದ್ಯವನ್ನು ಬೆಂಗಳೂರಿಗೆ ಸ್ಥಳಾಂತರಿಸಲಾಯ್ತು.
2008ರಲ್ಲಿ ಭಯೋತ್ಪಾದಕರ ದಾಳಿ:
2008ರಲ್ಲಿ ಇಂಗ್ಲೆಂಡ್ ತಂಡ ಎರಡು ಟೆಸ್ಟ್ ಮತ್ತು 7 ಏಕದಿನ ಪಂದ್ಯಗಳ ಸರಣಿಯಾಡಲು ಭಾರತಕ್ಕೆ ಆಗಮಿಸಿತ್ತು. ನವೆಂಬರ್ 9ರಿಂದ ಡಿಸೆಂಬರ್ 23ರ ತನಕ ಭಾರತ ಪ್ರವಾಸ ಕೈಗೊಂಡಿತ್ತು. ನವೆಂಬರ್ 26ರಂದು ಮುಂಬೈನಲ್ಲಿ ಭೀಕರ ಭಯೋತ್ಪಾದಕ ದಾಳಿ ನಡೆಯಿತು. ಆ ವೇಳೆ ಭಾರತ-ಇಂಗ್ಲೆಂಡ್ ತಂಡ ಕಟಕ್'ನಲ್ಲಿ ಏಕದಿನ ಪಂದ್ಯವಾಡುತ್ತಿದ್ದವು. ಇದಾದ ಮೇಲೆ ಅಹ್ಮದಾಬಾದ್ ಮತ್ತು ಮುಂಬೈನಲ್ಲಿ ಎರಡು ಟೆಸ್ಟ್ ಆಡಬೇಕಿತ್ತು. ಪರಿಸ್ಥಿತಿ ತುಂಬಾ ಸೂಕ್ಷ್ಮವಾಗಿದ್ದರಿಂದ ಆ ಟೆಸ್ಟ್'ಗಳು ಚೆನ್ನೈ ಮತ್ತು ಮೊಹಾಲಿಗೆ ಸ್ಥಳಾಂತರಿಸಲಾಯ್ತು.
2012ರಲ್ಲಿ ಅಜ್ಮಲ್'ಗೆ ಗಲ್ಲು ಶಿಕ್ಷೆ:
2012ರ ಅಕ್ಟೋಬರ್ 27ರಿಂದ 2013 ಜನವರಿ 27ರ ತನಕ ಇಂಗ್ಲೆಂಡ್ ತಂಡ ಭಾರತ ಪ್ರವಾಸ ಕೈಗೊಂಡಿತ್ತು. ಈ ವೇಳೆ 2008ರ ಭಯೋತ್ಪಾದಕ ದಾಳಿಯಲ್ಲಿ ಸೆರೆ ಸಿಕ್ಕಿದ್ದ ಉಗ್ರ ಅಜ್ಮಲ್ ಕಸಬ್'ಗೆ ನವೆಂಬರ್ 21ರಂದು ಗಲ್ಲು ಶಿಕ್ಷೆ ನೀಡಲಾಯ್ತು. ಕಸಬ್ ಪರ ವಿರೋಧ ವಾದವಿವಾದ ನಡುವೆಯೇ ಗಲ್ಲು ಶಿಕ್ಷೆ ನೀಡುವ ಮೂಲಕ ಭಾರತದ ಕರಾಳ ಅಧ್ಯಾಯಕ್ಕೆ ಕಾರಣವಾಗಿದ್ದ ಉಗ್ರನ ಕಥೆ ಮುಗಿದಿತ್ತು. ಆ ಸಮಯದಲ್ಲೂ ಸ್ವಲ್ಪ ಆತಂಕದ ವಾತಾವರಣವಿದ್ರೂ ಸರಾಗವಾಗಿ ಸರಣಿ ಮುಗಿಯಿತು.
2016ರ ಪ್ರವಾಸದಲ್ಲಿ ಜಯಲಲಿತಾ ನಿಧನ ಮತ್ತು ಚಂಡಮಾರುತ:
75 ದಿನಗಳಿಂದ ಆನಾರೋಗ್ಯದಿಂದ ಬಳಲುತ್ತಿದ್ದ ಜಯಲಲಿತಾ, ಡಿ.5ರಂದು ನಿಧನರಾದರು. ಹಾಗಾಗಿ ಅಲ್ಲಿ ನಡೆಯಬೇಕಿದ್ದ ರಣಜಿ ಪಂದ್ಯಗಳು ಸ್ಥಳಾಂತರವಾದವು. ಚೆನ್ನೈ ಸೇರಿದಂತೆ ಪೂರ್ವ ಕರಾವಳಿ ಭಾಗದಲ್ಲಿ ವಾರ್ಧ ಚಂಡಮಾರುತ ಅಬ್ಬರಿಸುತ್ತಿದೆ. 10ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ. ಡಿಸೆಂಬರ್ 16ರಿಂದ ಚೆನ್ನೈನಲ್ಲಿ ನಡೆಯುವ ಭಾರತ-ಇಂಗ್ಲೆಂಡ್ 5ನೇ ಟೆಸ್ಟ್ ನಡೆಯಬೇಕಿದೆ. ಆ ಪಂದ್ಯಕ್ಕೆ ಅಮ್ಮನ ಸಾವು ಮತ್ತು ಚಂಡಮಾರುತದ ಕರಿನೆರಳು ಬೀಳುವ ಸಾಧ್ಯತೆ ಇದೆ.
ಭಯ ಹುಟ್ಟಿಸುವ ಇಂಗ್ಲೆಂಡ್ ಪ್ರವಾಸ:
ಇಂಗ್ಲೆಂಡ್ ತಂಡ ಭಾರತ ಪ್ರವಾಸ ಕೈಗೊಂಡರೆ ಸಾಕು ಒಂದು ರೀತಿಯ ಭಯ ಶುರುವಾಗುತ್ತದೆ. ಇಂಗ್ಲೆಂಡ್ ತಂಡದ ವೇಳೆ ಭಾರತದಲ್ಲಿ ಏನೇನು ಅನಾಹುತವಾಗಿವೆಯೆಂಬುದು ಆಂಗ್ಲ ಆಟಗಾರರ ಪ್ರವಾಸದ ಇತಿಹಾಸ ತಿಳಿದವರಿಗೆ ಗೊತ್ತು. ಹಲವರಿಗೆ ಇದು ಕಾಕತಾಳಿಯವೆನಿಸಿದ್ರೂ ಇಂಗ್ಲೆಂಡ್ ಪ್ರವಾಸವಂತೂ ಎಂದು ಮರೆಯಲಾಗದ ಒಂದು ಅನುಭವ.
- ರವಿ ಎಸ್., ಸ್ಪೋರ್ಟ್ಸ್ ಬ್ಯೂರೋ, ಸುವರ್ಣನ್ಯೂಸ್
