ಮಳೆಯಾಗುತ್ತಿದ್ದರೂ ಬಿಸಿಲ ತಾಪಕ್ಕೆ ತತ್ತರಿಸಿವೆ ಹಲವು ಜಿಲ್ಲೆ
ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗುತ್ತಿದ್ದರೂ ಬಿಸಿಲಿನ ತಾಪದಿಂದ ಅಕ್ಷರಶಃ ತತ್ತರಿಸುತ್ತಿದ್ದಾರೆ. ರಣ ಬಿಸಿಲಿನಿಂದ ಜನ, ಜಾನುವಾರುಗಳು ಪರಿತಪಿಸುವಂತಾಗಿದೆ
ಕಲಬುರಗಿ: ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗುತ್ತಿದ್ದರೂ ಬಿಸಿಲಿನ ತಾಪದಿಂದ ಅಕ್ಷರಶಃ ತತ್ತರಿಸುತ್ತಿದ್ದಾರೆ. ರಣ ಬಿಸಿಲಿನಿಂದ ಜನ, ಜಾನುವಾರುಗಳು ಪರಿತಪಿಸುವಂತಾಗಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಗರಿಷ್ಠ ತಾಪಮಾನ ಕಳೆದ ವಾರಕ್ಕಿಂತ 1-2 ಡಿಗ್ರಿ ಏರಿಕೆಯಾಗಿದೆ.
ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ಯಡ್ರಾಮಿ ಹೋಬಳಿ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಮಂಗಳವಾರ 43.2 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ. ಇದು ಈ ತಿಂಗಳ ಸರಾಸರಿಗಿಂತ 2.3 ಡಿಗ್ರಿ ಹೆಚ್ಚಾಗಿದ್ದು, ಈ ವರ್ಷದ ಗರಿಷ್ಠ ತಾಪ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ಆದರೆ, ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ನೀಡುವ ಮಾಹಿತಿಯೇ ಬೇರೆ. ಕಲಬುರಗಿಯ ಹಲವೆಡೆ ಮಂಗಳವಾರ ಗರಿಷ್ಠ ತಾಪಮಾನ 44 ಡಿ. ಸೆ.ವರೆಗೆ ತಲುಪಿದೆ ಎಂದು ಕೇಂದ್ರದ ನಿರ್ದೇಶಕ ಶ್ರೀನಿವಾಸ ರೆಡ್ಡಿ ಹೇಳಿದ್ದಾರೆ.