ಬರಗಾಲದಿಂದ ತತ್ತರಿಸಿದ್ದ ಜಿಲ್ಲೆಗಳಲ್ಲಿ ಭಾರೀ ಮಳೆ: ಬಾಗೇಪಲ್ಲಿಯಲ್ಲಿ 15 ವರ್ಷದ ಬಳಿಕ ದಾಖಲೆ ಮಳೆ
ಸತತ ಬರಗಾಲಕ್ಕೆ ತುತ್ತಾಗಿದ್ದ ರಾಜ್ಯದ ಚಿಕ್ಕಬಳ್ಳಾಪುರ, ಕೋಲಾರ ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಈ ಬಾರಿ ವರುಣ ಅಬ್ಬರಿಸಿದ್ದಾನೆ. ವರುಣನ ಆರ್ಭಟ ರೈತರಿಗೆ ಖುಷಿ ನೀಡಿದ್ರೆ, ಇನ್ನೊಂದು ಕಡೆ ಹಲವು ಅವಾಂತರ ಸೃಷ್ಟಿಯಾಗಿದೆ. ಈ ಕುರಿತ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.
ಬೆಂಗಳೂರು(ಅ.10): ಚಿಕ್ಕಬಳ್ಳಾಪುರದಲ್ಲಿ ವರುಣರಾಯ ಅಬ್ಬರಿಸಿ ಬೊಬ್ಬರಿದಿದ್ದಾನೆ. ಜಿಲ್ಲೆಯ ಬಾಗೇಪಲ್ಲಿಯಲ್ಲಿ ಕಳೆದ 15 ವರ್ಷದ ಬಳಿಕ ದಾಖಲೆ ಮಳೆ ಇದಾಗಿದ್ದು, 126 ಗ್ರಾಮಗಳ ಕುಡಿಯುವ ನೀರು ಪೂರೈಸುವ ಚಿತ್ರಾವತಿ ಜಲಾಶಯ ಭರ್ತಿಯಾಗಲು ಇನ್ನೂ ಕೆಲವೇ ಅಡಿಗಳು ಬಾಕಿ ಉಳಿದಿದೆ.
ಚಾಮರಾಜನಗರದಲ್ಲಿ ಜಲಾವೃತ
ಚಾಮರಾಜನಗರ ಜಿಲ್ಲೆಯಲ್ಲೂ ಸಹ ವರುಣನ ಆರ್ಭಟ ಜೋರಾಗಿದೆ. ಪರಿಣಾಮ ಕೊಳ್ಳೇಗಾಲ - ಸತ್ಯಮಂಗಲ ರಾಜ್ಯ ಹೆದ್ದಾರಿಯ ತಟ್ಟೆಹಳ್ಳಕ್ಕೆ ಭಾರಿ ಪ್ರಮಾಣದ ನೀರು ಹರಿದು ಬಂದು ಹಳ್ಳ ಉಕ್ಕಿ ಹರಿಯುತ್ತಿದೆ. ಹೀಗಾಗಿ ರಸ್ತೆಯ ಮೇಲ್ಬಾಗದಲ್ಲಿ ನೀರು ಹರಿಯಲಾರಂಭಿಸಿದ್ದು ರಸ್ತೆ ಸಂಚಾರ ಅಸ್ತವ್ಯಸ್ಥಗೊಂಡಿದೆ. ಹೊಲ ಗದ್ದೆಗಳಿಗೆ ನೀರು ನುಗ್ಗಿ ಬೆಳೆಹಾನಿ ಸಹ ಆಗಿದೆ.
ಕೋಲಾರ ಜಿಲ್ಲೆಯಾದ್ಯಂತ ಎರಡು ಗಂಟೆಗಳ ಕಾಲ ಸುರಿದ ಭಾರಿ ಮಳೆ ತಗ್ಗು ಪ್ರದೇಶಗಳಲ್ಲಿ ಅವಾಂತರ ಸೃಷ್ಟಿಸಿದೆ. ಕೋಲಾರ ನಗರದ ಕೀಲುಕೋಟೆ ರೈಲ್ವೆ ಅಂಡರ್ ಪಾಸ್ ಬಳಿ ಇನೋವಾ ಕಾರೊಂದು ಮುಳುಗಿತ್ತು. ಕಾರಿನಲ್ಲಿ ಸಿಲುಕಿದ್ದ ಚಾಲಕ ಮತ್ತು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡರನ್ನ ಸ್ಥಳೀಯರ ಸಹಾಯದಿಂದ ಕಾರಿನ ಗಾಜು ಹೊಡೆದು ರಕ್ಷಿಸಲಾಯ್ತು.